ರಾಮನಗರ: ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಜೆಡಿಎಸ್ ಬಿಜೆಪಿ ಅಶ್ವಮೇಧ ಆರಂಭಿಸಿವೆ. ಈ ಸರಕಾರದ ಅಂತಿಮ ಕಾಲ ಹತ್ತಿರಲ್ಲಿಯೇ ಇದೆ ಎಂದು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ರಾಮನಗರದಲ್ಲಿ ಮೈಸೂರು ಚಲೋ ಪಾದಯಾತ್ರೆಯ ಬೃಹತ್ ರೋಡ್ ಶೋ ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿಯೊಂದಕ್ಕೂ ಲೆಕ್ಕ ಕೊಡುತ್ತೇವೆ. ನಿಮ್ಮ ಲೆಕ್ಕ ಚುಕ್ತಾ ಮಾಡುತ್ತೇವೆ. ಅಶ್ವಮೇಧಕ್ಕೆ ಚಾಲನೆ ಕೊಟ್ಟಿದ್ದೇವೆ. ನಿಮ್ಮನ್ನು ಮುಗಿಸುವ ಕಾಲ ಹತ್ತಿರ ಬಂದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಸರಕಾರವು ಯಡಿಯೂರಪ್ಪ ಅವರ ವಿಷಯದಲ್ಲಿ ಅಮಾನುಷವಾಗಿ ವರ್ಸಿಸಿದೆ. ಅವರ ಮನಸ್ಸಿಗೆ ನೋವು ಕೊಟ್ಟಿದೆ. ನಿಮ್ಮ ಪಾಪದ ಕೊಡ ತುಂಬಿದೆ. ನಿಮ್ಮ ಅಂತಿಮ ಕಾಲ ಹತ್ತಿರಕ್ಕೆ ಬಂದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ-ಜೆಡಿಎಸ್ ಶವಯಾತ್ರೆ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ ಅವರು. ಕಲಬುರ್ಗಿಯಲ್ಲಿ ಒಬ್ಬ ಪೋಲಿಸ್ ಅಧಿಕಾರಿಯ ಶವಯಾತ್ರೆ ಮಾಡಿಸಿದ್ದರಲ್ಲ, ಆ ಅಧಿಕಾರಿಯನ್ನು ಬಲಿ ತೆಗೆದುಕೊಂಡು ಆ ಕುಟುಂಬವನ್ನು ಬೀದಿಪಾಲು ಮಾಡಿದಿರಲ್ಲ.. ನಿಮ್ಮ ಪ್ರಾಮಾಣಿಕತೆ ಎಂದರೆ ಇದೇನಾ? ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.
ಪೊಲೀಸ್ ಅಧಿಕಾರಿಗಳೇ ನೀವು ಜನರಿಗೆ, ಕರ್ತವ್ಯಕ್ಕೆ ನಿಷ್ಠರಾಗಿ ಕೆಲಸ ಮಾಡಿ. ನಮ್ಮ ಕಾರ್ಯಕರ್ತರ ಮೇಲೆ ಸಿಕ್ಕ ಸಿಕ್ಕವರಿಗೆಲ್ಲ ಕೇಸ್ ಹಾಕುತ್ತಿದ್ದೀರಿ. ಜಿಲ್ಲೆಯಲ್ಲಿ ಏನೇನ್ ನಡೆಯುತ್ತಿದೆ ಎನ್ನುವುದು ನನ್ನ ಗಮನಕ್ಕೂ ಬರುತ್ತಿದೆ. ಪರಮೇಶ್ವರ್ ಅವರೇ.. ಗಿಲಿಟಿನ ಮಾತು ಸಾಕು ಮಾಡಿ. ಪೊಲೀಸ್ ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂದು ಗಮನಿಸಿ. ಒಬ್ಬ ಪೋಲಿಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಮಡದಿಯ ಪರಿಸ್ಥಿತಿ ಏನು? ಈಗಲಾದರೂ ಪೊಲೀಸರು ಈ ಸರ್ಕಾರದ ವರ್ತನೆಯ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಪೊಲೀಸರಿಗೆ ಎಚ್ಚರಿಕೆ ಕೊಟ್ಟರು ಕುಮಾರಸ್ವಾಮಿ.
