ತೆಲಂಗಾಣ : ದೇವಸ್ಥಾನಕ್ಕೆ ಭೇಟಿ ನೀಡುವ ಮುನ್ನ ಪವಿತ್ರ ಸ್ನಾನ ಮಾಡಲು ಬಾಸರಾದ ಸಮೀಪ ಗೋದಾವರಿ ನದಿಗಿಳಿದ ಐವರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ನಿನ್ನೆ ನಡೆದಿದೆ.
ಸುಮಾರು 20 ಜನರ ಗುಂಪು ಜನಪ್ರಿಯ ಜ್ಞಾನ ಸರಸ್ವತಿ ದೇವಾಲಯಕ್ಕೆ ಭೇಟಿ ನೀಡಲು ಹೈದರಾಬಾದ್ ನಿಂದ ಬಾಸರಕ್ಕೆ ಆಗಮಿಸಿತ್ತು.ದೇವಾಲಯಕ್ಕೆ ಭೇಟಿ ನೀಡುವ ಮುನ್ನ ಐವರು ಬಾಲಕರು ಪವಿತ್ರ ಸ್ನಾನ ಮಾಡಲು ನದಿಗಿಳಿದರು. ಈ ಸಂದರ್ಭ ನದಿ ನೀರಿನ ಮಟ್ಟ ಇದ್ದಕ್ಕಿದ್ದಂತೆ ಏರಿಕೆಯಾಯಿತು.
ಐವರು ಬಾಲಕರು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದರು ಎಂದು ಬಾಸಿನಾದ ಎಎಸ್ಪಿ ಅವಿನಾಶ್ ಕುಮಾರ್ ತಿಳಿಸಿದ್ದಾರೆ. ಅನಂತರ ರಕ್ಷಣಾ ತಂಡ ಐವರ ಬಾಲಕರನ್ನು ಪತ್ತೆ ಹಚ್ಚಿತು ಹಾಗೂ ಸಮೀಪದ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದಿತು. ಆದರೆ, ವೈದ್ಯರು ಎಲ್ಲಾ ಐವರು ಬಾಲಕರು ಆಸ್ಪತ್ರೆಗೆ ತರುವ ಮುನ್ನವೇ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದರು.