ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ಹೈಕೋರ್ಟ್ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿತ್ತು. ಈ ಒಂದು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿಯನ್ನು ಸಹ ವಜಾ ಗೊಳಿಸಿತ್ತು. ಇದೀಗ ಇದೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತ ಅಂತಿಮ ವರದಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕುಟುಂಬಸ್ಥರೇ ಸಂತ್ರಸ್ತರಾಗಿದ್ದಾರೆ ಎಂದು ಉಲ್ಲೇಖಿಸಿದೆ.
ಹೌದು ಎಂ ಮತ್ತು ಕುಟುಂಬದ ವಿರುದ್ಧದ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಂತಿಮ ವರದಿ ತಯಾರಿಸಿದ್ದು, ವರದಿಯಲ್ಲಿ ಸಿಎಂ ಕುಟುಂಬಕ್ಕೆ ಕ್ಲೀನ್ಚಿಟ್ ಕೊಡುವ ಜೊತೆಗೆ ಸಿಎಂ ಕುಟುಂಬವೇ ಸಂತ್ರಸ್ತರು ಎಂದು ಲೋಕಾಯುಕ್ತ ಉಲ್ಲೇಖಿಸಿರುವುದಾಗಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಅಲ್ಲದೇ ಮುಡಾದ ಮಾಜಿ ಆಯುಕ್ತ ನಟೇಶ್ ಈ ಪ್ರಕರಣ ಪ್ರಮುಖ ಆರೋಪಿ ಎಂದು ಕೂಡ ಉಲ್ಲೆಖಿಸಿದೆ.
ಮೈಸೂರಿನ ಕೆಸರೆಯಲ್ಲಿನ ತಮ್ಮ ಜಮೀನಿಗೆ ಬದಲಿಯಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಿಜಯನಗರದ 3 ಮತ್ತು 4ನೇ ಹಂತಗಳಲ್ಲಿ ವಿವಿಧ ಅಳತೆಯಲ್ಲಿ ಸಿಎಂ ಕುಟುಂಬಕ್ಕೆ 14 ನಿವೇಶನಗಳನ್ನ ಹಂಚಿಕೆ ಮಾಡಿತ್ತು. ಇದರಲ್ಲಿ ಅಕ್ರಮ ನಡೆದಿದೆ ಎಂದು ಪ್ರಕರಣ ದಾಖಲಾದ ಬಳಿಕ ಹೈಕೋರ್ಟ್ ಲೋಕಾಯುಕ್ತ ತನಿಖೆಗೆ ನೀಡಿತ್ತು.
ಲೋಕಾಯುಕ್ತ ತನಿಖೆಯ ವರದಿಯಲ್ಲಿ ಏನಿದೆ?
2004ರಲ್ಲಿ ಮಲ್ಲಿಕಾರ್ಜುನಸ್ವಾಮಿ ಜಮೀನು ಖರೀದಿ ಮಾಡುವಾಗ ಯಾವುದೇ ಕಾನೂನು ತೊಡಕು ಇರಲಿಲ್ಲ. 5 ಲಕ್ಷದ 95,000 ರೂಪಾಯಿ ಹಣಕ್ಕೆ 3 ಎಕರೆ 26 ಗುಂಟೆ ಜಮೀನು ಖರೀದಿ ಮಾಡಿದ್ದಾರೆ. 3 ಎಕರೆ ಜಮೀನು ಖರೀದಿ ಮಾಡುವಾಗ ಯಾವುದೇ ಕಾನೂನು ಬಾಹಿರ, ನೊಂದಣಿ ಶುಲ್ಕದಲ್ಲಿ ಮೋಸ ಮಾಡಿಲ್ಲ. 2010 ರಲ್ಲಿ ಕೂಡ ದಾನ ಪತ್ರ ನೀಡುವಾಗ ಕೂಡ ಕಾನೂನಾತ್ಮವಾಗಿದೆ. ಕೆಸರೆಯ ಜಮೀನನ್ನು ಮುಡಾ ವಶಕ್ಕೆ ಪಡೆಯುವಾಗ ನಿಯಮ ಪ್ರಕಾರವೇ ಇದೆ. ಆದ್ರೆ 14 ಸೈಟುಗಳನ್ನ ಮರು ಹಂಚಿಕೆ ಮಾಡುವಾಗ ಕಾನೂನು ಬಾಹಿರ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಭೂ ಮಾಲೀಕ ಎನ್ನಲಾದ ದೇವರಾಜು ಭೂಮಿ ಮಾರುವಾಗ ಸಾಕಷ್ಟು ಮಾಹಿತಿ ಮುಚ್ಚಿಟ್ಟಿದ್ರು. ಭೂಮಿಯನ್ನು ಮುಡಾ ವಶಕ್ಕೆ ಪಡೆದಿದ್ದ ಮಾಹಿತಿಯನ್ನೂ ಮುಚ್ಚಿಟ್ಟಿದ್ರು. ಈ ವಿಷಯ ತಿಳಿಯದೇ ಮಲ್ಲಿಕಾರ್ಜುನ್ ದೇವರಾಜು ಬಳಿಯಲ್ಲಿ ಜಮೀನು ಖರೀದಿ ಮಾಡಿದ್ದಾರೆ. ಆದ್ರೆ ಅಂದಿನ ಮುಡಾ ಆಯುಕ್ತರಾಗಿದ್ದ ನಟೇಶ್ ಸರ್ಕಾರದ ನಡಾವಳಿಯನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ ಎಂದು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.
ಸಿಎಂ ಮತ್ತು ಕುಟುಂಬದ ಸದಸ್ಯರು ಈ ಪ್ರಕರಣದಲ್ಲಿ ಸಂತ್ರಸ್ತರಾಗಿದ್ದಾರೆ. ಭೂಮಿ ಖರೀದಿ ಮಾಡುವಾಗ ಆಗಲಿ, ದಾನ ಮಾಡುವಾಗ ಆಗಲಿ ಯಾವುದೇ ಪ್ರಭಾವ ಬೀರಿಲ್ಲ. ಸಿಎಂ ಸಿದ್ದರಾಮಯ್ಯ ಸಹ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದಾಗಲಿ ಪ್ರಭಾವ ಬೀರಿರುವುದಾಗಲಿ ಸಾಕ್ಷ್ಯ ಸಿಕ್ಕಿಲ್ಲ. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿಯೂ ಪ್ರಭಾವ ಬೀರಿರೋದಕ್ಕೆ ಸಾಕ್ಷ್ಯಗಳು ಇಲ್ಲ ಎಂದು ಹೇಳಿದೆ.