ಹಾವೇರಿ : ಮಾನ್ಯ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಇಂದು ಹಾವೇರಿ ರೈಲ್ವೆ ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಯೊಂದಿಗೆ ರೈಲು ಸಂಖ್ಯೆ 20662 ಧಾರವಾಡ-ಕೆಎಸ್ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ಗೆ ಹಸಿರು ನಿಶಾನೆ ತೋರಿಸಿದರು.ಈ ಮಹತ್ವಪೂರ್ಣ ಸಂದರ್ಭದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಮತ್ತು ಬ್ಯಾಡಗಿಯ ಮಾನ್ಯ ಶಾಸಕರಾದ ಬಸವರಾಜ ನೀಲಪ್ಪ ಶಿವಣ್ಣನವರ್ ಉಪಸ್ಥಿತರಿದ್ದರು.
ಬಸವರಾಜ ಬೊಮ್ಮಾಯಿ ಅವರು ತಮ್ಮ ಭಾಷಣದಲ್ಲಿ, ಹಾವೇರಿಯಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಹೆಚ್ಚುವರಿ ನಿಲುಗಡೆ ನೀಡಿದ ಕುರಿತು ಸೋಮಣ್ಣ ಅವರಿಗೆ ಧನ್ಯವಾದ ತಿಳಿಸಿದರು. ಅವರು ಹಾವೇರಿ ರೈಲ್ವೆ ನಿಲ್ದಾಣದಲ್ಲಿ ಎರಡು ಎಸ್ಕಲೇಟರ್ಗಳ ಅಗತ್ಯವಿದೆ ಎಂಬುದನ್ನು ಗಮನಕ್ಕೆ ತಂದರು, ಗದಗ-ಯಾಳವಿಗಿ ಹೊಸ ಮಾರ್ಗದ ಸಮೀಕ್ಷೆಯನ್ನು ಶೀಘ್ರ ಪೂರ್ಣಗೊಳಿಸಲು ಹಾಗೂ ರಾಣೆಬೆನ್ನೂರು ಮತ್ತು ಬ್ಯಾಡಗಿಯಲ್ಲಿ ಕೃಷಿ ಉತ್ಪನ್ನಗಳ ಸಾಗಣೆಗಾಗಿ ಗೂಡ್ಸ್ ಶೆಡ್ಗಳ ವಿಸ್ತರಣೆ ಅಗತ್ಯವಿದೆ ಎಂದು ಒತ್ತಾಯಿಸಿದರು.
ಈ ಮನವಿಗೆ ಸ್ಪಂದಿಸಿದ ಸೋಮಣ್ಣ ಅವರು ಹಾವೇರಿ ನಿಲ್ದಾಣದಲ್ಲಿ ಶೀಘ್ರದಲ್ಲೇ ಎರಡು ಎಸ್ಕಲೇಟರ್ಗಳನ್ನು ಸ್ಥಾಪಿಸುವ ಭರವಸೆ ನೀಡಿದರು. ಜೊತೆಗೆ, ಹಾವೇರಿ-ಗದಗ ಪ್ರದೇಶದ ಎಲ್ಲಾ ಲೆವೆಲ್ ಕ್ರಾಸಿಂಗ್ಗಳನ್ನು ಬೇಗನೆ ತೆರವುಗೊಳಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ರೈಲ್ವೆ ಅಭಿವೃದ್ಧಿಯ ವಿವರಗಳನ್ನು ಹಂಚಿಕೊಂಡ ಅವರು, ದೇಶದಲ್ಲಿ ಈಗಾಗಲೇ 104 ವಂದೇ ಭಾರತ್ ರೈಲುಗಳು ಚಾಲನೆಯಲ್ಲಿವೆ ಎಂದು ತಿಳಿಸಿದರು, ಇದರಲ್ಲಿ 10 ರೈಲುಗಳು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿವೆ. ಹೊರತಾಗಿ,ಬೆಳಗಾವಿ-ಹಾವೇರಿ-ಬೆಂಗಳೂರು ಮಾರ್ಗದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಹಾಗೂ ಇನ್ನಷ್ಟು ಎರಡು ವಂದೇ ಭಾರತ್ ರೈಲುಗಳನ್ನು ರಾಜ್ಯಕ್ಕೆ ಪರಿಚಯಿಸುವ ಯೋಜನೆ ಇದೆ ಎಂದು ಹೇಳಿದರು. ಹೊಸ ಆಧುನಿಕ ಸೌಲಭ್ಯಗಳೊಂದಿಗೆ ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲುಗಳ ಸೇವೆಗಳನ್ನು ಈ ಭಾಗಕ್ಕೂ ವಿಸ್ತರಿಸಲಾಗುವುದು ಎಂದು ಹೇಳಿದರು .
