ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಡಿ.ಕೆ. ಶಿವಕುಮಾರ್ ಅವರಿಗೆ ಹಾರ್ದಿಕ ಅಭಿನಂದನೆಗಳು ಹಾಗೂ ಅವರ ಅಧಿಕಾರಾವಧಿಗೆ ಶುಭಾಶಯಗಳು. ಅವರು ರಾಜ್ಯದ ಸಮಗ್ರ ಅಭಿವೃದ್ಧಿ ಮತ್ತು ಜನಸಾಮಾನ್ಯರ ಹಿತಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಲಿ ಎಂದು ಆಶಿಸುತ್ತೇನೆ. ಆದರೆ, ಈ ನಾಯಕತ್ವ ಬದಲಾವಣೆಯಿಂದ ರಾಜ್ಯದ ಜನರಲ್ಲಿ ಯಾವುದೇ ಹೊಸ ಭರವಸೆ ಅಥವಾ ನಿರೀಕ್ಷೆ ಮೂಡಿಲ್ಲ ಎನ್ನುವುದೇ ಇಂದಿನ ಕಹಿ ಸತ್ಯವಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.
ನೂತನ ಸರ್ಕಾರದ ಪ್ರಮಾಣವಚನ ಮುಗಿಯುತ್ತಿದ್ದಂತೆ ಪ್ರಕಟಣೆ ಹೊರಡಿಸಿರುವ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅವರ ಪ್ರಕಟಣೆಯ ಮುಖ್ಯಾಂಶಗಳು ಈ ಕೆಳಗಿನಂತಿವೆ:
ಕೇವಲ ಮುಖ್ಯಸ್ಥರು ಬದಲಾಗಿದ್ದಾರೆ, ವ್ಯವಸ್ಥೆಯಲ್ಲ!
“ಕಳೆದ ಮೂರು ವರ್ಷಗಳಲ್ಲಿ ಭ್ರಷ್ಟಾಚಾರ, ತಾರತಮ್ಯದ ವರ್ಗಾವಣೆ ದಂಧೆ, ಕಮಿಷನ್ ಸಂಸ್ಕೃತಿ ಮತ್ತು ಸಾಲು ಸಾಲು ಆಡಳಿತ ವೈಫಲ್ಯಗಳಿಂದ ಈ ಸರ್ಕಾರ ಇಡೀ ರಾಜ್ಯವನ್ನು ತೀವ್ರ ಸಂಕಷ್ಟಕ್ಕೆ ತಳ್ಳಿತ್ತು. ಇಂದು ನಡೆದಿರುವ ಪ್ರಕ್ರಿಯೆಯಲ್ಲಿ ಸರ್ಕಾರದ ಮುಖ್ಯಸ್ಥರು ಮಾತ್ರ ಬದಲಾಗಿದ್ದಾರೆಯೇ ಹೊರತು, ಇವರ ಆಡಳಿತದ ಮನಸ್ಥಿತಿ ಮತ್ತು ಭ್ರಷ್ಟ ವ್ಯವಸ್ಥೆ ಬದಲಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಜನರು ಕೇವಲ ನಾಯಕತ್ವದ ಬದಲಾವಣೆಯನ್ನು ಬಯಸಿರಲಿಲ್ಲ; ಬದಲಾಗಿ ಆಡಳಿತದ ದಿಕ್ಕು ಹಾಗೂ ಸರ್ಕಾರದ ಆದ್ಯತೆಗಳು ಬದಲಾಗಬಹುದು ಎಂದು ನಿರೀಕ್ಷಿಸಿದ್ದರು” ಎಂದು ಅಶೋಕ್ ಅಸಮಾಧಾನ ಹೊರಹಾಕಿದ್ದಾರೆ.
ಅದೇ ಹಳೆಯ ಭ್ರಷ್ಟ ಮುಖಗಳಿಗೆ ಮತ್ತೆ ಮಂತ್ರಿ ಪಟ್ಟ!
ನೂತನ ಸಚಿವ ಸಂಪುಟದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಪಕ್ಷ ನಾಯಕರು, “ಇಂದು ಅಸ್ತಿತ್ವಕ್ಕೆ ಬಂದಿರುವ ಸಚಿವ ಸಂಪುಟವನ್ನು ಸೂಕ್ಷ್ಮವಾಗಿ ನೋಡಿದಾಗ ಜನರಿಗೆ ನಿರಾಸೆಯಾಗಿದೆ. ಕರ್ನಾಟಕವನ್ನು ಇಂತಹ ದುಸ್ಥಿತಿಗೆ ತಳ್ಳಲು ಕಾರಣರಾದ ಅದೇ ಹಳೆಯ ಭ್ರಷ್ಟ ಮುಖಗಳು ಮತ್ತೆ ಅಧಿಕಾರದ ಪ್ರಮುಖ ಕೇಂದ್ರಗಳಲ್ಲಿ ವಿರಾಜಮಾನವಾಗಿರುವುದು ಎದ್ದು ಕಾಣುತ್ತಿದೆ. ರಾಜ್ಯದ ಖಜಾನೆಯನ್ನು ಲೂಟಿ ಮಾಡಿದವರು, ಅಭಿವೃದ್ಧಿ ಕಾಮಗಾರಿಗಳನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸಿದವರು ಮತ್ತು ಸಾರ್ವಜನಿಕರ ವಿಶ್ವಾಸವನ್ನು ಕಳೆದುಕೊಂಡವರಿಗೇ ಮತ್ತೆ ಅಧಿಕಾರದ ಚುಕ್ಕಾಣಿ ನೀಡಲಾಗಿದೆ. ಹೀಗಾಗಿ, ಇದು ಯಾವುದೇ ಕಾರಣಕ್ಕೂ ಹೊಸ ಸರ್ಕಾರವಲ್ಲ, ಹಳೆಯ ಸರ್ಕಾರದ ಹೊಸ ಮಾರುವೇಷವಷ್ಟೇ” ಎಂದು ಟೀಕಿಸಿದ್ದಾರೆ.
