ನವದೆಹಲಿ: ಮುಧೋಳದಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರುಗಳು ಬೆಂಕಿಗೆ ಆಹುತಿಯಾಗಿರುವ ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು; ರಾಜ್ಯ ಸರಕಾರ ತಕ್ಷಣವೇ ಮಧ್ಯಪ್ರವೇಶಿಸಿ ಬಿಕ್ಕಟ್ಟನ್ನು ತಿಳಿಗೊಳಿಸಬೇಕು. ಕಬ್ಬು ಬೆಳೆಗಾರರ ಸಂಕಷ್ಟ ಮತ್ತೆ ಸೃಷ್ಟಿಯಾಗದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ಕಬ್ಬು ಬೆಳೆಗಾರರ ಸಂಕಷ್ಟ ಬಿಗಡಾಯಿಸಿದೆ. ಮುದೋಳದ ಸಕ್ಕರೆ ಕಾರ್ಖಾನೆಯ ಯಾರ್ಡ್ʼನಲ್ಲಿ ನಿಂತಿದ್ದ ಕಬ್ಬು ತುಂಬಿದ್ದ ಟ್ರಾಕ್ಟರುಗಳು ಬೆಂಕಿಗೆ ಆಹುತಿ ಆಗಿರುವುದು ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ. ಕಾಂಗ್ರೆಸ್ ಸರಕಾರದ ವೈಫಲ್ಯಕ್ಕೆ ಇದು ಸ್ಪಷ್ಟ ನಿದರ್ಶನ ಎಂದು ಟೀಕಿಸಿದರು.
ಬೆಳಗಾವಿಯಲ್ಲಿ ರೈತರು ಹೋರಾಟಕ್ಕಿಳಿದಾಗ ಆ ಕ್ಷಣಕ್ಕೇನೋ ಅವರ ಮೂಗಿಗೆ ತುಪ್ಪ ಸವರಿದ ಸರಕಾರವು, ಇಡೀ ಕಬ್ಬು ಬೆಳೆಗಾರರ ಬಿಕ್ಕಟ್ಟನ್ನು ನಿರ್ವಹಿಸುವಲ್ಲಿ ಘೋರ ವೈಫಲ್ಯ ಕಂಡಿತು. ಅದರ ಪರಿಣಾಮವೇ ಮುಧೋಳದಲ್ಲಿ ರೈತರ ತಾಳ್ಮೆಯ ಕಟ್ಟೆಯೊಡೆಯುಂತೆ ಮಾಡಿದೆ ಎಂದು ಸಚಿವರು ದೂರಿದ್ದಾರೆ.
ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಅನ್ನುವ ಲಾಭಕೋರ ಧೋರಣೆಯನ್ನು ಸರಕಾರ ಬಿಡಬೇಕು. ರೈತರ ಸಂಕಷ್ಟವನ್ನು ಅಧಿಕಾರದ ಅಮುಲುಗಣ್ಣಿನಿಂದ ನೋಡಬಾರದು. ಹೃದಯ ವೈಶಾಲ್ಯದಿಂದ ಕಾಣುವ ಔದಾರ್ಯ ತೋರಬೇಕು. ಮುಧೋಳದ ರೈತರ ಜತೆ ನಾನೂ ಇದ್ದೇನೆ ಎಂದು ಸಚಿವರು ಕಬ್ಬು ಬೆಳೆಗಾರರಿಗೆ ಧೈರ್ಯ ತುಂಬಿದ್ದಾರೆ.
ಮಾನವ-ವನ್ಯಪ್ರಾಣಿ ಸಂಘರ್ಷ ತಪ್ಪಿಸಲು ದ್ರೋಣ್ ಕ್ಯಾಮರಾಗಳ ನಿಗಾಗೆ ಸಿಎಂ ಸಿದ್ಧರಾಮಯ್ಯ ಸೂಚನೆ
2 ದಶಕದಲ್ಲಿ ಜಗತ್ತಿನಾದ್ಯಂತ 1600 ಪತ್ರಕರ್ತರ ಹತ್ಯೆಗೆ KUWJ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಆತಂಕ








