ಬೆಂಗಳೂರು: ಕೇಂದ್ರ ಸಚಿವರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಹೆಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯ ಪಕ್ಷದ ಮುಖಂಡರ ಸಭೆ ನಡೆಸಿ ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ದಿಸೆಯಲ್ಲಿ ಮಹತ್ವದ ಸಮಾಲೋಚನೆ ನಡೆಸಿದರು.
ಬಿಡದಿಯ ತಮ್ಮ ತೋಟದಲ್ಲಿ ಶುಕ್ರವಾರದಂದು ರಾಜ್ಯಾಧ್ಯಕ್ಷರು ಕರೆದಿದ್ದ ಈ ಸಭೆಯಲ್ಲಿ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಮಂತ್ರಿಗಳಾದ ಡಿ.ಸಿ. ತಮ್ಮಣ್ಣ, ಸಿ.ಎಸ್. ಪುಟ್ಟರಾಜು, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ, ಡಾ.ಕೆ. ಅನ್ನದಾನಿ, ಶಾಸಕ ಮಂಜುನಾಥ್, ಜಿಲ್ಲಾಧ್ಯಕ್ಷ ರಮೇಶ್, ಮುಖಂಡ ರಾಮಚಂದ್ರ ಪಾಲ್ಗೊಂಡಿದ್ದರು.
ಜಿಲ್ಲೆಯ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಮುಖಂಡರ ಜತೆ ಕೂಲಂಕಷವಾಗಿ ಚರ್ಚೆ ನಡೆಸಿದ ಸಚಿವರು, ಪಕ್ಷ ಸಂಘಟನೆಯಲ್ಲಿ ಎಲ್ಲರೂ ಗಂಭೀರವಾಗಿ ತೊಡಗಿಸಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ಅಲ್ಲದೆ, ಡಿಸಿಸಿ ಬ್ಯಾಂಕ್ ಚುನಾವಣೆಯ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಪಕ್ಷದ ಸಂಘಟನೆ ಬಗ್ಗೆ ಅಲಕ್ಷ್ಯ ಬೇಡ. ಕಳೆದ ಲೋಕಸಭೆ ಚುನಾವಣೆಯಲ್ಲಿ ದೊಡ್ಡ ಮಟ್ಟದ ಬಹುಮತದಲ್ಲಿ ಜಿಲ್ಲೆಯ ಜನತೆ ನಮ್ಮನ್ನು ಆಶೀರ್ವಾದ ಮಾಡಿದ್ದಾರೆ. ಅಧಿಕಾರವಿರಲಿ, ಇಲ್ಲದಿರಲಿ ಜನರ ಜತೆ ನೀವು ಸದಾ ಇರಬೇಕು. ಅವರ ನಿರೀಕ್ಷೆಯನ್ನು ಹುಸಿ ಮಾಡಬಾರದು ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಪ್ರತೀ ಮನೆ ಮತ್ತು ಗ್ರಾಮ ಗ್ರಾಮದಲ್ಲೂ ಪಕ್ಷ ಇರಬೇಕು:
ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಸಂಘಟನಾ ಪ್ರವಾಸ ಮುಗಿದಿದೆ. ಅದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಆ ನಂತರ ನೀವುಗಳು ಹೆಚ್ಚಿನ ಪ್ರಮಾಣದಲ್ಲಿ ಸದಸ್ಯತ್ವ ನೋಂದಣಿ ಮಾಡಿಸಬೇಕು. ಗ್ರಾಮ ಗ್ರಾಮದಲ್ಲಿಯೂ, ಮನೆ ಮನೆಯಲ್ಲಿಯೂ ಪಕ್ಷದ ಕಾರ್ಯಕರ್ತರು ಇರಬೇಕು ಎಂದು ಕುಮಾರಸ್ವಾಮಿ ಅವರು ಒತ್ತಿ ಹೇಳಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ನಮಗೆ ಉತ್ತಮ ಫಲಿತಾಂಶ ಬರಲಿಲ್ಲ. ಆದರೂ ನಾವು ಜನರ ಜತೆಯೇ ಇದ್ದೆವು. ಪರಿಣಾಮವಾಗಿ ಲೋಕಸಭೆ ಚುನಾವಣೆಯಲ್ಲಿ ಜನ ನಮ್ಮ ಕೈ ಹಿಡಿದರು. ಆ ಜನರ ಆಶೀರ್ವಾದದಿಂದ ನಾನು ಸಂಸತ್ ಸದಸ್ಯನಾಗಿ ಆಯ್ಕೆಯಾಗಿ ಕೇಂದ್ರದಲ್ಲಿ ಮಂತ್ರಿಯೂ ಆಗಿದ್ದೇನೆ. ಜಿಲ್ಲೆಯ ಜನರ ಜತೆ ನನಗೆ ರಾಜಕಾರಣಕ್ಕೂ ಮೀರಿದ ಭಾವನಾತ್ಮಕ ಸಂಬಂಧವಿದೆ. ಅದಕ್ಕೆ ಚ್ಯುತಿ ಬರಬಾರದಂತೆ ನೀವು ನಡೆದುಕೊಳ್ಳಬೇಕು. ಆ ಜನರ ಋಣ ತೀರಿಸುವ ಕೆಲಸವನ್ನು ನಾನು ಮಾಡಿಯೇ ಮಾಡುತ್ತೇನೆ. ಹೀಗಾಗಿ ನೀವೆಲ್ಲರೂ ಒಗ್ಗಟ್ಟಾಗಿ, ಪರಸ್ಪರ ಸಹಮತದಿಂದ ಪಕ್ಷದ ಕೆಲಸ ಮಾಡಬೇಕು ಎಂದು ಸಚಿವರು ತಾಕೀತು ಮಾಡಿದರು.
