ಬೆಂಗಳೂರು : ಎಲ್ಲವೂ ಫ್ರೀಯಾಗಿ ಕೊಡುತ್ತಾ ಹೋದರೆ ಸರ್ಕಾರ ನಡೆಸುವುದು ಹೇಗೆ? ಎಂದು ಇತ್ತೀಚಿಗೆ ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರಿನಲ್ಲಿ ಕಾವೇರಿ ನೀರಿನ ದರ ಏರಿಕೆ ವಿಚಾರವಾಗಿ ನಡೆದ ಸಭೆಯಲ್ಲಿ ಹೇಳಿಕೆ ನೀಡಿದ್ದರು. ಇದೀಗ ಜಲಮಂಡಳಿ ನೀರಿನ ದರ ಏರಿಕೆ ಕುರಿತಂತೆ 3 ಮಾದರಿ ದರ ಪರಿಷ್ಕರಣೆಯ ಪಟ್ಟಿಗಳನ್ನು ಒಳಗೊಂಡ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದು, ಶೀಘ್ರದಲ್ಲಿ ದರ ಏರಿಕೆ ಆದೇಶ ಹೊರಬೀಳುವ ಸಾಧ್ಯತೆ ಇದೆ.
ಹೌದು ಕಾವೇರಿ ನೀರಿನ ದರ ಏರಿಕೆಗೆ ಸಂಬಂಧಿಸಿದಂತೆ ಹೊಸದಾಗಿ ಪ್ರಸ್ತಾವನೆ ಸಲ್ಲಿಸುವಂತೆ ಬೆಂಗಳೂರು ಅಭಿವೃದ್ಧಿ ಸಚಿವ ಡಿ. ಕೆ.ಶಿವಕುಮಾರ್ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರು ಜಲಮಂಡಳಿಯ ಅಧಿಕಾರಿಗಳು ಇದೀಗ ಪ್ರಸ್ತಾವನೆ ಸಿದ್ದಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಒಂದೆರಡು ದಿನದಲ್ಲಿ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರ ಅನುಮೋದನೆ ನೀಡುವ ಸಾಧ್ಯತೆ ಇದೆ.
ಜಲ ಮಂಡಳಿಯು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಕಳೆದ 14 ವರ್ಷದಿಂದ ನಗರದಲ್ಲಿ ನೀರಿನ ದರ ಪರಿಷ್ಕರಣೆ ಮಾಡಿಲ್ಲ. ಮಂಡಳಿಯು ಪ್ರತಿ ತಿಂಗಳು ವೆಚ್ಚ, ಸಂಗ್ರಹ, ಮಂಡಳಿ ಅನುಭವಿಸುತ್ತಿರುವ ನಷ್ಟಕ್ಕೆ ಅನುಗುಣವಾಗಿ ನೀರಿನ ದರ ಹೆಚ್ಚಳಕ್ಕೆ ಅವಕಾಶ ನೀಡುವಂತೆ ಕೋರಲಾಗಿದೆ ಎಂದು ತಿಳಿದು ಬಂದಿದೆ.
ಜಲಮಂಡಳಿಯ ಮೂಲಗಳು ತಿಳಿಸಿರುವ ಪ್ರಕಾರ, ವಸತಿ, ವಾಣಿಜ್ಯ ಹಾಗೂ ಇತರೆ ಒಟ್ಟು ಮೂರು ಮಾದರಿಯ ದರ ಪರಿಷ್ಕರಣೆ ಪಟ್ಟಿಯನ್ನು ಸಲ್ಲಿಸಲಾಗಿದೆ. ರಾಜ್ಯ ಸರ್ಕಾರವೂ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ಹಾಗಾಗಿ ಇನ್ನೆರಡು ದಿನಗಳಲ್ಲಿ ಬೆಂಗಳೂರಿನಲ್ಲಿ ಕಾವೇರಿ ನೀರಿನ ದರ ಏರಿಕೆಯಾಗುವ ಸಾಧ್ಯತೆಯಿದ್ದು ಬೇಸಿಗೆ ಆರಂಭಕ್ಕೂ ಮುನ್ನ ಬೆಂಗಳೂರ ಜನತೆಗೆ ಬಿಗ್ ಶಾಕ್ ನೀಡಲು ಸರ್ಕಾರ ಮುಂದಾಗಿದೆ.