ಮಂಗಳೂರು: ಇಲ್ಲಿನ ಹೊರವಲಯದ ಕುಡುಪು ಬಳಿ ಅಶ್ರಫ್ ಎಂಬ ಯುವಕನ ಹತ್ಯೆ ಸಮಾಜದ ಶಾಂತಿ ಕದಡುವ ದುಷ್ಟ ಶಕ್ತಿಗಳ ಕೃತ್ಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಹಿಂದೆ ಸಾಮರಸ್ಯ ಮತ್ತು ಭಾವೈಕ್ಯತೆಯ ನೆಲೆಯಾಗಿತ್ತು. ಆದರೆ ಕೆಲ ಸಮಾಜಘಾತುಕ ಶಕ್ತಿಗಳು ಹಲವು ವರ್ಷಗಳಿಂದ ಜಿಲ್ಲೆಯ ಕೋಮು ಸೌರ್ಹಾದಕ್ಕೆ ಕೊಳ್ಳಿ ಇಡುವ ಯತ್ನ ಮಾಡುತ್ತಿವೆ. ಮೊನ್ನೆಯ ಕುಡುಪು ಘಟನೆ ಇದರ ಒಂದು ಭಾಗ. ಯುವಕನ ಕೊಲೆ ಸಂಬಂಧ ಈಗಾಗಲೇ ಮಂಗಳೂರು ಪೊಲೀಸರು ಶೀಘ್ರ ಕ್ರಮ ತೆಗೆದುಕೊಂಡಿದ್ದಾರೆ. ಕೃತ್ಯದಲ್ಲಿ ಭಾಗಿಯಾದ 15 ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ಕೆಲವು ದುಷ್ಕರ್ಮಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದು ಅವರ ಹೆಡೆಮುರಿ ಕಟ್ಟುವುದು ಖಂಡಿತ ಎಂಬುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಕೊಲೆ ಪ್ರಕರಣವನ್ನು ತ್ವರಿತವಾಗಿ ಬೇಧಿಸಿ ಆರೋಪಗಳನ್ನು ಬಂಧಿಸಿದ ಮಂಗಳೂರು ಪೊಲೀಸರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅದೇ ರೀತಿ ಜಿಲ್ಲೆಯ ಸೌರ್ಹಾದತೆ ಕಾಪಾಡುವುದು ಕೂಡ ಪೊಲೀಸರ ಜವಾಬ್ದಾರಿ. ಈ ಘಟನೆಯ ಬಳಿಕ ಕೆಲ ಸಮಾಜಘಾತಕ ಶಕ್ತಿಗಳು ದ್ವೇಷ ಹರಡುವ ಪ್ರಯತ್ನ ನಡೆಸುವ ಸಾಧ್ಯತೆಯಿದೆ. ಪೊಲೀಸರು ಅದಕ್ಕೆ ಅವಕಾಶ ಕೊಡಬಾರದು ಎಂದಿದ್ದಾರೆ.
ಕೋಮು ಸಂಘರ್ಷ ಹುಟ್ಟು ಹಾಕುವ ಮೂಲಕ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕೆನ್ನುವುದು ಕೆಲ ಪಟ್ಟಭದ್ರ ಹಿತಾಸಕ್ತಿಗಳ ಉದ್ದೇಶವಾಗಿದೆ. ದ.ಕನ್ನಡದ ಜನ ಈ ಹುನ್ನಾರಗಳನ್ನು ಅರಿಯಬೇಕು. ಪ್ರಜ್ಞಾವಂತರ ಜಿಲ್ಲೆ ಎಂದೇ ಹೆಸರಾದ ದ.ಕನ್ನಡಕ್ಕೆ ಕಳಂಕ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕಾನೂನು ಕೈಗೆತ್ತಿಕೊಳ್ಳುವ, ಸಮಾಜದ ಸ್ವಾಸ್ಥ್ಯ ಕೆಡಿಸುವ, ಸಾಮರಸ್ಯಕ್ಕೆ ಕೊಳ್ಳಿ ಇಡುವ ಯಾವುದೇ ದುಷ್ಟ ಪ್ರಯತ್ನಕ್ಕೆ ನಮ್ಮ ಸರ್ಕಾರ ಅವಕಾಶ ಮಾಡಿಕೊಡುವುದಿಲ್ಲ. ಈ ವಿಚಾರದಲ್ಲಿ ನಮ್ಮದು ಶೂನ್ಯ ಸಹಿಷ್ಣುತೆ ಎಂಬ ಮಾತನ್ನು ಸಮಾಜ ಘಾತಕರಿಗೆ ಎಚ್ಚರಿಕೆಯ ರೂಪದಲ್ಲಿ ಹೇಳಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ದಯೆಗಿಂತ ಮಿಗಿಲಾದ ಧರ್ಮವಿಲ್ಲ ಎಂಬ ಬಸವಣ್ಣನವರ ಆಶಯದಂತೆ ನಮ್ಮ ಸರ್ಕಾರ ಆಡಳಿತ ನಡೆಸುತ್ತಿದೆ. ಈ ಆಶಯಕ್ಕೆ ಧಕ್ಕೆ ಬರಬಾರದು. ಸಮಾಜದ ಶಾಂತಿ ಕದಡಬಾರದು ಎಂಬುದಾಗಿ ಜನರಲ್ಲಿ ಮನವಿ ಮಾಡಿದ್ದಾರೆ.
ದಿವಂಗತ ಮಾಜಿ ಸಿಎಂ ಎಸ್.ಎಂ ಕೃಷ್ಣ ಹೆಸರಿನಲ್ಲಿ 8 ದತ್ತಿ ನಿಧಿ ಸ್ಥಾಪನೆ
BIG NEWS : ದೇಶದಲ್ಲಿ ನಾಳೆಯಿಂದ 15 ಬ್ಯಾಂಕುಗಳ ವಿಲೀನ : ಖಾತೆದಾರರ ಮೇಲೆ ಏನು ಪರಿಣಾಮ ಬೀರುತ್ತದೆ?