ಬೆಂಗಳೂರು : ರಾಜ್ಯಾದ್ಯಂತ ಶಾಲೆಗಳು ಪುನಾರಂಭವಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ ಸಂಬಂಧಿಸಿದ ಪೋಸ್ಟರ್ ಗಳನ್ನು ಪ್ರದರ್ಶಿಸುವ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಶಾಲೆಗಳಲ್ಲಿ ದಾಖಲಾತಿಗೆ ಸಂಬಂಧಿಸಿದ ಪೋಸ್ಟರ್ ಅನ್ನು, ಶಾಲಾ ಮುಂಭಾಗ, ಗ್ರಾಮ ಪಂಚಾಯಿತಿ ಬಸ್ ಸ್ಟ್ಯಾಂಡ್ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ಪಾಲಕರಿಗೆ, ಊರ ಜನರಿಗೆ, ನಾಗರಿಕರಿಗೆ ಕಾಣುವಂತೆ ಪ್ರದರ್ಶಿಸಲು ಕ್ರಮ ಕೈಗೊಳ್ಳುವುದು.
ಸರ್ಕಾರಿ ಶಾಲೆಗಳಲ್ಲಿ ಉಚಿತ ದಾಖಲಾತಿ, ಪಠ್ಯಪುಸ್ತಕ, ಸಮವಸ್ತ್ರ, ಶೂ ಮತ್ತು ಸಾಕ್ಸ್ ಉಚಿತವಾಗಿ ನೀಡಲಾಗುವುದು. ಪ್ರತಿದಿನ ಮಧ್ಯಾಹ್ನ ಬಿಸಿಯೂಟ, ವಾರದಲ್ಲಿ ಆರು ದಿನ ಮೊಟ್ಟೆ, ಬಾಳೆಹಣ್ಣು, ಕ್ಷೀರ ಭಾಗ್ಯದ ಜೊತೆಗೆ ರಾಗಿ ಮಾಲ್ಟ್ ವಿತರಣೆ ಸೇರಿ ಸರ್ಕಾರಿ ಶಾಲೆಗಳಲ್ಲಿನ ಇತರೆ ಸೌಲಭ್ಯ, ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ಇರುವ ಕಲಿಕಾ ಚಿಲುಮೆ, ಗಣಿತ ಗಣಕ, ಓದು ಕರ್ನಾಟಕ, ಕಲಿಕಾ ದೀಪ, ಜ್ಞಾನ ಸೇತು, ವಿದ್ಯಾ ವಿಜೇತ ಮೊದಲಾದ ಕಾರ್ಯಕ್ರಮಗಳ ಮಾಹಿತಿ ಒಳಗೊಂಡಂತೆ ಪೋಸ್ಟರ್ ಸಿದ್ಧಪಡಿಸಲಾಗಿದೆ.
2024 -25 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳಿಸಿದ ಶಿರಸಿಯ ಸರ್ಕಾರಿ ಉರ್ದು ಪ್ರೌಢಶಾಲೆಯ ಶಗುಪ್ತ ಅಂಜುಂ, ಬೆಳಗಾವಿ ಜಿಲ್ಲೆ ದೇವಲಾಪುರದ ಸರ್ಕಾರಿ ಪ್ರೌಢಶಾಲೆಯ ರೂಪಾ ಚೆನ್ನೇಗೌಡ ಪಾಟೀಲ್ ಅವರ ಸಾಧನೆಯನ್ನು ಪೋಸ್ಟರ್ ನಲ್ಲಿ ಪ್ರದರ್ಶಿಸಲು ನಿರ್ದೇಶನ ನೀಡಲಾಗಿದೆ.