ನಾಡಿನ ಬಡ ಜನತೆ ಬೆವರು ಸುರಿಸಿ, ತೆರಿಗೆ ರೂಪದಲ್ಲಿ ಕಟ್ಟಿದ ಹಣ ಲೂಟಿ ಆಗುತ್ತಿದೆ. ಪರಿಶಿಷ್ಟರ ಹಣ ಲೂಟಿ ಮಾಡಿರುವ ಈ ಸರ್ಕಾರ ಇರಬೇಕೋ, ಬೇಡವೋ ಎನ್ನುವ ಕಾರ್ಯಕ್ರಮ ಇದು. ರಾಜ್ಯದಲ್ಲಿ ಭ್ರಷ್ಟಾಚಾರ ನಿಲ್ಲಿಸುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದಿರಿ. ಮಾತೆತ್ತಿದರೆ 136 ಸೀಟು ಗೆದ್ದಿದ್ದೇವೆ ಅಂತೀರಿ. ಶೀಘ್ರದಲ್ಲೇ ನೀವು 16 ಸೀಟಿಗೆ ಬಂದು ನಿಲ್ಲುವ ದಿನ ದೂರವಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ನಿಮ್ಮ ಭ್ರಷ್ಟಾಚಾರ ಸ್ವಚ್ಛ ಮಾಡುತ್ತೇನೆ
ನನ್ನ ಬಗ್ಗೆ, ವಿಜಯೇಂದ್ರ ಬಗ್ಗೆ ಡಿ.ಕೆ.ಶಿವಕುಮಾರ್ ಅತ್ಯಂತ ಲಘುವಾಗಿ ಮಾತಾಡಿದ್ದಾರೆ. ಸಿಡಿ ಶಿವು ಅವರು.. ನನ್ನ ಬಗ್ಗೆ, ನನ್ನ ವೃತ್ತಿಯ ಬಗ್ಗೆ ಮಾತನಾಡಿದ್ದಾರೆ. ಹೌದು.. ಬೆಂಗಳೂರಿನಲ್ಲಿ ಕಸ ತೆಗೆಯುವ ಕೆಲಸ ಮಾಡುತ್ತಿದ್ದೆ. ಜಯನಗರ, ವಿಲ್ಸನ್ ಗಾರ್ಡನ್, ಸುಧಾಮನಗರ ವಾರ್ಡುಗಳಲ್ಲಿ ಕಸ ವಿಲೇವಾರಿ ಮಾಡುವ ಗುತ್ತಿಗೆ ತೆಗೆದುಕೊಂಡಿದ್ದೆ. ಯಾರೋ ಹಿರಿಯರು ನನಗೆ ರಾಜಕೀಯಕ್ಕೆ ಬರಲು ಹೇಳಿ, ನೀನು ಕಸ ತೆಗೆಯುವ ಜಾಗ ಬೇರೆ ಇದೆ. ಅಲ್ಲಿ ಹೋಗಿ ಕೆಲಸ ಮಾಡು ಎಂದು ಹೇಳಿದರು. ಅದಕ್ಕೆ ರಾಜಕೀಯಕ್ಕೆ ಬಂದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ನಾನು ಮತ್ತು ಬಿಜೆಪಿಯರು ಕಾಂಗ್ರೆಸ್ ಭ್ರಷ್ಟಾಚಾರದ ಕಸ ಕ್ಲೀನ್ ಮಾಡಲು ನಾವು ಹೊರಟಿದ್ದೇವೆ. ಕರ್ನಾಟಕ ರಾಜ್ಯದ ಉದ್ದಗಲಕ್ಕೂ ವ್ಯವಸ್ಥೆಯನ್ನು ಹಾಳು ಮಾಡಿದ್ದೀರಿ.. ಅದನ್ನೇ ಸ್ವಚ್ಛ ಮಾಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು ಕುಮಾರಸ್ವಾಮಿ.