ಸೋಮಣ್ಣ ಅವರು ರೈಲ್ವೆ ಮತ್ತು ಕೇಂದ್ರ ಬಜೆಟ್ ಗಳನ್ನು ವಿಲೀನಗೊಳಿಸಿದ್ದಕ್ಕಾಗಿ ಕೇಂದ್ರ ಸರ್ಕಾರವನ್ನು ಶ್ಲಾಘಿಸಿದರು, ಇದು ರೈಲ್ವೆ ಅಭಿವೃದ್ಧಿ ಕಾರ್ಯಗಳನ್ನು ವೇಗಗೊಳಿಸಲು ಸಹಾಯ ಮಾಡಿದೆ. ಮೊದಲ ಹಂತದಲ್ಲಿ ಕರ್ನಾಟಕದಲ್ಲಿ ಕವಚ್ ಸುರಕ್ಷತಾ ವ್ಯವಸ್ಥೆಯನ್ನು ಸ್ಥಾಪಿಸಲು 1,900 ಮಾರ್ಗ ಕಿಲೋಮೀಟರ್ ಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು. ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಡಿಪಿಆರ್ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಯೋಜನೆ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ಸೋಮಣ್ಣ ಅವರು ಕರ್ನಾಟಕದ ಪ್ರಮುಖ ರೈಲ್ವೆ ಮೂಲಸೌಕರ್ಯ ಯೋಜನೆಗಳ ಪ್ರಗತಿಯನ್ನು ಹಂಚಿಕೊಂಡರು.ಹುಬ್ಬಳ್ಳಿ-ಮಾಯಕೊಂಡ ದ್ವಿಪಥ ಮಾರ್ಗವನ್ನು ₹1,674 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ದೇವರಗುಡ್ಡ-ಕರಜಗಿ ವಿಭಾಗದಲ್ಲಿ ₹55 ಕೋಟಿ ಹಾಗೂ ತೋಳಹುಣಸೆ-ದೇವರಗುಡ್ಡ ವಿಭಾಗದಲ್ಲಿ ₹56 ಕೋಟಿ ವೆಚ್ಚದ ವಿದ್ಯುತೀಕರಣ ಕಾಮಗಾರಿಗಳು ಪೂರ್ಣಗೊಂಡಿವೆ. ಜೊತೆಗೆ, ಹರಪನಹಳ್ಳಿ ಮಾರ್ಗವಾಗಿ ಕೊಟ್ಟೂರು-ಹರಿಹರ ನಡುವಿನ 65 ಕಿ.ಮೀ ಉದ್ದದ ಹೊಸ ರೈಲು ಮಾರ್ಗವು ₹4,676 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್, ಸಿಸಿಎಂ/ಪಿಎಸ್ ಅನೂಪ್ ದಯಾನಂದ ಸಾಧು, ಹಾವೇರಿ ಜಿಲ್ಲಾಧಿಕಾರಿ ವಿಜಯ್ ಮಹಂತೇಶ್ ಡಿ ಮತ್ತು ಇತರ ಹಿರಿಯ ರೈಲ್ವೆ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳು ಭಾಗವಹಿಸಿದ್ದರು.