ಬೆಂಗಳೂರು: ಮಾಗಡಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಗೌಡರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಮತ ಕೊಡದೆ ಇದ್ದರೆ ಗ್ಯಾರಂಟಿಗಳನ್ನು ರದ್ದು ಮಾಡುವುದಾಗಿ ಎಚ್ಚರಿಕೆಯನ್ನು ಮತದಾರರಿಗೆ ಕೊಟ್ಟಿದ್ದಾರೆ. ಹಿರಿಯ ಶಾಸಕ ಬಾಲಕೃಷ್ಣ ಗೌಡರ ಎಚ್ಚರಿಕೆ, ಬೆದರಿಕೆ ಮತ್ತು ಬ್ಲ್ಯಾಕ್ಮೇಲ್ ಅನ್ನು ನೀವು ಸಮರ್ಥಿಸುವಿರಾ ಎಂದು ನಾನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕೇಳಲು ಬಯಸುತ್ತೇನೆ ಎಂಬುದಾಗಿ ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಪ್ರಶ್ನಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಎಂಪಿ ಮತ್ತು ಇತರ ಮುಂದಿನ ಚುನಾವಣೆಯಲ್ಲಿ ಮತ ಹಾಕುವಿರೆಂದು ಗ್ಯಾರಂಟಿ ಕೊಡುತ್ತಿದ್ದೇವೆ. ಇಲ್ಲವಾದರೆ ರದ್ದು ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಎಚ್ಚರಿಕೆ ಕೊಡುತ್ತಿದ್ದಾರೆ. ಇದು ಎಷ್ಟು ಸರಿ ಎಂದು ಕೇಳಿದರು.
ಜನರಿಗೆ ಹೆದರಿಸಿ, ಬೆದರಿಸಿ, ಗ್ಯಾರಂಟಿ ಎನ್ನುವ ಬಡಿಗೆ ಹಿಡಿದು ವೋಟ್ ಕೇಳ್ತ ಇದ್ದೀರ? ಮತದಾರರನ್ನು ಬ್ಲ್ಯಾಕ್ಮೇಲ್ ಮಾಡ್ತ ಇದ್ದೀರ? ಎಂದು ಪ್ರಶ್ನೆ ಮಾಡಿದರಲ್ಲದೆ, ಈ ಬಗ್ಗೆ ಮುಖ್ಯಮಂತ್ರಿಗಳು ಕೂಡಲೇ ಗಮನ ಹರಿಸಬೇಕೆಂದು ವಿನಂತಿಸಿದರು.
ನಮ್ಮ ದೇಶದಲ್ಲಿ ಕಾಂಗ್ರೆಸ್ಗೇ ಗ್ಯಾರಂಟಿ ಇಲ್ಲ. ಇನ್ನು ಕಾಂಗ್ರೆಸ್ ಸರಕಾರ ಕೊಡುವ ಗ್ಯಾರಂಟಿಗಳಿಗೇನಾದರೂ ಗ್ಯಾರಂಟಿ, ವಾರಂಟಿ ಇದೆಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ರಾಹುಲ್ ಗಾಂಧಿಯವರನ್ನು ಪ್ರಶ್ನಿಸಲು ಬಯಸುವುದಾಗಿ ಹೇಳಿದರು. ಹಿಮಾಚಲ ಪ್ರದೇಶದಲ್ಲಿ ನೀವು ಗ್ಯಾರಂಟಿ ಪ್ರಕಟಿಸಿದ್ದೀರಿ. ಅವು ಈಡೇರಿವೆಯೇ ಎಂದು ಕೇಳಿದರು.
ಹಿಮಾಚಲ ಪ್ರದೇಶದಲ್ಲಿ ಹಳೆ ಪಿಂಚಣಿ ಪದ್ಧತಿ ಜಾರಿ ಮಾಡುವುದಾಗಿ ಹೇಳಿದ್ದೀರಿ. ಅದನ್ನು ಈಡೇರಿಸಿಲ್ಲ. ಕರ್ನಾಟಕ ರಾಜ್ಯದಲ್ಲೂ 5 ಗ್ಯಾರಂಟಿಗಳನ್ನು ನೀವು ಸರಿಯಾಗಿ ಕೊಡುತ್ತಿಲ್ಲ. ನಿರುದ್ಯೋಗಿ ಯುವಕರಿಗೆ ಯುವನಿಧಿಯನ್ನು ಕೇವಲ 18 ಸಾವಿರ ಜನರಿಗೆ ಕೊಡುತ್ತಾ ಇದ್ದೀರಿ. ಸಾಕಾಗುತ್ತ? ಇದಾ ನಿಮ್ಮ ಗ್ಯಾರಂಟಿ ಎಂದು ಪ್ರಶ್ನೆ ಮುಂದಿಟ್ಟರು.
