ಬೆಂಗಳೂರು : ರಾಜ್ಯದಲ್ಲಿ ಮೇಗಶಿರಾ ಮಳೆಯ ಅಬ್ಬರಕ್ಕೆ ಮತ್ತೆ ಮೂವರು ಬಲಿಯಾಗಿದ್ದಾರೆ. ಹಲವಡೆ ಭೂಕುಸಿತ ಉಂಟಾಗಿ ಜನರು ಪರದಾಟ ನಡೆಸುವಂತಾಗಿದೆ.
ಶಿವಮೊಗ್ಗದಲ್ಲಿ ಭಾರೀ ಮಳೆಗೆ. ಆಡಗಡಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಸಿದ್ದಮ್ಮ (100) ಎಂಬ ವೃದ್ಧೆ ಮೃತಪಟ್ಟಿದ್ದಾರೆ, ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಎಲೆಕಲ್ಲು ಘಾಟಿ ಬಳಿ ಮರದ ಕೊಂಬೆ ಬಿದ್ದು, ಬೈಕ್ ಸವಾರ ಕಡಬಗೆರೆಯ ಅನಿಲ್ ರೋಜಾರಿಯೋ (50)ಮೃತಪಟ್ಟಿದ್ದಾರೆ.ಮಳೆಯಿಂದ ಮನೆ ಕುಸಿದು ಬಿದ್ದ ಪರಿಣಾಮ ಕಲಬುರಗಿ ಜಿಲ್ಲೆ ಜೇವರ್ಗಿ ಯಲ್ಲಿ 10 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.
ಸಕಲೇಶಪುರ ಬಳಿ ಶಿರಾಡಿ ಘಾಟ್, ಶೃಂಗೇರಿಯ ಸಾಲ್ಮರ, ಮಂಗಳೂರಿನ ಕದ್ರಿ ಸೇರಿ ಕೆಲವೆಡೆ ಭೂಕುಸಿತ ಉಂಟಾಗಿದ್ದು, ಸಾರಿಗೆ ಸಂಚಾರ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಕುಕ್ಕೆ ಸುಬ್ರ ಹ್ಮಣ್ಯದ ಸ್ನಾನಘಟ್ಟ, ಬೈಂದೂರಿನ ಕಂಬಳಗದ್ದೆ, ಹಳಗೇರಿ, ಮಂಗಳೂರಿನ ಮೊಗೂರು ಗ್ರಾಮ ಗಳು ಜಲಾವೃತಗೊಂಡಿವೆ.
ಇನ್ನು ಭಾರೀ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂದು ಉತ್ತರ ಕನ್ನಡ ಜಿಲ್ಲೆಯ 8 ತಾಲೂಕು ಹಾಗೂ ಉಡುಪಿ ಜಿಲ್ಲಾದ್ಯಂತ ಶಾಲೆಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ.