ಕೊಪ್ಪಳ : ಇಂದಿನ ಆಧುನಿಕ ಪ್ರಪಂಚದಲ್ಲಿ ಜನರು ಎಷ್ಟೇ ಮುಂದುವರೆದಿದ್ದರೂ, ದೇಶ ಎಷ್ಟೇ ತಂತ್ರಜ್ಞಾನದಲ್ಲಿ ಅಪ್ ಡೇಟ್ ಹೊಂದಿದ್ದರು, ಕೆಲವರು ಮೂಢನಂಬಿಕೆ, ಸಾಂಪ್ರದಾಯ, ಕಟ್ಟುಪಾಡುಗಳಿಗೆ ಜೋತು ಬಿದ್ದು, ತಲೆಯಲ್ಲಿ ಇನ್ನೂ ಅಂತಹ ವಿಚಾರಗಳನ್ನು ಇಟ್ಟುಕೊಂಡೆ ಬದುಕು ಸಾಗಿಸುತ್ತಿದ್ದಾರೆ.ಇದೀಗ ಕೊಪ್ಪಳದಲ್ಲಿ ಅಂತರ್ಜಾತಿ ವಿವಾಹವಾಗಿದ್ದಕ್ಕೆ ಇವತಿಗೆ ವಿಷಉಣಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಹೌದು ಗಂಗಾವತಿ ತಾಲೂಕಿನ ಆಗೋಲಿ ಗ್ರಾಮದ ನಿವಾಸಿಯಾಗಿದ್ದ (21) ಮರಿಯಮ್ಮ ಅನ್ನೋ ಯುವತಿ, ಜಿಲ್ಲೆಯ ಕನಕಗಿರಿ ತಾಲೂಕಿನ ವಿಠಲಾಪುರ ಗ್ರಾಮದ ಹನಮಯ್ಯ ಅನ್ನೋ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ ಮರಿಯಮ್ಮ, ದಲಿತ ಸಮುದಾಯಕ್ಕೆ ಸೇರಿದ್ದರೆ, ಹನಮಯ್ಯ, ನಾಯಕ ಜಾತಿಗೆ ಸೇರಿದ್ದ. ಹೀಗಾಗಿ ಇಬ್ಬರ ಮನೆಯಲ್ಲಿ ಇವರ ಮದುವೆಗೆ ರೆಡ್ ಸಿಗ್ನಲ್ ಸಿಕ್ಕಿತ್ತು. ಇದೇ ಕಾರಣಕ್ಕೆ ಇಬ್ಬರು ಮನೆ ಬಿಟ್ಟು ಹೋಗಿದ್ದರು.
ಹೀಗಾಗಿ ಯುವತಿ ಮನೆಯವರು ಪೊಲೀಸರಿಗೆ ದೂರು ಕೊಡಲು ಹೋಗಿದ್ದರು. ಆದರೆ ಇಬ್ಬರು ಕೂಡಾ ಪ್ರಾಪ್ತವಯಸ್ಸನ್ನು ಹೊಂದಿದ್ದರಿಂದ, ಯುವತಿ ಹೆತ್ತವರು ಸುಮ್ಮನಾಗಿದ್ದರು. ನಂತರ ಮರಿಯಮ್ಮ ಮತ್ತು ಹನುಮಯ್ಯ, ಗಂಗಾವತಿ ಸಬ್ ರಿಜಸ್ಟರ್ ಕಚೇರಿಯಲ್ಲಿ ವಿವಾಹವಾಗಿದ್ದರು. ಇದಾದ ನಂತರ ಎರಡು ಕುಟುಂಬದವರು ದೇವಸ್ಥಾನದಲ್ಲಿ ಸರಳ ವಿವಾಹ ಮಾಡಿದ್ದರು.
ಅದಾದ ನಂತರ ಯುವತಿಯ ಮನೆಯವರಿಗೆ ಯುವಕನ ಮನೆಯವರು ನಮ್ಮ ಮನೆ ಕಡೆಗೆ ಬರಬೇಡಿ ಅಂದಾಗ ಯುವತಿಯ ಮನೆಯವರು ಸುಮ್ಮನಿದ್ದರು. ಬಳಿಕ ಆಗಸ್ಟ್ 27 ರಂದು ಮರಿಯಮ್ಮಳ ಕುಟುಂಬದವರಿಗೆ ಕನಕಗಿರಿ ಪೊಲೀಸರು ಕರೆ ಮಾಡಿ, ನಿಮ್ಮ ಮಗಳು ವಿಷ ಕುಡಿದಿದ್ದಾಳೆ ಬನ್ನಿ ಅಂತ ಹೇಳಿದ್ದರಂತೆ. ಅಷ್ಟರಲ್ಲಿ ಮರಿಯಮ್ಮಳನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಮರಿಯಮ್ಮ ಸಾವನಪ್ಪಿದ್ದಾಳೆ.
ತಮ್ಮ ಮಗಳಿಗೆ ನಿರಂತರವಾಗಿ ಕೆಳ ಜಾತಿಯವಳು ಅಂತ ಕಿರುಕುಳ ನೀಡುತ್ತಿದ್ದರು. ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು. ಕೆಳ ಜಾತಿಯವಳಾಗಿರುವ ನೀನು ನಮ್ಮ ಮನೆಯಲ್ಲಿ ಬರಬೇಡಾ ಅಂತ ಹೇಳಿ ಸಣ್ಣ ಜೋಪಡಿಯಲ್ಲಿಟ್ಟಿದ್ದರಂತೆ. ಈ ಕಾರಣಕ್ಕೆ ಹನಮಯ್ಯನ ಕುಟುಂಬದವರು ಕಿರುಕುಳ ನೀಡಿದ್ದಲ್ಲದೆ, ವಿಷ ಕುಡಿಸಿ ಕೊಲೆ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ. ಸದ್ಯ ಮರಿಯಮ್ಮಳ ಸಾವಿನ ಬಗ್ಗೆ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.