ಬೀದರ್ : ಸಾಮಾನ್ಯವಾಗಿ ಬಸ್ ನಲ್ಲಿ ಪ್ರಯಾಣಿಸುವಾಗ ಮರೆತು ಅದೆಷ್ಟೋ ಜನ ಹಣ ಒಡವೆ ಕಳೆದುಕೊಂಡಿರುತ್ತಾರೆ. ಬಹುತೇಕ ಪ್ರಯಾಣಿಕರಿಗೆ ತಾವು ಕಳೆದುಕೊಂಡ ಹಣ, ಒಡವೆ ಮರಳಿ ಸಿಕ್ಕಿರುತ್ತದೆ. ಸಿಬ್ಬಂದಿಗಳು ವಸ್ತುಗಳನ್ನು ಮರಳಿಸಿರುತ್ತಾರೆ. ಇದೀಗ ಬೀದರ್ ನಲ್ಲಿ ಕೂಡ ಹಣ ಬಿಟ್ಟು ಹೋಗಿದ್ದ ಪ್ರಯಾಣಿಕನಿಗೆ ಸಾರಿಗೆ ಸಿಬ್ಬಂದಿ ಹಣ ಮರಳಿಸಿ ಮಾನವೀಯತೆ ಮೆರೆದಿದ್ದಾರೆ.
ಪ್ರಯಾಣ ಮಾಡುವಾಗ ಬಸ್ನಲ್ಲೇ ಬಿಟ್ಟು ಹೋಗಿದ್ದ 1.60ಲಕ್ಷ ಹಣವನ್ನು ಪ್ರಯಾಣಿಕನಿಗೆ ಮರಳಿ ನೀಡಿ ಕಂಡಕ್ಟರ್ ಮತ್ತು ಚಾಲಕ ಮಾನವೀಯತೆ ಮೆರೆದ ಘಟನೆ ಬೀದರ್ನಲ್ಲಿ ನಡೆದಿದೆ.ಗ್ರಾಮಕ್ಕೆ ತೆರಳಿ ವಯೋವೃದ್ಧನಿಗೆ ಹಣ ವಾಪಸ್ ನೀಡಿದ ನಿರ್ವಾಹಕ ಮತ್ತು ಚಾಲಕನ ಪ್ರಾಮಾಣಿಕತೆಗೆ ಜಿಲ್ಲೆಯ ಜನರು ಶ್ಲಾಘಿಸಿದ್ದಾರೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾಟಸಾಂಗ್ವಿ ಗ್ರಾಮದ ಬಳಿ ಈ ಘಟನೆ ನಡೆದಿದೆ. 1.60 ಲಕ್ಷ ರೂ. ಬಸ್ನಲ್ಲೇ ಬಿಟ್ಟು ಹೋದ ವಿಷಯ ತಿಳಿದು ಕರ್ತವ್ಯ ನಿರತ ಸಾರಿಗೆ ಬಸ್ ನಿರ್ವಾಹಕರಾದ ಸಿದ್ರಾಮ್ ಮತ್ತು ಚಾಲಕರಾದ ಹನೀಪ್ ಗ್ರಾಮಕ್ಕೆ ಹೋಗಿ ಹಣದ ಚೀಲ ಮರಳಿಸಿ ಮಾನವೀಯತೆ ಮೆರೆದಿದ್ದಾರೆ.