ನವದೆಹಲಿ : ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟವು ‘ತೀವ್ರ’ ವಿಭಾಗದಲ್ಲಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಮಾಲಿನ್ಯ ವಿರೋಧಿ ಸಮಿತಿ ಕಠಿಣ ಕ್ರಮ ಕೈಗೊಂಡಿದೆ. ಎಲೆಕ್ಟ್ರಿಕ್ ಮತ್ತು ಸಿಎನ್ಜಿ ಹೊರತುಪಡಿಸಿ ಇತರ ಟ್ರಕ್ಗಳ ಪ್ರವೇಶವನ್ನು ನಿಷೇಧಿಸಿದೆ. ಎನ್ಸಿಆರ್ನಲ್ಲಿ ಶುದ್ಧ ಇಂಧನದಲ್ಲಿ ಕಾರ್ಯನಿರ್ವಹಿಸದ ಎಲ್ಲಾ ಕೈಗಾರಿಕೆಗಳನ್ನು ಮುಚ್ಚಲು ಆದೇಶಿಸಿದೆ. ಇದರ ಜೊತೆಗೆ ವಿನಾಯಿತಿ ಪಡೆದಿರುವ ಅಗತ್ಯ ವಸ್ತುಗಳನ್ನು ಸಾಗಿಸುವ ಟ್ರಕ್ಗಳಿಗೆ ನಿಷೇಧದಿಂದ ವಿನಾಯಿತಿ ನೀಡಲಾಗಿದೆ.
ವಾಯು ಗುಣಮಟ್ಟ ನಿರ್ವಹಣಾ ಆಯೋಗವು (CAQM) ದೆಹಲಿ-ಎನ್ಸಿಆರ್ನಲ್ಲಿ ನಾಲ್ಕು ಚಕ್ರಗಳ ಡೀಸೆಲ್ ಲೈಟ್ ಮೋಟಾರು ವಾಹನಗಳ ಓಡಾಟವನ್ನು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ ಅಂತಿಮ ಹಂತದ ಅಡಿಯಲ್ಲಿ ಮಾಲಿನ್ಯ ವಿರೋಧಿ ಕ್ರಮಗಳ ಭಾಗವಾಗಿ ನಿಷೇಧಿಸಿದೆ. ಆದಾಗ್ಯೂ, BS-VI ಮತ್ತು ಅಗತ್ಯ ಮತ್ತು ತುರ್ತು ಸೇವೆಗಳ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ.
ದೆಹಲಿ-ಎನ್ಸಿಆರ್ನಲ್ಲಿ ಹೆದ್ದಾರಿಗಳು, ಮೇಲ್ಸೇತುವೆಗಳು, ವಿದ್ಯುತ್ ಪ್ರಸರಣ, ಪೈಪ್ಲೈನ್ಗಳಂತಹ ಸಾರ್ವಜನಿಕ ಯೋಜನೆಗಳಲ್ಲಿನ ನಿರ್ಮಾಣ ಕಾರ್ಯಗಳನ್ನು ಸಹ ನಿಷೇಧಿಸಲಾಗಿದೆ. ದೆಹಲಿ-ಎನ್ಸಿಆರ್ನಲ್ಲಿ ನಿರ್ಮಾಣ ಮತ್ತು ನೆಲಸಮ ಚಟುವಟಿಕೆಗಳ ಮೇಲೆ ನಿಷೇಧ ಹೇರುವಂತೆ ಸಿಎಕ್ಯೂಎಂ ಶನಿವಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.
ಕೇಂದ್ರ ಸಮಿತಿಯು ಶಾಲೆಗಳನ್ನು ಮುಚ್ಚುವುದು, ತುರ್ತು ರಹಿತ ವಾಣಿಜ್ಯ ಚಟುವಟಿಕೆಗಳು, ವಾಹನಗಳಿಗೆ ಬೆಸ-ಸಮ ಯೋಜನೆ ಕುರಿತು ನಿರ್ಧರಿಸಲು ರಾಜ್ಯ ಸರ್ಕಾರಕ್ಕೆ ಬಿಟ್ಟಿದೆ.
ಹೊಗೆಯ ದಟ್ಟವಾದ ಪದರವು ದೆಹಲಿಯನ್ನು ಆವರಿಸಿದ್ದರಿಂದ ಹಲವು ಶಾಲೆಗಳು ಹೊರಾಂಗಣ ಚಟುವಟಿಕೆಗಳನ್ನು ಸ್ಥಗಿತಗೊಳಿಸಿವೆ. ತರಗತಿಗಳಲ್ಲಿ ಉಸಿರಾಟದ ವ್ಯಾಯಾಮವನ್ನು ಪರಿಚಯಿಸಿವೆ. ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಸುಧಾರಿಸುವವರೆಗೆ ಶಾಲೆಗಳನ್ನು ಮುಚ್ಚುವಂತೆ ಮಕ್ಕಳ ಹಕ್ಕುಗಳ ರಾಷ್ಟ್ರೀಯ ಆಯೋಗ (ಎನ್ಸಿಪಿಸಿಆರ್) ಬುಧವಾರ ದೆಹಲಿ ಸರ್ಕಾರಕ್ಕೆ ಸೂಚಿಸಿತ್ತು.
ಗುರುವಾರ, ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕವು (AQI) 426 ನಲ್ಲಿ ದಾಖಲಾಗಿದೆ. 400 ಕ್ಕಿಂತ ಹೆಚ್ಚಿನ AQI ಅನ್ನು ‘ತೀವ್ರ’ ಎಂದು ಪರಿಗಣಿಸಲಾಗುತ್ತದೆ. ಇದು ಆರೋಗ್ಯವಂತ ಜನರ ಮೇಲೆ ಪರಿಣಾಮ ಕೆಟ್ಟ ಬೀರಲಿದ್ದು, ಅನಾರೋಗ್ಯಸ್ಥರ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತದೆ.
ದೆಹಲಿಯ ಆಸ್ಪತ್ರೆಗಳಲ್ಲಿ ಈಗಾಗಲೇ ಕೆಮ್ಮು, ಮೂಗಿನ ದಟ್ಟಣೆ, ಉಸಿರಾಟದ ತೊಂದರೆ ಮತ್ತು ಅಸ್ತಮಾದಿಂದ ಬಳಲುತ್ತಿರುವ ರೋಗಿಗಳ ಏರಿಕೆ ಕಾಣುತ್ತಿದೆ ಎಂದು ವರದಿಯಾಗಿದೆ.
ಬಿಜೆಪಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನ – ಬಿಜೆಪಿ ರಾಜ್ಯಧ್ಯಕ್ಷ ನಳಿನ್ಕುಮಾರ್ ಕಟೀಲ್