ಪಕ್ಷವನ್ನು ಯಾರೂ ಲಘುವಾಗಿ ತೆಗೆದುಕೊಳ್ಳಬೇಡಿ. ಪಕ್ಷವಿದ್ದರಷ್ಟೇ ನಾವು ಎಂಬುದನ್ನು ಮರೆಯಬಾರದು. ಸಂಘಟನೆಯಲ್ಲಿ ಬದ್ಧತೆ, ಗಂಭೀರವಾಗಿ ತೊಡಗಿಸಿಕೊಳ್ಳಿ. ಜನಪರ ಕಾರ್ಯಕ್ರಮಗಳನ್ನು ರೂಪಿಸಿ. ರಾಜ್ಯ ಸರಕಾರದ ದುರಾಡಳಿತದಿಂದ ಜನರು ರೋಸಿ ಹೋಗಿದ್ದಾರೆ. ಜಿಲ್ಲೆಯ ರೈತರು ಇನ್ನಿಲ್ಲದ ಸಂಕಷ್ಟದಲ್ಲಿದ್ದಾರೆ. ಮುಖ್ಯವಾಗಿ ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗಳಲ್ಲಿ ನಿಗದಿತ ಪ್ರಮಾಣದಲ್ಲಿ ಕಬ್ಬು ಅರಿಯದ ಕಾರಣ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ನಿಮ್ಮ ಜವಾಬ್ದಾರಿ ಹೆಚ್ಚಿದೆ. ಸದಾ ಜನರ ಜತೆ ನಿಂತು ದುಡಿಮೆ ಮಾಡಿ ಎಂದು ಅವರು ಸೂಚಿಸಿದರು.
ವೈಮಸು ಬಿಟ್ಟು ಕೆಲಸ ಮಾಡಿ:
ಸಣ್ಣಪುಟ್ಟ ವೈಮಸು ಇದ್ದರೆ ಮೊದಲು ಬಿಡಿ. ಅದರಿಂದ ಪಕ್ಷದ ಬೆಳವಣಿಗೆಗೆ ಧಕ್ಕೆ ಆಗುತ್ತದೆ. ಯಾರೂ ಪಕ್ಷಕ್ಕೆ ಹಾನಿ ಆಗುವ ರೀತಿ ನಡೆದುಕೊಳ್ಳಬಾರದು. ಏನೇ ಸಮಸ್ಯೆ ಇದ್ದರೂ ಸೌಹಾರ್ದಯುತವಾಗಿ ಸಭೆ ನಡೆಸಿ ಬಗೆಹರಿಸಿಕೊಳ್ಳಿ. ಪಕ್ಷದ ಸಂಘಟನೆ ಹಾಗೂ ಸಾಂಸ್ಥಿಕ ನೇಮಕಗಳಲ್ಲಿ ಗುರುತರ ಬದಲಾವಣೆಗಳು ಆಗಲಿವೆ. ಮುಂದಿನ ದಿನಗಳಲ್ಲಿ ಪಕ್ಷದ ವರ್ಚಸ್ಸು, ಬೆಳವಣಿಗೆ ದೃಷ್ಟಿಯಿಂದ ಕೆಲಸ ಮಾಡಬೇಕು. ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ. ಆಂತರಿಕ ಕಚ್ಚಾಟ, ಆಡಳಿತ ವಿರೋಧಿ ಅಲೆ ಸರ್ಕಾರವನ್ನು ಬಾಧಿಸುತ್ತಿದೆ. ನೀವೆಲ್ಲರೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಖಂಡತುಂಡವಾಗಿ ಸಚಿವರು ಹೇಳಿದರು.
ಆಭರಣ ಪ್ರಿಯರಿಗೆ ಶಾಕ್: ಮತ್ತೆ ಚಿನ್ನ ಬರೋಬ್ಬರಿ 2,200 ರೂ ಏರಿಕೆ | Gold Price Today
‘ಗ್ರಾಮ ಪಂಚಾಯ್ತಿ ಚುನಾವಣೆ’ಗೆ ‘ನಾಮಪತ್ರ’ದೊಂದಿಗೆ ಸಲ್ಲಿಸಲು ಈ ‘ದಾಖಲೆ’ಗಳು ಕಡ್ಡಾಯ
 
		



 




