ಬೆಂಗಳೂರು: ರಾಜ್ಯದ ಇತಿಹಾಸದಲ್ಲೇ 1,000 ಜನ ಗ್ರಾಮ ಆಡಳಿತ ಅಧಿಕಾರಿಗಳ ನೇಮಕಕ್ಕೆ ಒಂದೇ ಹಂತದಲ್ಲಿ ಆದೇಶ ಹೊರಡಿಸಿದ್ದು ಇದೇ ಮೊದಲು. ಅಲ್ಲದೆ, ಒಂದು ಪೈಸೆಯೂ ಲಂಚಕ್ಕೆ ಆಸ್ಪದ ನೀಡದೆ ಪಾರದರ್ಶಕವಾಗಿ ನೇಮಕ ಮಾಡಲಾಗಿದೆ ಎಂದು ಹೇಳಲು ಸಂತಸವಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್ನಲ್ಲಿ ನೂತನವಾಗಿ ಆಯ್ಕೆಯಾಗಿರುವ 1,000 ಗ್ರಾಮ ಆಡಳಿತ ಅಧಿಕಾರಿಗಳಿಗೆ ನೇಮಕಾತಿ ಆದೇಶ, ಕಂದಾಯ ಇಲಾಖೆಯನ್ನು ಸಂಪೂರ್ಣ ಡಿಜಿಟಲೀಕರಿಸುವ ನಿಟ್ಟಿನಲ್ಲಿ 4,000 ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಣಾ ಹಾಗೂ ಕಂದಾಯ ಇಲಾಖೆಯ ಎರಡು ವರ್ಷದ ʼಸಾಧನೆಯ ಹಾದಿʼ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ರಾಜ್ಯದ ಇತಿಹಾಸದಲ್ಲೇ ಏಕ ಕಾಲದಲ್ಲಿ ಸಾವಿರ ಜನರ ನೇಮಕ ಇದೆ ಮೊದಲು. ಇದೊಂದು ದಾಖಲೆ. ಈ ಹಿಂದೆ ಪಿಯುಸಿ ಅಂಕದ ಆಧಾರದಲ್ಲಿ ಆಯಾ ಜಿಲ್ಲೆಯಲ್ಲಿ ಸೀಮಿತ ಸ್ಥಾನಗಳಿಗೆ ನೇಮಕಾತಿ ಆಗುತ್ತಿತ್ತು. ಆದರೆ, ಹುದ್ದೆ ನೇಮಕಾತಿ ಪ್ರಕ್ರಿಯೆಯಲ್ಲಿ ಹಲವು ಜಿಲ್ಲೆಗಳಲ್ಲಿ ಪಾರದರ್ಶಕತೆ ಇಲ್ಲ ಎಂಬ ದೂರು ಇತ್ತು. ಹೀಗಾಗಿ ನಮ್ಮ ಸರ್ಕಾರ ಬಂದ ಮೇಲೆ ಇಡೀ ರಾಜ್ಯದಲ್ಲಿ ಒಂದೇ ಬಾರಿ ಪಾರದರ್ಶಕವಾಗಿ ನೇಮಕವಾಗಬೇಕು, ಎಲ್ಲ ಜಿಲ್ಲೆಯವರಿಗೂ ಸಮಾನ ಸವಕಾಶ ಸಿಗಬೇಕು ಎಂಬ ದೃಷ್ಟಿಯಲ್ಲಿ ಕ್ರಮವಹಿಸಲಾಗಿತ್ತು” ಎಂದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಒಂದೇ ಬಾರಿ ಅರ್ಜಿ ಕರೆದು, ಒಂದೇ ಬಾರಿ ಪರೀಕ್ಷೆ ನಡೆಸಿ ಮಧ್ಯವರ್ತಿಗಳ ಅವಕಾಶ ಇಲ್ಲದೆ ನೇಮಕಾತಿ ಮಾಡಿದ್ದೇವೆ. ಈ ಹುದ್ದೆಗೆ 6,33,916 ಜನ ಅರ್ಜಿ ಸಲ್ಲಿಸಿದ್ದರು. ಭಾಗಶಃ ಕರ್ನಾಟಕ ಬೇರೆ ಯಾವುದೇ ನೇಮಕಾತಿಗೆ ಇಷ್ಟು ಅರ್ಜಿ ಬಂದಿಲ್ಲ. ಇಲ್ಲಿ ಕೆಲಸ ಗಿಟ್ಟಿಸಿದವರು ಎಷ್ಟು ಪುಣ್ಯವಂತರೆಂದರೆ ಅರ್ಜಿ ಸಲ್ಲಿಸಿದವರ ಪೈಕಿ ಶೇ. 0.0016 ಜನ ಮಾತ್ರ ಆಯ್ಕೆಯಾಗಿದ್ದೀರಿ” ಎಂದು ತಿಳಿಸಿದರು.
