ವಿಜಯನಗರ : ವಿಜಯನಗರದಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಸಮೀಪದ ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಇಬ್ಬರು ಸಹೋದರರು ಮುಳುಗಿ ಸಾವನ್ನಪ್ಪಿದ ಘಟನೆ ಸೋಮವಾರ ರಾತ್ರಿ ನಡೆದಿದೆ. ಪಟ್ಟಣ ಸಮೀಪದ ಹಂಪಿನಕಟ್ಟೆ ಗ್ರಾಮದ ಕೂಲಿಕಾರ್ಮಿಕ ರಾಜಾಭಕ್ಷಿ (30) ಮತ್ತು ಅವರ ತಮ್ಮ ಬೀದರ್ ಜಿಲ್ಲೆ ಹುಮನಬಾದ್ನಲ್ಲಿ ಗ್ರಾಮ ಲೆಕ್ಕಿಗನಾಗಿ ಕೆಲಸ ಮಾಡುತ್ತಿದ್ದ ಬಾರಿ ಇಮಾಂ(26) ಮೃತರು.
ಇಬ್ಬರೂ ಅವಿವಾಹಿತರು ಎನ್ನಲಾಗಿದ್ದು, ಭಾನುವಾರ ಮನೆಯಲ್ಲಿ ಗ್ಯಾರ್ವಿ ಹಬ್ಬ ಆಚರಿಸಿಕೊಂಡಿದ್ದರು. ಸೋಮವಾರ ಸಂಜೆ ಕುಟುಂಬದ ಇತರೆ ಏಳು ಜನ ಸದಸ್ಯರೊಂದಿಗೆ ಸಮೀಪದ ಎಂಎಸ್ಪಿಎಲ್ ಕ್ರಾಸ್ ಬಳಿಯ ತುಂಗಭದ್ರಾ ಜಲಾಶಯದ ಹಿನ್ನೀರ ಪ್ರದೇಶಕ್ಕೆ ವನಭೋಜನಕ್ಕೆ ತೆರಳಿದ್ದರು. ಈಜು ಬಾರದ ಇಬ್ಬರು ನದಿಗೆ ಇಳಿದಿದ್ದಾಗ ಕಾಲು ಜಾರಿ ಬಿದ್ದು ಮುಳುಗಿದ್ದಾರೆ. ನಂತರ ಅಗ್ನಿಶಾಮಕ ಮತ್ತು ತುರ್ತು ಸೇವೆಯ ಸಿಬ್ಬಂದಿ ಬಂದು ಮೃತದೇಹಗಳನ್ನು ಹೊರತೆಗೆದರು ಎಂದು ತಿಳಿದುಬಂದಿದೆ.








