ಬೆಳಗಾವಿ : ಬೆಳಗಾವಿಯಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಎರಡು ಏರಿಯಾಗಳ ಯುವಕರ ನಡುವೆ ಗಲಾಟೆಯಾಗಿದ್ದು, ನಾಲ್ವರು ಯುವಕರ ಮೇಲೆ ತಲ್ವಾರ್ ದಾಳಿಯಾಗಿದೆ.
ಬೆಳಗಾವಿ ನಗರದ ರುಕ್ಮಿಣಿ ನಗರದಲ್ಲಿ ಕ್ಷುಲ್ಲಕ ವಿಚಾರಕ್ಕೆ ಯುವಕರ ನಡುವೆ ಹೊಡೆದಾಟವಾಗಿದೆ. ಬೆಳಗಾವಿಯ ಉಜ್ವಲ್ ನಗರದ ನಾಲ್ವರ ಮೇಲೆ ತಲ್ವಾರ್ ನಿಂದ ಹಲ್ಲೆಯಾಗಿದೆ. ಮೊಹ್ಮದ್ ಕೈಫ್, ಸಾಹಿಲ್ ಬಂಡಾರಿ, ತಜ್ವೀರ್ ಹಾಗೂ ಅಫನ್ ಎಂಬುವರ ಮೇಲೆ ತಲ್ವಾರ್ ನಿಂದ ದಾಳಿ ನಡೆಸಲಾಗಿದೆ.
ಈದ್ ಮಿಲಾದ್ ಹಿನ್ನೆಲೆಯಲ್ಲಿ ಉಜ್ವಲ್ ನಗರದಲ್ಲಿ ದೀಪಾಲಂಕಾರ ಮಾಡಲಾಗಿತ್ತು. ಬೆಳಗ್ಗೆ ಲೈಟ್ ಗಳನ್ನು ರುಕ್ಮಿಣಿ ನಗರದ ಯುವಕರು ಹಾನಿ ಮಾಡಿದ್ದರು. ಹಾನಿಯಾದ ಲೈಟುಗಳ ಹಣ ಕೇಳಲು ಯುವಕರು ಹೋಗಿದ್ದ ವೇಳೆ ಮಾತಿಗೆ ಮಾತು ಬೆಳೆದು ಯುವಕರು ದಾಳಿ ನಡೆಸಿದ್ದಾರೆ. ಮಾಳ ಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬೆಳಗಾವಿಯಲ್ಲಿ ಭಾನುವಾರ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಹಿಂದುಗಳಿಂದ ಹರ ಹರ ಮಹಾದೇವ ಹಾಗೂ ಇದಕ್ಕೆ ಪ್ರತಿಯಾಗಿ ಅಲ್ಲಾಹು ಅಕ್ಬರ್ ಘೋಷಣೆಗಳು ಮೊಳಗಿದ್ದು, ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಬೆಳಗಾವಿಯ ಚನ್ನಮ್ಮನ್ನ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ವಕೀಲರು ತೆರಳುತ್ತಿದ್ದರು. ಈ ವೇಳೆ ಇದೇ ರಸ್ತೆಯಲ್ಲಿ ಈದ್ ಮಿಲಾದ್ ಮೆರವಣಿಗೆಗೆ ಬರುತ್ತಿತ್ತು. ಮೆರವಣಿಗೆಯಲ್ಲಿ ಟಿಪ್ಪು ಸುಲ್ತಾನ್ ಫೋಟೋ ಪ್ರದರ್ಶನ ಮಾಡಲಾಯಿತಿ, ಆಗ ವಕೀಲರು ಹರ ಹರ ಮಹಾದೇವ ಘೋಷಣೆ ಕೂಗಿದ್ದಾರೆ. ಇದಕ್ಕೆ ಪ್ರತಿಯಾಗಿ ಮುಸ್ಲಿಂ ಯುವಕರು ಅಲ್ಲಾಹು ಅಕ್ಬರ್ ಘೋಷಣೆ ಕುಗಿದ್ದಾರೆ. ಕೂಡಲೇ ಪೊಲೀಸರು ಮುಸ್ಲಿಂ ಯುವಕರನ್ನು ಸಮಾಧಾನಗೊಳಿಸಿ ಅಲ್ಲಿಂದ ಮೆರವಣಿಗೆಯನ್ನು ಮುಂದೆ ಸಾಗಿಸಿದರು.