ಶಿವಮೊಗ್ಗ : ಪ್ರಿಯಾಂಕ ಖರ್ಗೆ ಏನ್ ಏನೋ ಹೇಳಿಕೆ ನೀಡುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೊಟ್ಟೆಯಲ್ಲಿ ಪ್ರಿಯಾಂಕ್ ಎಂಬ ಕೆಟ್ಟ ಹುಳು ಹುಟ್ಟಿದ್ದು ವಿಪರ್ಯಾಸ. ಪ್ರಿಯಾಂಕ ಖರ್ಗೆ ಅಂತವರನ್ನ ಕಾಂಗ್ರೆಸ್ನವರು ಅಂತ ಒಪ್ಪಲ್ಲ. ಕಾಂಗ್ರೆಸ್ ಹೆಸರಿನಲ್ಲಿ ಅಧಿಕಾರ ಹಂಚಿಕೊಂಡವರು ಇವರು ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ಮಾಡಿದರು.
ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂಸದ ಡಿ.ಕೆ.ಸುರೇಶ್ ಅವರಿಗೆ ಮೊದಲು ನೋಟಿಸ್ ಕೊಡಲಿ. ನನ್ನ ಹೇಳಿಕೆ ಇಟ್ಟುಕೊಂಡು ಕಾಂಗ್ರೆಸ್ ಗೊಂದಲ ಸೃಷ್ಟಿಸುತ್ತಿದೆ. ನಾನು ಎಲ್ಲೂ ಸಂಸದ ಡಿಕೆ ಸುರೇಶ್ ಅವರಿಗೆ ಗುಂಡಿಕ್ಕಿ ಕೊಲ್ಲಿ ಅಂತ ಹೇಳಿಲ್ಲ. ನನಗೆ ನೋಟಿಸ್ ಬಂದಿದೆ, ನಾನು ಉತ್ತರ ಕೊಡುತ್ತೇನೆ. ಪ್ರಕರಣದಲ್ಲಿ ನನಗೆ ಕ್ಲೀನ್ಚಿಟ್ ಸಿಗುವ ವಿಶ್ವಾಸ ಇದೆ ಎಂದರು.
ನನ್ನ ವಿರುದ್ಧ ಇಂತಹ ನೂರು ಎಫ್ಐಆರ್ ಹಾಕಿದರು ನಾನು ಹೆದರಲ್ಲ. ದೇಶದ್ರೋಹಿ ಹೇಳಿಕೆ ನೀಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸುವೆ. ದೇಶದ್ರೋಹಿ ಹೇಳಿಕೆ ಕೊಡುವವರ ಮೇಲೆ ಕೇಸ್ ಹಾಕಿಲ್ಲ. ಆದರೆ ನನ್ನ ಮೇಲೆ ಕೇಸ್ ಹಾಕಿದ್ದಾರೆ. ಸರ್ಕಾರ ಸಂಸದ ಡಿ.ಕೆ.ಸುರೇಶ್ ಅವರ ಹೇಳಿಕೆಯನ್ನುಸಮರ್ಥಿಸಿಕೊಂಡಿದೆ.
ರಾಷ್ಟ್ರದ್ರೋಹಿಗಳನ್ನ ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು. ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದೇನೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.