ಉತ್ತರಕನ್ನಡ : ಮುರುಡೇಶ್ವರ ಕಡಲ ತೀರದಲ್ಲಿ ಪ್ರವಾಸಿಗರಿಗೆ ನಿರ್ಬಂಧಿಸಿ ಪೊಲೀಸರು ಇದೀಗ ಕ್ರಮ ಕೈಗೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಕಡಲ ತೀರಕ್ಕೆ ತೆರಳದಂತೆ ಪ್ರವಾಸಿಗರಿಗೆ ಪೊಲೀಸರು ಇದೀಗ ಸೂಚನೆ ನೀಡಿದ್ದಾರೆ.ಕಡಲ ತೀರಕ್ಕೆ ಹೋಗಿದ್ದ ಪ್ರವಾಸಿಗರನ್ನು ಪೊಲೀಸರು ತಡೆದಿದ್ದಾರೆ.ನಿನ್ನೆ ಸಂಜೆ ಸಮುದ್ರ ಪಾಲಾಗಿದ್ದ ನಾಲ್ವರು ವಿದ್ಯಾರ್ಥಿನಿಯರ ಪೈಕಿ ಓರ್ವಳ ಶವ ಪತ್ತೆಯಾಗಿದೆ. ಮೂವರ ಮೃತ ದೇಹಕ್ಕಾಗಿ ಶೋಧ ಕಾರ್ಯ ಇದೀಗ ಮುಂದುವರೆದಿದೆ.
ಘಟನೆ ಹಿನ್ನೆಲೆ?
ನಿನ್ನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಮುರಾರ್ಜಿ ದೇಸಾಯಿ ಶಾಲೆಯ ಶಾಲಾ ವಿದ್ಯಾರ್ಥಿನಿಯರನ್ನು ಶೈಕ್ಷಣಿಕ ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಕರೆದೊಯ್ಯಲಾಗಿತ್ತು. ಇಲ್ಲಿನ ಸಮುದ್ರದಲ್ಲಿ ಆಟವಾಡುತ್ತಿದ್ದಂತ ಸಂದರ್ಭದಲ್ಲಿ ಅಲೆಗಳ ಹೊಡೆತದಿಂದ 7 ವಿದ್ಯಾರ್ಥಿನಿಯರು ಕೊಚ್ಚಿ ಹೋಗಿದ್ದಾರೆ. ಇವರಲ್ಲಿ ಲೈಫ್ ಗಾರ್ಡ್ ಸಿಬ್ಬಂದಿ ಮೂವರನ್ನು ರಕ್ಷಣೆ ಮಾಡಿದ್ದಾರೆ. ಆದರೇ ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾರೆ.
ಮೃತ ವಿದ್ಯಾರ್ಥಿನಿಯನ್ನು ಶ್ರವಂತಿ ಗೋಪಾಲಪ್ಪ(15) ಎಂದು ಗುರುತಿಸಲಾಗಿದೆ. ಉಳಿದ ಮೂವರು ವಿದ್ಯಾರ್ಥಿನಿಯರಾದ ಯಶೋಧಾ, ವೀಕ್ಷಣಾ ಹಾಗೂ ಲಿಪಿಕಾ ಎಂಬುವರನ್ನು ರಕ್ಷಇಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನುಳಿದಂತ ದೀಕ್ಷಿತಾ, ಲಾವಣ್ಯ ಹಾಗೂ ಮತ್ತೊಬ್ಬರು ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ. ಅವರ ಪತ್ತೆಗೆ ಕಾರ್ಯಾಚರಣೆಯನ್ನು ಇಂದು ಮುಂದುವರೆಸಲಾಗುತ್ತದೆ ಎನ್ನಲಾಗುತ್ತಿದೆ.








