ಬೆಂಗಳೂರು: ಶಿಕ್ಷಣ, ಆರೋಗ್ಯ ಮತ್ತು ಪರಿಸರ ಸಂರಕ್ಷಣಾ ಕ್ಷೇತ್ರದಲ್ಲಿ ಹಾಗೂ ಸ್ತ್ರೀಸಬಲೀಕರಣಕ್ಕಾಗಿ ಬಯೋಕಾನ್ ಸಂಸ್ಥೆಯ ಸೇವೆ ಶ್ಲಾಘನೀಯ ಎಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಅವರು ಹೇಳಿದರು.
ಬಯೋಕಾನ್ ಫೌಂಡೇಷನ್ನ 20ನೇ ವಾರ್ಷಿಕೋತ್ಸವದ ಪ್ರಯುಕ್ತ ಬಯೋಕಾನ್ ಪಾರ್ಕ್ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಫೌಂಡೇಷನ್ ಸ್ಮರಣಿಕೆ ಬಿಡುಗಡೆ ಮಾಡಿ ಮಾತನಾಡಿದರು.
ಆರೋಗ್ಯ ಕ್ಷೇತ್ರ ಅತ್ಯಂತ ಪವಿತ್ರವಾದ ಕ್ಷೇತ್ರವಾಗಿದ್ದು, ಇಲ್ಲಿ ವ್ಯಾಪಾರೀಕರಣವಾಗದೇ ಸೇವಾ ಮನೋಭಾವವನ್ನು ಹೊಂದಿರಬೇಕು. ರೋಗಿಯ ಪ್ರಾಣ ಉಳಿಸುವುದು ಮೊದಲ ಆದ್ಯತೆ ಆಗಬೇಕು, ಇದರಿಂದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಬಯೋಕಾನ್ 20 ವರ್ಷದಿಂದ ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಬಯೋಕಾನ್ ಸಂಸ್ಥೆಯು ಸಂಶೋಧನೆ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿಯೂ ತನ್ನ ಛಾಪನ್ನು ಮೂಡಿಸಿದೆ. ಅಷ್ಟೇ ಅಲ್ಲದೆ, ದೇಶದಲ್ಲಿ ಸಾಕಷ್ಟು ಜೀವರಕ್ಷಕ ಔಷಧಿಗಳ ಬೆಲೆ ಕಡಿಮೆಗೊಳಿಸುವಲ್ಲಿಯೂ ಬಯೋಕಾನ್ ಪಾತ್ರ ಅನನ್ಯವಾದದ್ದು. ಅದರ ಜೊತೆಗೆ ಆರೋಗ್ಯ ಸೇವೆ, ಶಿಕ್ಷಣ, ಮೂಲಸೌಕರ್ಯ ಮತ್ತು ಪರಿಸರದ ಸುಸ್ಥಿರತೆ ಸೇರಿದಂತೆ ಸಮಾಜದ ಹಿತ ಕಾಪಾಡುವ ನಿಟ್ಟಿನಲ್ಲಿ ಸಿಎಸ್ಆರ್ ಅಡಿಯಲ್ಲಿ ಈಗಾಗಲೇ ಸಾಕಷ್ಟು ಸೇವೆ ಸಲ್ಲಿಸುತಾ ಬಂದಿದೆ ಎಂದರು.
ಬಯೋಕಾನ್ ಸಮೂಹ ಸಂಸ್ಥೆಗಳ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಮಾತನಾಡಿ, ಕಳೆದ ಎರಡು ದಶಕಗಳಿಂದ ಬಯೋಕಾನ್ ಫೌಂಡೇಷನ್ ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸುತ್ತಾ ಬಂದಿದೆ. ಬಡವರಿಗೆ ಆರೋಗ್ಯ ಸೇವೆ ನೀಡಲು ಇಲಾಜ್ ಸ್ಮಾರ್ಟ್ ಕ್ಲಿನಿಕ್ ಗಳು ಪ್ರಾರಂಭಿಸಿದ್ದು, ಪ್ರಾಥಮಿಕ ಆರೋಗ್ಯ ರಕ್ಷಣೆಯಲ್ಲಿ ಕ್ರಾಂತಿಯನ್ನುಂಟು ಮಾಡಿವೆ, ಇದರಿಂದ ಕರ್ನಾಟಕದಾದ್ಯಂತ ಒಂದು ದಶಲಕ್ಷಕ್ಕೂ ಹೆಚ್ಚು ಜನರಿಗೆ ಆರೋಗ್ಯ ಸೇವೆಯನ್ನು ಕಲ್ಪಿಸಿಕೊಡಲಾಗಿದೆ ಎಂದರು.
2004ರಲ್ಲಿ ಸ್ಥಾಪನೆಯಾದ ಬಯೋಕಾನ್ ಫೌಂಡೇಶನ್, ಆರೋಗ್ಯ, ಶಿಕ್ಷಣ, ಪರಿಸರ ಸಂರಕ್ಷಣೆ, ಗ್ರಾಮೀಣ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಭಾರತದಾದ್ಯಂತ 2.8 ದಶಲಕ್ಷಕ್ಕೂ ಹೆಚ್ಚು ಜನರ ಜೀವನದಲ್ಲಿ ಸುಧಾರಣೆಯನ್ನು ತರಲು ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳುವ ನಿರ್ಧಾರವನ್ನು ಸಹ ಈ ಸಮಾರಂಭದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಸಮಾರಂಭದಲ್ಲಿ ಫೌಂಡೇಶನ್ ತನ್ನ 20 ನೇ ವಾರ್ಷಿಕ ವರದಿಯನ್ನು ಅನಾವರಣಗೊಳಿಸಿತು. ಸಮಾಜದ ಮೇಲೆ ಅರ್ಥಪೂರ್ಣ ಪರಿಣಾಮ ಬೀರುವ 20 ವರ್ಷಗಳ ಪ್ರಯಾಣವನ್ನು ಎತ್ತಿ ತೋರಿಸುವ ವಿಶೇಷ ಚಲನಚಿತ್ರವನ್ನು ಪ್ರದರ್ಶಿಸಿತು.
ಬಯೋಕಾನ್ ಫೌಂಡೇಷನ್ನ 20ನೇ ವಾರ್ಷಿಕೋತ್ಸವದ ಪ್ರಯುಕ್ತ ಬಯೋಕಾನ್ ಪಾರ್ಕ್ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಂಸದರಾದ ಡಾ. ಸಿ.ಎನ್. ಮಂಜುನಾಥ್, ಬಯೋಕಾನ್ ಸಮೂಹದ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ, ಬಯೋಕಾನ್ ಫೌಂಡೇಶನ್ನ ಮಿಷನ್ ಡೈರೆಕ್ಟರ್ ಡಾ. ಅನುಪಮಾ ಶೆಟ್ಟಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ನೈಋತ್ಯ ರೈಲ್ವೆ ವಲಯದ ನೂತನ ಪ್ರಧಾನ ವ್ಯವಸ್ಥಾಪಕರಾಗಿ ‘ಮುಕುಲ್ ಸರನ್ ಮಾಥೂರ್’ ಅಧಿಕಾರ ಸ್ವೀಕಾರ
BIG NEWS: ಸಾಗರದ ‘ಹೈವೇ ರಸ್ತೆ ಕಾಮಗಾರಿ ಕಳಪೆ’ಯಿಂದ ಕೂಡಿದ್ದರೇ ‘ಡೆಮಾಲಿಷ್’: ಮುಖ್ಯ ಇಂಜಿನಿಯರ್ ಜಗದೀಶ್