ವಿಜಯಪುರ : ರಾಜ್ಯದಲ್ಲಿ ಗೋಹತ್ಯೆ ಹಾಗೂ ಅಕ್ರಮವಾಗಿ ಗೋವುಗಳ ಮಾರಾಟ ನಿಷೇಧವಿದ್ದರೂ ಕೂಡ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗೋವುಗಳನ್ನು ರಕ್ಷಣೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೆಬೇವನೂರು ಗ್ರಾಮದಲ್ಲಿ ನಡೆದಿದೆ. ಗ್ರಾಮಸ್ಥರೇ ವಾಹನಗಳನ್ನು ಅಡ್ಡಗಟ್ಟಿ 110 ಕ್ಕೂ ಹೆಚ್ಚು ಗೋವು ಮತ್ತು ಕರುಗಳನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ನೆರೆಯ ರಾಜ್ಯ ಮಹಾರಾಷ್ಟ್ರದಿಂದ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣಕ್ಕೆ ಅಕ್ರಮವಾಗಿ ಗೋವು ಮತ್ತು ಕರುಗಳನ್ನು ಸಾಗಾಟ ಮಾಡುತ್ತಿದ್ದರು ಎಂಬುದಾಗಿ ತಿಳಿದು ಬಂದಿದೆ.ತಡರಾತ್ರಿ ಬುಲೆರೋ ಪಿಕ್ ಅಪ್ ಗೂಡ್ಸ್ ವಾಹನಗಳಲ್ಲಿ ಅಕ್ರಮವಾಗಿ ಹಸುಗಳು ಹಾಗೂ ಕರುಗಳನ್ನು ಸಾಗಾಟ ಮಾಡಲಾಗುತ್ತಿತ್ತು.ಖಚಿತ ಮಾಹಿತಿ ಮೇರೆಗೆ ಗ್ರಾಮಸ್ಥರು ವಾಹನಗಳನ್ನು ತಡೆದಿದ್ದಾರೆ.

ವಾಹನಗಳನ್ನು ತಡೆಯುತ್ತಿದ್ದಂತೆ ಎರಡು ವಾಹನಗಳ ಚಾಲಕರು ಪರಾರಿಯಾಗಿದ್ದಾರೆ. ಈ ವೇಳೆ ಓರ್ವ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ತಪಾಸಣೆ ನಡೆಸಿದಾಗ ಒಟ್ಟು ಮೂರು ವಾಹನಗಳಲ್ಲಿ ಗೋವುಗಳ ಕಾಲುಗಳನ್ನು ಕಟ್ಟಿ ಬಾಯಿಗೆ ಪ್ಲಾಸ್ಟಿಕ್ ಟೇಪ್‌ ಅಂಟಿಸಿದ್ದು, ಒಂದರ ಮೇಲೊಂದರಂತೆ ದುಷ್ಕರ್ಮಿಗಳು ಕಟ್ಟಿಹಾಕಿರುವುದು ಗೊತ್ತಾಗಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇಂಡಿ ಗ್ರಾಮೀಣ ಪೊಲೀಸ್‌ ಠಾಣೆಗೆ ಗ್ರಾಮಸ್ಥರು ಕೂಡಲೇ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಗೋವುಗಳನ್ನು ವಿಜಯಪುರದ ಗೋಶಾಲೆಗೆ ಕಳುಹಿಸಿದ್ದಾರೆ. ಇನ್ನುಳಿದಂತೆ ವಾಹನದಲ್ಲೇ ಮೃತಪಟ್ಟಿದ್ದ 1 ಗೋವು ಹಾಗೂ 11 ಕರುಗಳ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಈ ಕುರಿತು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Share.
Exit mobile version