ನವದೆಹಲಿ:ಭಾರತ ಮತ್ತು ವಿಯೆಟ್ನಾಂ ನಡುವಿನ ನಾಗರಿಕ ಮತ್ತು ವ್ಯೂಹಾತ್ಮಕ ಸಂಬಂಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಹೇಳಿಕೆ ನೀಡಿದ್ದಾರೆ. ವಿಯೆಟ್ನಾಂ ಅಧ್ಯಕ್ಷ ಟೋ ಲಾಮ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ ಮಾತನಾಡಿದ ಮೋದಿ, “ನಮ್ಮ ನಡುವಿನ ಸುದೀರ್ಘ ಸ್ನೇಹ ಮತ್ತು ಸೌಹಾರ್ದತೆಯು ಈಗ ಭೌತಿಕ ಹಾಗೂ ಸ್ಪಷ್ಟವಾದ ಫಲಿತಾಂಶಗಳಾಗಿ (Concrete Results) ಬದಲಾಗುತ್ತಿವೆ,” ಎಂದು ಬಣ್ಣಿಸಿದ್ದಾರೆ.
ಭಾರತ ಮತ್ತು ವಿಯೆಟ್ನಾಂ ಈಗ ತಮ್ಮ ಸಂಬಂಧವನ್ನು ‘ವರ್ಧಿತ ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆ’ಗೆ (Enhanced Comprehensive Strategic Partnership) ಏರಿಸಿವೆ. ಇದು ರಕ್ಷಣೆ, ತಂತ್ರಜ್ಞಾನ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಹೊಸ ಹಾದಿ ತೆರೆಯಲಿದೆ.
ಭಾರತದ ಯುಪಿಐ ಮತ್ತು ವಿಯೆಟ್ನಾಂನ ವೇಗದ ಪಾವತಿ ವ್ಯವಸ್ಥೆಯನ್ನು ಶೀಘ್ರದಲ್ಲೇ ಪರಸ್ಪರ ಜೋಡಿಸಲು ನಿರ್ಧರಿಸಲಾಗಿದೆ. ಇದರಿಂದ ಉಭಯ ದೇಶಗಳ ನಡುವೆ ಹಣಕಾಸು ವಹಿವಾಟು ಸುಲಭವಾಗಲಿದೆ.
2030ರ ವೇಳೆಗೆ ಉಭಯ ದೇಶಗಳ ನಡುವಿನ ವ್ಯಾಪಾರ ವಹಿವಾಟನ್ನು 25 ಬಿಲಿಯನ್ ಡಾಲರ್ಗೆ (ಸುಮಾರು 2 ಲಕ್ಷ ಕೋಟಿ ರೂಪಾಯಿ) ಹೆಚ್ಚಿಸುವ ಗುರಿ ಹೊಂದಲಾಗಿದೆ. ಭಾರತದ ದ್ರಾಕ್ಷಿ ಮತ್ತು ದಾಳಿಂಬೆ ಹಣ್ಣುಗಳು ಈಗ ವಿಯೆಟ್ನಾಂ ಮಾರುಕಟ್ಟೆಗೆ ಲಗ್ಗೆ ಇಡಲಿವೆ.
ವಿಯೆಟ್ನಾಂನ ಪ್ರಾಚೀನ ‘ಚಂಪಾ’ ನಾಗರಿಕತೆಯ ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸಲು ಭಾರತ ನೆರವು ನೀಡಲಿದೆ ಎಂದು ಮೋದಿ ಘೋಷಿಸಿದ್ದಾರೆ.