ಮುಳ್ಳಿನ ಹಾದಿಯಲ್ಲಿ ನೂತನ ಸಿಎಂ ಪಯಣ
“ಕೇವಲ ಮುಖ್ಯಮಂತ್ರಿ ಬದಲಾವಣೆಯಿಂದಲೇ ರಾಜ್ಯದ ಹಣೆಬರಹ ಬದಲಾಗುವುದಿಲ್ಲ. ಭ್ರಷ್ಟಾಚಾರ, ಅಧಿಕಾರದ ದುರುಪಯೋಗ ಮತ್ತು ಜನವಿರೋಧಿ ರಾಜಕಾರಣವನ್ನು ಸಂಪೂರ್ಣವಾಗಿ ಬದಿಗೊತ್ತಿ, ಶ್ರೀಸಾಮಾನ್ಯರ ಪರವಾದ ಜನಸ್ನೇಹಿ ಸರ್ಕಾರ ನೀಡುವ ದೃಢ ಇಚ್ಛಾಶಕ್ತಿ ಇದ್ದಾಗ ಮಾತ್ರ ನಿಜವಾದ ಬದಲಾವಣೆ ಸಾಧ್ಯ. ನೂತನ ಮುಖ್ಯಮಂತ್ರಿಗಳ ಮುಂದೆ ಈಗ ಸುಲಭದ ಹಾದಿಯಿಲ್ಲ. ಅವರ ಮುಂದೆ ನಿಂತಿರುವುದು ಹೊಸ ಅವಕಾಶಗಳ ಪರ್ವತವಲ್ಲ; ಬದಲಾಗಿ ಅವರದ್ದೇ ಸರ್ಕಾರದ ಕಳೆದ ಮೂರು ವರ್ಷಗಳ ವೈಫಲ್ಯಗಳ ಅವಶೇಷಗಳು! ಆಡಳಿತ ವೈಫಲ್ಯ ಮತ್ತು ಮುರಿದ ಭರವಸೆಗಳ ಕರಿನೆರಳು ಅವರನ್ನು ಪ್ರತಿ ಹೆಜ್ಜೆಯಲ್ಲೂ ಹಿಂಬಾಲಿಸಲಿದೆ. ತಮ್ಮದೇ ಪಕ್ಷದ ಸರ್ಕಾರ ಬಿತ್ತಿರುವ ಮುಳ್ಳುಗಳ ಮೇಲೆಯೇ ಅವರು ಆಡಳಿತದ ಪಯಣ ಆರಂಭಿಸಬೇಕಾಗಿದೆ” ಎಂದು ಆರ್. ಅಶೋಕ್ ಎಚ್ಚರಿಸಿದ್ದಾರೆ.
ಕನ್ನಡಿಗರು ಭರವಸೆಗಳನ್ನಲ್ಲ, ಫಲಿತಾಂಶ ಬಯಸುತ್ತಿದ್ದಾರೆ!
“ಕುಸಿದು ಬಿದ್ದಿರುವ ಆಡಳಿತದ ಅವಶೇಷಗಳ ಮೇಲೆ ಹೊಸ ಸರ್ಕಾರವನ್ನು ಕಟ್ಟುವುದು ಅಷ್ಟು ಸುಲಭವಲ್ಲ. ಮುಖ್ಯಮಂತ್ರಿಗಳ ಮುಖ ಬದಲಾಗಿರಬಹುದು, ಆದರೆ ಕರ್ನಾಟಕದ ಜನತೆ ಕಳೆದ ಮೂರು ವರ್ಷಗಳ ಕಹಿ ನೆನಪನ್ನು ಮತ್ತು ಅನುಭವಿಸಿದ ತೊಂದರೆಗಳನ್ನು ಇಂದಿಗೂ ಮರೆತಿಲ್ಲ. ಈ ಹೊಸ ಸರ್ಕಾರದಿಂದ ಕನ್ನಡಿಗರು ಯಾವುದೇ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿಲ್ಲ. ರಾಜ್ಯದ ಜನತೆ ಈಗ ಕೇವಲ ಪೊಳ್ಳು ಭರವಸೆಗಳನ್ನಲ್ಲ, ಬದಲಾಗಿ ಕಣ್ಣಿಗೆ ಕಾಣುವ ಫಲಿತಾಂಶಗಳನ್ನು ನೋಡಲು ಬಯಸುತ್ತಿದ್ದಾರೆ. ಬರೀ ಮಾತುಗಳಿಗಿಂತ ಕಾರ್ಯವನ್ನು, ಕೇವಲ ಪ್ರಚಾರಕ್ಕಿಂತ ಗಟ್ಟಿಯಾದ ಆಡಳಿತವನ್ನು ರಾಜ್ಯ ನಿರೀಕ್ಷಿಸುತ್ತಿದೆ” ಎಂದು ಆರ್. ಅಶೋಕ್ ತಮ್ಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.