ರಾಜ್ಯಕ್ಕೆ 71 ಆಶ್ವಾಸನೆ ಕೊಟ್ಟಿದ್ದೀರಿ. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರಿಗೆ ಆಶ್ವಾಸನೆ ಕೊಟ್ಟಿದ್ದಾರೆ. ಫಿಲಂ ಸಿಟಿ ತರುವುದಾಗಿ ಹೇಳಿದ್ದಾರೆ. 100 ಮಹಿಳಾ ಪಿಯು ಕಾಲೇಜು ಸ್ಥಾಪಿಸುವುದಾಗಿ ಹೇಳಿದ್ದೀರಿ. ಅವು ಈಡೇರಿವೆಯೇ? ಮದರ್ ಆಂಡ್ ಚೈಲ್ಡ್ ಹಾಸ್ಪಿಟಲ್ಗೆ ಎಲ್ಲಿ ಹಣ ಕೊಟ್ಟಿದ್ದೀರಿ? ಗುಲ್ಬರ್ಗ ಮತ್ತು ಬಳ್ಳಾರಿ ಮಧ್ಯದಲ್ಲಿ ಆರು ಲೇನ್ ಹೈವೇ ಮಾಡುವುದಾಗಿ ಹೇಳಿದ್ದೀರಿ. ಹಣ ಏನಾದರೂ ತೆಗೆದಿಟ್ಟಿದ್ದೀರಾ? ಎಂದು ಪ್ರಶ್ನಿಸಿದರು.
ಮಂಡ್ಯ ರಿಂಗ್ ರೋಡಿಗೆ 5 ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದೀರಿ. ಹಣ ಕೊಟ್ಟಿದ್ದೀರಾ? ಡಾ. ರಾಜ್ಕುಮಾರ್ ಫಿಲಂ ಸಿಟಿಗೆ ಹಣ ಎಷ್ಟು ಕೊಟ್ಟಿದ್ದೀರಿ? ಮೈಸೂರಿನಲ್ಲಿ ಸ್ಪೋಟ್ರ್ಸ್ ಯುನಿವರ್ಸಿಟಿ ಮಾಡುವುದಾಗಿ ಹೇಳಿದ್ದೀರಿ. ಏನು ಮಾಡಿದ್ದೀರಿ. ಗಡಿ ಭಾಗದಲ್ಲಿರುವ ಕನ್ನಡ ಶಾಲೆಗಳಿಗೆ ಒಂದು ಕೋಟಿ ಸಬ್ಸಡಿ ಕೊಡುವುದಾಗಿ ಹೇಳಿದ್ದೀರಿ. ಎಷ್ಟು ಶಾಲೆಗಳಿಗೆ ಹಣ ಕೊಟ್ಟಿದ್ದೀರಿ ಎಂದು ಕೇಳಿದರು.
ಉತ್ತರ ಕರ್ನಾಟಕದ ಮಹದಾಯಿ ಯೋಜನೆಗೆ ಎಷ್ಟು ಹಣ ಕೊಟ್ಟಿದ್ದೀರಿ? ಕಾರವಾರ, ಧಾರವಾಡ, ಬಿಜಾಪುರ, ಬಾಗಲಕೋಟೆಗಳಲ್ಲಿ 500 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತೆಗಳನ್ನು ತೆರೆಯುವುದಾಗಿ ಹೇಳಿದ್ದೀರಿ. ಎಷ್ಟು ಕೋಟಿ ಕೊಟ್ಟಿದ್ದೀರಿ? ಕಿತ್ತೂರು ಕರ್ನಾಟಕದಲ್ಲಿ ಒನ್ ದಾಲ್ ಒನ್ ಪ್ರೊಕ್ಯೂರ್ಮೆಂಟ್ ಅನುಷ್ಠಾನದ ಭರವಸೆ ಕೊಟ್ಟಿದ್ದೀರಿ? ಅದು ಏನಾಗಿದೆ ಎಂದು ಪ್ರಶ್ನೆ ಮಾಡಿದರು.
ಕಾಂಗ್ರೆಸ್ ಪಕ್ಷಕ್ಕೇ ಗ್ಯಾರಂಟಿ ಇಲ್ಲ..
ಅಭಿವೃದ್ಧಿ ಸ್ಥಗಿತಗೊಳಿಸಿ ಗ್ಯಾರಂಟಿ ಯೋಜನೆಗಳಿಗೆ ಹಣ ಕೊಡುವುದಾಗಿ ನೀವೇ ಒಪ್ಪಿಕೊಂಡಿದ್ದೀರಿ. ಹೀಗೆ ಬಾಲಕೃಷ್ಣ ಗೌಡರು ನಿಜವನ್ನು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಅತ್ಯಂತ ಅಸಹಾಯಕ ಪರಿಸ್ಥಿತಿಯಲ್ಲಿದೆ. ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೇ ಗ್ಯಾರಂಟಿ ಇಲ್ಲ. ಇಂಡಿಯ ಒಕ್ಕೂಟಕ್ಕೆ ಎಲ್ಲಿದೆ ಗ್ಯಾರಂಟಿ ಎಂದು ರವಿಕುಮಾರ್ ಅವರು ಪ್ರಶ್ನೆಯನ್ನು ಮುಂದಿಟ್ಟರು.
ನೀವು ಕೊಡುವ ಗ್ಯಾರಂಟಿಗಳಿಗೆ ಎಲ್ಲಿದೆ ಗ್ಯಾರಂಟಿ? ಇದಕ್ಕೆ ತಕ್ಕ ಉತ್ತರವನ್ನು ಜನತೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಉದ್ಯೋಗಾಕಾಂಕ್ಷಿ’ಗಳ ಗಮನಕ್ಕೆ: ಫೆ.19, 20ರಂದು ರಾಜ್ಯಮಟ್ಟದ ‘ಬೃಹತ್ ಉದ್ಯೋಗ ಮೇಳ’ ಆಯೋಜನೆ
BREAKING : ‘CUET PG 2024’ ನೋಂದಣಿ ಗಡುವು ವಿಸ್ತರಣೆ ; ಫೆ.7ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