ಬೆಂಗಳೂರು : ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟ ಬಾಲಕಿ ದಿವ್ಯಾ ಕುಟುಂಬದವರಿಗೆ ರಾಜ್ಯ ಸರ್ಕಾರದಿಂದ 10 ಲಕ್ಷ ಪರಿಹಾರ ಬಿಡುಗಡೆ ಮಾಡಲಾಗಿದೆ.
ಸಿಎಂ ಪರಿಹಾರ ನಿಧಿಯಿಂದ ಮಂಡ್ಯ ಡಿಸಿ ಖಾತೆಗೆ ಹಣ ವರ್ಗಾವಣೆಯಾಗಿದ್ದು, ನಾಳೆ ಮೃತ ಬಾಲಕಿ ಕುಟುಂಬದ ಖಾತೆಗೆ ಮಂಡ್ಯ ಡಿಸಿಯಿಂದ ಹಣ ಹಸ್ತಾಂತರವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮಳವಳ್ಳಿಯಲ್ಲಿ ಇತ್ತೀಚೆಗೆ ಅತ್ಯಚಾರಕ್ಕೆ ಒಳಗಾಗಿ ಮೃತಪಟ್ಟ ಬಾಲಕಿಯ ಕುಟುಂಬದವರಿಗೆ ರೂ. 10 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದರು. ಅಂತೆಯೇ ಇದೀಗ ಪರಿಹಾರದ ಹಣ ಬಿಡುಗಡೆ ಮಾಡಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ಶ್ರೀ ಮಲೆಮಹಾದೇಶ್ವರ ಕುಂಭಮೇಳದ ಸಾಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಮಳವಳ್ಳಿ ಘಟನೆ ಬಗ್ಗೆ ಎಲ್ಲರೂ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಸಮಾಜದಲ್ಲಿ ಎಂದಿಗೂ ಇಂಥದ್ದು ನಡೆಯಬಾರದು. ಅತ್ಯಂತ ಅಮಾನುಷ ಕೃತ್ಯವಿದು. ಮನುಷ್ಯತ್ವವಿಲ್ಲದವರು ಮಾತ್ರ ಇಂಥ ಕೆಲಸ ಮಾಡಲು ಸಾಧ್ಯ . ಇದನ್ನು ಶಬ್ದಗಳಲ್ಲಿ ಖಂಡಿಸಲಾಗದು. ಅರಿಯದ ಕಂದಮ್ಮನ ಪರಿಸ್ಥಿತಿ ಕೇಳಿದರೆ ಕರಳು ಕಿವುಚಿಬರುತ್ತದೆ. ಈಗಾಗಲೇ ಅಧಿಕಾರಿಗಳು ಕ್ರಮ ತೆಗೆದುಕೊಂಡು ಅಪರಾಧಿಯನ್ನು ಬಂಧಿಸಲಾಗಿದೆ. ಎಲ್ಲ 302, 307, ಪೋಕ್ಸೋ ಸೆಕ್ಷನ್ ಗಳನ್ನು ಹಾಕಿ ದ್ದಾರೆ. ನಮ್ಮ ಪೊಲೀಸ್ ಮಹಾನಿರ್ದೇಶಕರಿಗೆ ಅಂದೇ ಸೂಚನೆ ನೀಡಿ ಕೂಡಲೇ ತನಿಖೆಯಾಗಿ ತಪ್ಪಿ ತಸ್ಥರನ್ನು ಶಿಕ್ಷೆಗೊಳಪಡಿಸಬೇಕೆಂದು ಸೂಚಿಸಿದ್ದೆ. ಅವರು ಎಫ್.ಎಸ್.ಎಲ್ ವರದಿ ಒಂದು ವಾರದಲ್ಲಿಯೇ ನೀಡಲಾಗುವುದೆಂದು ಹೇಳಿದ್ದು, ಬಂದ ಕೂಡಲೇ ಆರೋಪ ಪಟ್ಟಿ ಸಿದ್ಧಪಡಿಸಿ ಪೋಕ್ಸೋ ನ್ಯಾಯಾಲಯಕ್ಕೆ ಕಳುಹಿಸಿ, ಆದಷ್ಟು ಬೇಗ ನ್ಯಾಯ ನೀಡಲು ಕ್ರಮ ಕೈಗೊಂಡು ಇನ್ನೊಮ್ಮೆ ಹೀಗಾದರೆ ಅತಿ ಕಡಿಮೆ ಸಮಯದಲ್ಲಿ ಉಗ್ರ ಶಿಕ್ಷೆ ಈ ವ್ಯವಸ್ಥೆ ನೀಡಲಿದೆ ಎಂಬ ಸಂದೇಶವನ್ನು ಸಾರಲಾಗುವುದೆಂದು ಈ ಪ್ರಕರಣದಲ್ಲಿ ಸಾಬೀತು ಮಾಡುತ್ತೇವೆ ಎಂದರು.
ಉಗ್ರ ಶಿಕ್ಷೆ
ಅಪರಾಧಿಗೆ ಉಗ್ರ ಶಿಕ್ಷೆ ನೀಡಲಾಗುವುದು. ನಿಮ್ಮ ಮನಸ್ಸಿನಲ್ಲಿರುವುದೇ ನಮ್ಮ ಮನಸ್ಸಿನಲ್ಲಿದೆ. ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತೇವೆ. ಮೌಲ್ಯಗಳ ಕುಸಿತದಿಂದ ಇವೆಲ್ಲಾ ಆಗುತ್ತಿದೆ. ಯಾವುದು ಸರಿ, ತಪ್ಪು ಎಂದು ಸ್ಪಷ್ಟ ತೆ ಇಲ್ಲ. ಭಯ, ಭಕ್ತಿ ಇಲ್ಲ. ಇವುಗಳು ಇರಬೇಕಾದರೆ ಸಂಸ್ಕಾರ , ಸಂಸ್ಕೃತಿ ಅಗತ್ಯ. ಅಮಾನುಷ ಕೃತ್ಯ ಸಮಾಜದಲ್ಲಿ ಆಗಬಾರದೆಂದರೆ ನೈತಿಕ ಬದ್ಧತೆ, ಭಯ ಬರಬೇಕಾದರೆ ಸಂಸ್ಕಾರ ಅಗತ್ಯ ಎಂದರು. ನಾವೇನಾಗಿದ್ದೇವೆ ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರು ಕೇಳಿಕೊಳ್ಳಬೇಕು ಎಂದರು.