ಫಿಯಟ್ ಕಾರು ಮಾಡಿದ ದೇವೇಗೌಡರು
ನಾನು ಬಿಜೆಪಿ ಜತೆ ಎರಡನೇ ಬಾರಿ ಹೊಂದಾಣಿಕೆ ಮಾಡಿಕೊಂಡಿದ್ದೇನೆ. ಇದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಈ ನಾಡಿನ ಆರೂವರೆ ಕೋಟಿ ಜನ ನನ್ನ ಆಸ್ತಿ. ನನ್ನ ತಂದೆ 40 ವರ್ಷಗಳ ಸುಧೀರ್ಘ ರಾಜಕಾರಣ ಮಾಡಿದ್ದಾರೆ. ಅವರು ಒಂದೂವರೆ ವರ್ಷ ಮುಖ್ಯಮಂತ್ರಿ, 14 ತಿಂಗಳು ಪ್ರಧಾನಿಯಷ್ಟೇ ಆಗಿದ್ದರು. ದೇವರಾಜ ಅರಸು ಅವರು ಸಿಎಂ ಆಗಿದ್ದಾಗ ಸದಾಶಿವನಗರದಲ್ಲಿ ಒಂದು ನಿವೇಶನ ಕೊಟ್ಟರು. ನನಗೆ ಬೇಡವೇ ಬೇಡ ಎಂದರೂ ಅರಸು ಅವರು ಕೇಳಲಿಲ್ಲ. ಆಗ ನನ್ನ ತಂದೆಯವರ ಬಳಿ ಹಣ ಇರಲಿಲ್ಲ. ಕೊನೆಗೆ ಅವರ ಬಳಿ ಒಂದು ಫಿಯಟ್ ಕಾರು ಇತ್ತು. ನಿವೇಶನಕ್ಕಾಗಿ ಅವರು ಆ ಕಾರನ್ನು ಮಾಡಿದರು. ಆ ನಿವೇಶನವನ್ನು ಅವರು ಎಲ್ಲಾ ಮಕ್ಕಳಿಗೆ ಹಂಚಿದ್ದಾರೆ ಎಂದು ಕೇಂದ್ರ ಸಚಿವರು ಬಹಿರಂಗ ಸಭೆಯಲ್ಲಿ ಹೇಳಿದರು.
ಚಿನ್ನ ಅಳೆಯುತ್ತಿದ್ದರೋ ಅಥವಾ ಹುರುಳಿ ಕಾಳು ಅಳೆಯುತ್ತಿದ್ದರೋ..
ಕೆಂಪೇಗೌಡರ ವಂಶಸ್ಥರಂತೆ ಇವರು. ಕೆಂಪೇಗೌಡರ ಹೆಸರು ಹೇಳಲು ಅವರಿಗೆ ನಾಚಿಕೆ ಆಗಬೇಕು. ಕನಕಪುರದಲ್ಲಿ ಅವರ ತಂದೆ ಚಿನ್ನ ಅಳೆಯುತ್ತಿದ್ದರಂತೆ. ಅವರು ಚಿನ್ನ ಅಳೆಯುತ್ತಿದ್ದರೋ ಅಥವಾ ಹುರುಳಿ ಕಾಳು ಅಳೆಯುತ್ತಿದ್ದರೋ ಗೊತ್ತಿಲ್ಲ. ಕನಕಪುರದವರು ಅನೇಕರು ಇಲ್ಲಿದ್ದಾರೆ, ಅವರೇಕೆ ಅಳೆಯುತ್ತಿಲ್ಲ. ಎಲ್ಲಾ ಲೂಟಿ ಹೊಡೆದಾಗಿದೆ. ಪೇಟೆ ಬೀದಿಯಲ್ಲಿ ಅಂಗಡಿ ಇಟ್ಟವರು, ಫುಟ್ ಪಾತಲ್ಲಿ ಅಂಗಡಿ ಇಟ್ಟವರೆಲ್ಲಾ ಇಲ್ಲಿ ಇದ್ದಾರೆ. ಅವರಿಗೆಲ್ಲ ಚಿನ್ನ ಅಳೆಯೋರ ಕಥೆ ಗೊತ್ತಿದೆ ಎಂದು ಅವರು ಹೇಳಿದರು.
ಡಿಕೆಶಿ ನಿಮ್ಮ ಹಾಗೆ ನಾನು ಲೂಟಿ ಮಾಡಿಲ್ಲ
ಬಿಡದಿಯ ಕೇತಿಗಾನಹಳ್ಳಿ ಗ್ರಾಮದಲ್ಲಿರುವ ತಮ್ಮ ಜಮೀನು ಬಗ್ಗೆ ಉಲ್ಲೇಖ ಮಾಡಿದ ಕೇಂದ್ರ ಸಚಿವರು; ನಾನು ಚಲನಚಿತ್ರ ಡಿಸ್ಟ್ರಿಬ್ಯೂಟರ್ ಆಗಿದ್ದಾಗ ಚೈನಾ ಸಾಬ್ರು ಅಂತ ಇಬ್ಬರು ಇದ್ದರು. ನೀನು ದೇವೆಗೌಡರ ಮಗ, ಬೇಸಾಯ ಮಾಡಬೇಕು. ನೀನು ರೈತನಾಗಿ ಬಾಳಿ ಬದುಕಬೇಕು ಎಂದು ಹೇಳಿ ಕರೆದುಕೊಂಡು ಹೋಗಿ ಈ ಜಾಮೀನು ತೋರಿಸಿದರು. ಆ ಜಾಗ ನೋಡಿ ನಾನು. ನೀವು ನೋಡಿದ್ರೆ ಕಲ್ಲು ಹೊಡೆಯುವ ಜಾಗ ತೋರಿಸ್ತಿದ್ದೀರಲ್ಲ ಅಂದೆ. ಆಮೇಲೆ ಕಷ್ಟಪಟ್ಟು ಒಳ್ಳೆಯ ತೋಟ ಮಾಡಿದ್ದೇನೆ. ಯಾರು ಬೇಕಾದರೂ ಬಂದು ನೋಡಬಹುದು. ನನಗೆ ಆ ಜಾಮೀನು ಮಾರಿದ ಯಾರನ್ನು ನಾನು ಕೊಟ್ಟವರನ್ನು ಯಾರನ್ನು ಮರೆತಿಲ್ಲ, ಡಿ.ಕೆ.ಶಿವಕುಮಾರ್ ಅವರೇ.. ನಿಮ್ಮ ಹಾಗೆ ಕಂಡ ಕಂಡ ಕಂಡ ಕಂಡಿದ್ದೆಲ್ಲವನ್ನೂ ಲೂಟಿ ಹೊಡೆದಿಲ್ಲ.
ಬೆಂಗಳೂರು ದಕ್ಷಿಣ ಎಂದು ಹೇಳಿಕೊಂಡು ಜನರನ್ನು ದಾರಿ ತಪ್ಪಿಸುವ ಕೆಲಸ ಸುರಿದಿದ್ದಾರೆ. ರಾಮನಗರ ಹೆಸರು ಕಿತ್ತು ಹಾಕಿದಾಕ್ಷಣ ಭೂಮಿ ಬೆಲೆ ಜಾಸ್ತಿ ಆಗುತ್ತದೆಯೇ? ಬ್ರ್ಯಾಂಡ್ ಬೆಂಗಳೂರು ಎಂದು ಹೇಳಿಕೊಂಡು ಏನೆಲ್ಲಾ ಮಾಡುತ್ತೀದ್ದೀರಿ ಎನ್ನುವುದು ನನಗೆ ಗೊತ್ತಿದೆ. ಕನಕಪುರದಲ್ಲಿ ನೀವು ಲೋಕಸಭೆ ಚುನಾವಣೆಯಲ್ಲಿ ಎಷ್ಟು ಮತ ಪಡೆದಿರಿ. ಅಷ್ಟು ಮತ ಪಡೆಯೋಕೆ ನೀವು ಜನರಿಗೆ ಎಷ್ಟು ಹಿಂಸೆ ಕೊಟ್ಟಿದ್ದೀರಿ? ಎಲ್ಲರಿಗೂ ಗೊತ್ತಿದೆ ಎಂದು ನುಡಿದರು.
