ರಾಯಚೂರೂ: ನರೇಂದ್ರ ಮೋದಿ ಈ ಬಾರಿ ಭಾವನೆಗಳನ್ನು ಕೆರಳಿಸಿ ಜನರ ವಿಶ್ವಾಸಗಳಿಸಲು ಸಾಧ್ಯವಿಲ್ಲ. ಭಾರತೀಯರನ್ನು ಪದೇ ಪದೇ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಸಿಂಧನೂರು ನಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ -02 ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪಕ್ಷದ ಅಭ್ಯರ್ಥಿಯಾದ ರಾಜಶೇಖರ್ ಹಿಟ್ನಾಳ್ ಯವರ ಪರವಾಗಿ ಮತದಾರರಲ್ಲಿ ಮತ ಯಾಚನೆ ಮಾಡಿ ನಂತರ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.
ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಮಂತ್ರಿಯಾಗಲು ದೇಶದ ಜನರ ಆಶೀರ್ವಾದ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಮತ ಕೇಳುವ ಯಾವುದೇ ನೈತಿಕತೆ ಇಲ್ಲ. ಭಾವನಾತ್ಮಕ ವಿಚಾರಗಳನ್ನು ಜನರ ಮುಂದಿಟ್ಟು ಎರಡು ಬಾರಿ ಗೆದ್ದರು ಎಂದರು.
ಬಿಜೆಪಿಗೆ 200 ಸ್ಥಾನ ದೊರೆತರೆ ಹೆಚ್ಚು
ಸಮೀಕ್ಷಾ ವರದಿಯೊಂದರ ಪ್ರಕಾರ ಬಿಜೆಪಿ 200 ಸ್ಥಾನಗಳನ್ನು ಗೆದ್ದರೆ ಹೆಚ್ಚು ಎನ್ನುವುದು
ನರೇಂದ್ರಮೋದಿಯವರಿಗೆ ಗೊತ್ತಾಗಿದೆ. ಅದಕ್ಕಾಗಿ ಇಡೀ ರಾಷ್ಟ್ರದಲ್ಲಿ ನೂರಕ್ಕೂ ಹೆಚ್ಚು ಜನರಿಗೆ ಟಿಕೆಟ್ ಬದಲಾಯಿಸುವ ಕೆಲಸವನ್ನು ಮಾಡಿದೆ. ಕರ್ನಾಟಕದಲ್ಲಿ 12 ಜನ ಹಾಲಿ ಸಂಸದರಿಗೆ ಟಿಕೆಟ್ ಕೊಟ್ಟಿಲ್ಲ. ನರೇಂದ್ರ ಮೋದಿಯವರಿಗೆ ವಿಶ್ವಾಸ ಇದ್ದಿದ್ದರೆ ಇಷ್ಟೊಂದು ಬದಲಾವಣೆ ಏಕೆ ಮಾಡಬೇಕಿತ್ತು. ಅವರು ಸೋಲುವ ಭಯದಿಂದ ಹೀಗೆ ಮಾಡಿದ್ದಾರೆ. ನರೇಂದ್ರ ಮೋದಿಯವರು ಅಭಿವೃದ್ಧಿ ಮಾಡಿದ್ದು ಕಡಿಮೆ. ಯಾವುದೇ ಸಭೆಯಲ್ಲಿ ಮತ ಕೇಳುವಾಗ ಅವರು ಹತ್ತು ವರ್ಷಗಳ ಸಾಧನೆಯನ್ನು ಜನರ ಮುಂದಿಡದೇ ಭಾವನಾತ್ಮಕ ವಿಚಾರಗಳನ್ನು ಜನರ ಮುಂದಿಡುತ್ತಿದ್ದಾರೆ.
ನಿರುದ್ಯೋಗ, ಬೆಲೆಯೇರಿಕೆ, ಹಣದುಬ್ಬರ, ರೈತರ , ಮಹಿಳೆಯರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದಿಲ್ಲ . ಅಭಿವೃದ್ಧಿ ಮಾಡಿದ್ದೇನೆ ಎಂದು ಮಾತ್ರ ಹೇಳುತ್ತಾರೆ. ಏನು ಮಾಡಿದ್ದೇವೆ ಎಂದು ಹೇಳುವುದಿಲ್ಲ ಎಂದರು.
ಸಂಗಣ್ಣ ಕರಡಿ ಯವರಿಂದ ಕಾಂಗ್ರೆಸ್ ಪಕ್ಷಕ್ಕೆ ಬಲ
ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸುತ್ತಿದ್ದು, ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ್ ಸ್ಪರ್ಧಿಸುತ್ತಿದ್ದಾರೆ. ಕಾರಣವಿಲ್ಲದೆ ಸಂಗಣ್ಣ ಕರಡಿಯವರಿಗೆ ಟಿಕೆಟ್ ತಪ್ಪಿಸಿದ್ದಾರೆ. ಸಂಗಣ್ಣ ಕರಡಿ ಈ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿದ್ದರು. ಬೇಸರಗೊಂಡು ಕಾಂಗ್ರೆಸ್ ಸೇರಿದ್ದಾರೆ.ಅವರಿಂದ ಕಾಂಗ್ರೆಸ್ ಪಕ್ಷಕೆ ಹೆಚ್ಚು ಶಕ್ತಿ ಬಂದಿದೆ. ರಾಜಶೇಖರ್ ಹಿಟ್ನಾಳ್ ಅವರು ನಮ್ಮ ಅಭ್ಯರ್ಥಿಯಾಗಿ ಕಳೆದ ಬಾರಿಯೂ ಸ್ಪರ್ಧಿಸಿದ್ದರು. ಸ್ವಲ್ಪ ಅಂತರದಲ್ಲಿ ಸೋತರು. ಆದರೆ ಈ ಬಾರಿ ಅವರು ನೂರಕ್ಕೆ ನೂರು ಗೆಲ್ಲುತ್ತಾರೆಂಬ ವಿಶ್ವಾಸವಿದೆ ಎಂದರು.
ಸಿಂಧನೂರು ಹಾಗೂ ಪಕ್ಕದ ಕ್ಷೇತ್ರಗಳಿಂದ ಹೆಚ್ಚು ಬಹುಮತ ಬರುತ್ತದೆ ಎಂಬ ನಂಬಿಕೆ ಬಂದಿದೆ ಎಂದು ತಿಳಿಸಿದರು.
ಸಚಿವರಾದ ಶಿವರಾಜ ತಂಗಡಗಿ, ಬೈರತಿ ಬಸವರಾಜ್, ಬೋಸ್ ರಾಜು, ಶಾಸಕರು, ಮಾಜಿ ಸಚಿವರು , ಮಾಜಿ ಲೋಕಸಭಾ ಸದಸ್ಯರು , ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.