ಬೆಂಗಳೂರು: ವಾಲ್ಮೀಕ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಾನು ಸಿ.ಟಿ ರವಿ ಇಬ್ಬರೂ ಪಾಟ್ನರ್ಸ್ ಆಗಿದ್ದೇವೆ. ಸಿಎಂ, ನಾನು ಹಣ ಹಂಚಿಕೊಂಡಿದ್ದಾರೆ ಅಂತ ಹೇಳಿದ್ದಾರೆ. ಆದ್ರೇ ರವಿ ಮತ್ತು ನಾನು ಇಬ್ಬರೂ ಹಂಚಿಕೊಂಡಿದ್ದೇವೆ ಅಂತ ಡಿಸಿಎಂ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ನಗರದ ಸಿವಿಲ್ ಕೋರ್ಟ್ ಮುಂಭಾಗದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು.
ರವಿ ಮತ್ತು ನಾನು ಹಣ ಹಂಚಿಕೊಂಡಿದ್ದೇವೆ
ಸಿ.ಟಿ. ರವಿ ಆರೋಪದ ಬಗ್ಗೆ ಕೇಳಿದಾಗ “ಯಾರೋ ಒಬ್ಬ ರವಿ ಎನ್ನುವವನು ನನ್ನ ಮೇಲೆ ಹೇಳುತ್ತಿದ್ದಾನೆ. ನಾನು ಮತ್ತು ಅವನು ಇಬ್ಬರೂ ಪಾರ್ಟನರ್ಸ್. ಸಿಎಂ ಮತ್ತು ನಾನು ಹಣ ಹಂಚಿಕೊಂಡಿದ್ದೇವೆ ಎಂದು ಹೇಳಿದ್ದಾನಲ್ಲ. ಆದರೆ ರವಿ ಮತ್ತು ನಾನು ಇಬ್ಬರೂ ಹಂಚಿಕೊಂಡಿದ್ದೇವೆ” ಎಂದು ತಿರುಗೇಟು ನೀಡಿದರು.
ಹಗರಣದ ತನಿಖೆಯನ್ನು ಸಿಬಿಐಗೆ ನೀಡಬೇಕು ಎನ್ನುವ ಆಗ್ರಹದ ಬಗ್ಗೆ ಕೇಳಿದಾಗ “ಇಂತಿಷ್ಟು ಕೋಟಿಯ ಬ್ಯಾಂಕ್ ಅವ್ಯವಹಾರ ನೇರವಾಗಿ ಸಿಬಿಐ ತನಿಖೆಗೆ ಹೋಗುತ್ತದೆ. ಅದು ನಿಯಮ. ಇಲ್ಲಿ ಸರ್ಕಾರ ಕೊಡಬೇಕಾದ್ದು, ಅವರು ತೆಗೆದುಕೊಳ್ಳಬೇಕಾದ್ದು ಏನಿಲ್ಲ. ನಾವು ತನಿಖೆಗೆ ಸಹಕಾರ ನೀಡುತ್ತೇವೆ. ಅವರು ಸಹ ಯಾವುದೇ ರಾಜಕೀಯ ಮಾಡದೆ ತನಿಖೆ ಮಾಡಲಿ” ಎಂದರು.
ಹಣ ಅಕ್ರಮ ವರ್ಗಾವಣೆ ಸಮಗ್ರ ತನಿಖೆ:
ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಬಗ್ಗೆ ಕೇಳಿದಾಗ “ನಾವು ಯಾರನ್ನು ಈ ಪ್ರಕರಣದಲ್ಲಿ ರಕ್ಷಿಸುವುದಿಲ್ಲ. ಬಿಜೆಪಿ ಕಾಲದಲ್ಲೂ ಈ ರೀತಿಯ ಘಟನೆಗಳು ನಡೆದಿವೆ. ಇದು ಬೊಮ್ಮಾಯಿ ಅವರು ಸೇರಿದಂತೆ ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ಸಮಗ್ರ ತನಿಖೆ ಮಾಡುತ್ತೇವೆ” ಎಂದರು.
ಈಶ್ವರಪ್ಪ ರಾಜಿನಾಮೆಗೆ ಆಗ್ರಹಿಸಿದವರು, ಈಗ ಏಕೆ ಸುಮ್ಮನಿದ್ದೀರಿ ಎಂದು ಕೇಳಿದಾಗ “ಆ ಪ್ರಕರಣದಲ್ಲಿ ನೇರವಾಗಿ ಈಶ್ವರಪ್ಪ ಅವರ ಹೆಸರು ಬಂದಿತ್ತು. ಇಲ್ಲಿ ಮಂತ್ರಿ ಹೇಳಿದ್ದರು ಎಂದು ಅಧಿಕಾರಿ ಹೇಳಿದ್ದಾರೆ ಎಂದಿದೆ. ನಮಗೆ ದಾಖಲೆ ಅಥವಾ ಪಾಲ್ಗೊಂಡಿರುವ ಬಗ್ಗೆ ಸುಳಿವು ಸಿಕ್ಕರೆ ನಮ್ಮ ಗೌರವ ಕಾಪಾಡಿಕೊಳ್ಳಲು ತನಿಖೆ ಮುಗಿಯುವ ತನಕ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಮಾಡುತ್ತೇವೆ. ನಮ್ಮ ಸರ್ಕಾರ ಪಾರದರ್ಶಕವಾಗಿ ಇರಬೇಕು. ನಿಗಮದ ಹಣ ಎಲ್ಲೆಲ್ಲಿ ಹೋಗಿದೆ ಎಂದು ಅಧಿಕಾರಿಗಳು ಬೆನ್ನುಹತ್ತಿದ್ದಾರೆ. ಹಣವನ್ನು ಮರಳಿ ಪಡೆಯುತ್ತೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದಷ್ಟು ಜನರ ಬಂಧನವಾಗಿದೆ” ಎಂದರು.
ನಮ್ಮ ಭ್ರಷ್ಟಾಚಾರ ಬಯಲು ಮಾಡಿ ಎಂದು ಬಿಜೆಪಿಯವರೇ ದುಂಬಾಲು; ನಮ್ಮ ಶಕ್ತಿ ತೋರಿಸುತ್ತೇವೆ: ಡಿಸಿಎಂ ಡಿಕೆಶಿ