ಮುಂದುವರೆದು, “ಗ್ರಾಮ ಆಡಳಿತ ಅಧಿಕಾರಿ ಕೆಲಸಕ್ಕೆ ಶಿಫಾರಸು ಮಾಡುವಂತೆ ಏಳೆಂಟು ಜನ ನನ್ನ ಬಳಿಯೂ ಬಂದಿದ್ದರು. ಆದರೆ, ನಾನೇ ಮನಸ್ಸು ಮಾಡಿದರೂ ಶಿಫಾರಸು ಮಾಡಲು ಸಾಧ್ಯವಾಗದಂತೆ ಪಾರದರ್ಶಕವಾಗಿ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಯ ಉತ್ತರ ಪತ್ರಿಕೆ ತಿದ್ದುವುದು ಸೇರಿದಂತೆ ಯಾವ ಅಕ್ರಮ ಚಟುವಟಿಕೆಗಳಿಗೂ ಆಸ್ಪದ ಇಲ್ಲದಂತೆ ಪರೀಕ್ಷೆ ನಡೆಸಲಾಗಿದೆ. ಇಲ್ಲಿ ಕೆಲಸ ಗಿಟ್ಟಿಸಿದವರು ಹುದ್ದೆಗಾಗಿ ಒಂದು ಪೈಸೆಯಾದರೂ ಯಾರಿಗಾದರೂ ಲಂಚ ಕೊಟ್ಟಿದ್ದೀರ . ಇದೇ ಕಾರಣಕ್ಕೆ ಈ ಬಗ್ಗೆ ಈವರೆಗೆ ಒಂದೂ ತಕರಾರು ಬಂದಿಲ್ಲ. ಒಂದು ಪೈಸೆಯೂ ಲಂಚ ಇಲ್ಲದೆ ಹುದ್ದೆ ನೀಡಿದ್ದೇವೆ ಎಂದು ಹೇಳಲು ನನಗೂ ಸಂತೋಷವಾಗುತ್ತದೆ” ಎಂದು ಹರ್ಷ ವ್ಯಕ್ತಪಡಿಸಿದರು
ಈ ಕಾರ್ಯಕ್ರಮವನ್ನು ಸ್ಥಳದ ಅಭಾವದ ನೆಪವೊಡ್ಡೆ ಬೇರೆಡೆ ಸ್ಥಳಾಂತರಿಸಲು ಅಧಿಕಾರಿಗಳು ಸೂಚಿಸಿದರು. ಆದರೆ, ನಾನು ಈ ಸಿಎಂ ಅವರ ಕೈಯಿಂದಲೇ ಎಲ್ಲಾ ಅಧಿಕಾರಿಗಳಿಗೂ ವಿಧಾನಸೌಧದಲ್ಲೇ ಆದೇಶ ಪ್ರತಿ ನೀಡಬೇಕು ಎಂದು ಹೇಳಿ ಸಿದ್ದರಾಮಯ್ಯನವರನ್ನು ಒಪ್ಪಿಸಿದೆ. ಮೊದಲ ಬಾರಿಗೆ ಸಾವಿರ ಜನ ಸರ್ಕಾರಿ ಸೇವೆಗೆ ಕಾಲಿಡುತ್ತಿದ್ದಾರೆ. ಅವರು ಮೊದಲ ಸಲ ವಿಧಾನಸೌಧಕ್ಕೆ ಕಾಲಿಟ್ಟರೆ ಅವರಿಗೆ ವಿಧಾನಸೌಧ ಕಟ್ಟಿದ ಆಶಯ ಅರ್ಥವಾಗುತ್ತೆ, ಆಗಲಾದರೂ ಅವರು ಜನಪರ ಕೆಲಸ ಮಾಡುತ್ತಾರೆ ಎಂಬ ಉದ್ದೇಶದಿಂದಲೇ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಲಾಗಿದೆ” ಎಂದರು.
ನೂತನವಾಗಿ ಆಯ್ಕೆಯಾಗಿರುವ ಅಧಿಕಾರಿಗಳಿಗೂ ಕಿವಿಮಾತು ಹೇಳಿದ ಅವರು, “ವಿಧಾನಸೌಧದಲ್ಲಿ ಆದೇಶ ಪ್ರತಿ ಸ್ವೀಕರಿಸುತ್ತಿರುವ ಹೊಸ ಉದ್ಯೋಗಿಗಳಿಗೂ ಈ ಸಂದರ್ಭದಲ್ಲಿ ಅರಿವು ಇರಬೇಕು ಎಂಬ ಕಾರಣಕ್ಕೆ ಆದೇಶ ಪ್ರತಿಯನ್ನು ಸಿಎಂ ಸಿದ್ದರಾಮಯ್ಯ ಅವರ ಕೈಯಿಂದ ನೀಡಲಾಗುತ್ತಿದೆ. ಬಹುತೇಕರು ಸರ್ಕಾರಿ ಕೆಲಸ ಗಿಟ್ಟಿಸಿದ ಕುಟುಂಬದ ಮೊದಲಿಗರಾಗಿದ್ದಾರೆ. ಈ ಹುದ್ದೆಗೆ ನೀವು ಋಣ ತೀರಿಸಬೇಕು ಎಂತಿದ್ದರೆ ಜನರ ಪ್ರಮಾಣಿಕ ಸೇವೆ ಮಾಡುವ ಮೂಲಕ ಈ ಋಣ ತೀರಿಸಿ” ಎಂದರು.