ನನ್ನ ತೆರಿಗೆ ನನ್ನ ಹಕ್ಕು; ಸಚಿವರ ಲೇವಡಿ
ಕೇಂದ್ರದಿಂದ ಏನೂ ಅನುದಾನ, ತೆರಿಗೆ ಪಾಲು ಕೊಡಲಿಲ್ಲ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದೀರಿ. ನನ್ನ ತೆರಿಗೆ, ನನ್ನ ಹಕ್ಕು ಅಂತ ಕೂಗಾಡಿದ್ದೂ, ಕೂಗಾಡಿದ್ದೆ. ಆದರೆ, ವಾಲ್ಮೀಕಿ ನಿಗಮದ ಹಣ ಏನು ಮಾಡಿದ್ರಪ್ಪಾ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ಶಾಸಕರ ವಿರುದ್ಧ ಗುಡುಗು
ರಾಮನಗರದಲ್ಲಿ 1995ರಲ್ಲಿ ಓಡಾಡಲು ಆಗುತ್ತಿತ್ತಾ? ಈಗ ಒಬ್ಬ ವ್ಯಕ್ತಿಯನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಅವರು ಏನು ಅಭಿವೃದ್ಧಿ ಮಾಡುತ್ತಿದ್ದಾರೆ ಎನ್ನುವುದನ್ನು ನಾನು ಬಲ್ಲೆ. ರಾಮ ಮತ್ತಿಕೆರೆ ಹೋಗಿ ನೋಡಿ, ಕಲ್ಲುಗಳು ಎದ್ದು ಹೊರಗೆ ಬಂದಿವೆ ಎಂದು ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಗುಡುಗಿದರು ಕುಮಾರಸ್ವಾಮಿ.
ರಾಮನಗರ ಕ್ಷೇತ್ರ ಹಾಳಾಗ್ತಿದೆ: ಮುಸ್ಲಿಮರಿಗೆ ಕಿವಿಮಾತು ಹೇಳಿದ ಕೇಂದ್ರ ಸಚಿವರು
ಮುಸ್ಲಿಮ್ ಸಮುದಾಯ ಬಗ್ಗೆ ತಮ್ಮ ಭಾಷಣದಲ್ಲಿ ತೀಕ್ಷ್ಣವಾಗಿ ಉಲ್ಲೇಖ ಮಾಡಿದ ಕುಮಾರಸ್ವಾಮಿ ಅವರು; ನಮ್ಮನ್ನೇ ಆಯ್ಕೆ ಮಾಡಿ ಎಂದು ನಾನು ಹೇಳುತ್ತಿಲ್ಲ. ಉತ್ತಮರನ್ನು ಆಯ್ಕೆ ಮಾಡಿ ಅಂತ ಮನವಿ ಮಾಡಿದ್ದೇನೆ. ನೀವು ಎಷ್ಟು ದಿನ ನೀವು ಹೀಗೆ ಮಾಡ್ತೀರಾ ನೋಡ್ತೀನಿ. ನೀವು ಆರಿಸಿ ಕಳಿಸಿದ ಮನೆ ಮಗ ಕುಮಾರಸ್ವಾಮಿಯನ್ನು ಏನೂ ಮಾಡಲು ಸಾಧ್ಯವಿಲ್ಲ. ನೀವು ನಂಬಿ ಮತ ಹಾಕಿದ ವ್ಯಕ್ತಿ, ಅವರ ಪಕ್ಷ ರಾಮನಗರದಲ್ಲಿ ಏನೆಲ್ಲಾ ಮಾಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಊರೂ ಊರಿಗೆ ಬೆಂಕಿ ಹಾಕಿದ್ದರು. ಅವತ್ತು ನಾನು ದೇವೇಗೌಡರನ್ನು ಇಲ್ಲಿಗೆ ಕರೆದುಕೊಂಡು ಬಂದೆ. ಈಗ ಬಂದಿರೋದು ಕ್ಷೇತ್ರವನ್ನು ಹಾಳು ಮಾಡುತ್ತಿದ್ದಿರಿ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ-ಜೆಡಿಎಸ್ ಪಿತೂರಿಗೆ ಜಗ್ಗುವುದಿಲ್ಲ, ಜನರಿಗೆ ವಾಸ್ತವದ ಅರಿವು ಮೂಡಿಸಲು ಸಂಕಲ್ಪ: ಕೆ.ಸಿ. ವೇಣುಗೋಪಾಲ್
BREAKING: ನಾಪತ್ತೆಯಾಗಿದ್ದ ಕಾಂಗ್ರೆಸ್ ‘ಶಾಸಕ ಚನ್ನಾರೆಡ್ಡಿ’ ಸಿಎಂ ಕಾವೇರಿ ನಿವಾಸದಲ್ಲಿ ಪ್ರತ್ಯಕ್ಷ