ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ಪುನಾರಚನೆಯ ಕೂಗು ಮತ್ತೆ ಕೇಳಿಬರುತ್ತಿದ್ದು, ಹಿರಿಯ ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸಚಿವ ಸಂಪುಟ ಬದಲಾವಣೆಗೆ ಆಗ್ರಹಿಸಿದ್ದಾರೆ. ಸುಮಾರು 27 ರಿಂದ 28 ಜನ ಸಮಾನ ಮನಸ್ಕ ಶಾಸಕರು ಸೇರಿ ನಿನ್ನೆ ಸಭೆ ನಡೆಸಿದ್ದು, ಸಂಪುಟ ಪುನಾರಚನೆ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದೇನು?
-
ಸಂಪುಟ ಪುನಾರಚನೆ ಅನಿವಾರ್ಯ: ಸಚಿವ ಸಂಪುಟ ರಚನೆಯಾಗಿ ಸುಮಾರು ಎರಡೂವರೆ ವರ್ಷಗಳಾಗುತ್ತಾ ಬಂದಿದೆ. ಇದುವರೆಗೆ ಯಾವುದೇ ಬದಲಾವಣೆಗಳಾಗಿಲ್ಲ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ಮುಖಗಳಿಗೆ ಅವಕಾಶ ನೀಡಬೇಕು ಹಾಗೂ ಸಂಪುಟದಲ್ಲಿ ಬದಲಾವಣೆ ತರಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ.
-
ಹಿರಿಯ ಶಾಸಕರಿಗೆ ಆದ್ಯತೆ: ಮೂರು-ನಾಲ್ಕು ಬಾರಿ ಗೆದ್ದಿರುವ ಸಾಕಷ್ಟು ಹಿರಿಯ ಶಾಸಕರು ನಮ್ಮಲ್ಲಿದ್ದಾರೆ. ಸದ್ಯ ಸಚಿವರಾಗಿರುವ ಹಿರಿಯರಲ್ಲಿ ಒಂದು ಏಳೆಂಟು ಜನರನ್ನು ಉಳಿಸಿಕೊಂಡು, ಉಳಿದವರಿಗೆ ಸಂಪುಟದಿಂದ ಕೈಬಿಟ್ಟು ಹೊಸಬರಿಗೆ ಹಾಗೂ ಸೀನಿಯರ್ ಶಾಸಕರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
-
ಡೆಲ್ಲಿಗೆ ಪಯಣ: ಈ ಕುರಿತು ಚರ್ಚಿಸಲು ಸೋಮವಾರ ರಾತ್ರಿ ನಾವೆಲ್ಲರೂ ದೆಹಲಿಗೆ ತೆರಳಲಿದ್ದು, ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ನಮ್ಮ ಹಕ್ಕನ್ನು ಮಂಡಿಸಲಿದ್ದೇವೆ. ಇದು ಯಾವುದೇ ರೀತಿಯ ಭಿನ್ನಮತವಲ್ಲ, ಬದಲಾಗಿ ನಮ್ಮ ಹಕ್ಕುಗಳನ್ನು ಕೇಳುತ್ತಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
-
ಪಕ್ಷದ ಹಿತದೃಷ್ಟಿ: ನಾವು ಪಕ್ಷದ ವಿರೋಧವಾಗಿ ಅಥವಾ ಸರ್ಕಾರಕ್ಕೆ ತೊಂದರೆ ಕೊಡುವ ಉದ್ದೇಶದಿಂದ ಈ ಸಭೆ ನಡೆಸಿಲ್ಲ. ರಾಜ್ಯದ ಕೆಲವು ಜಿಲ್ಲೆಗಳಿಗೆ ಸಂಪುಟದಲ್ಲಿ ಸರಿಯಾದ ಪ್ರಾತಿನಿಧ್ಯ ಸಿಕ್ಕಿಲ್ಲ, ಅಂತಹ ಜಿಲ್ಲೆಗಳಿಗೆ ಆದ್ಯತೆ ನೀಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ.
-
ಸಿಎಂ ಮತ್ತು ಡಿಸಿಎಂ ಭೇಟಿ: ಹೈಕಮಾಂಡ್ ಭೇಟಿಯ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಅವರು ತಿಳಿಸಿದ್ದಾರೆ.
ಸಚಿವ ಸಂಪುಟ ಪುನಾರಚನೆಯ ಈ ಒತ್ತಾಯವು ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗೆ ಹೊಸ ಸಂಚಲನ ಮೂಡಿಸಿದ್ದು, ದೆಹಲಿ ಭೇಟಿಯ ನಂತರ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.
ಎಲ್ಪಿಜಿ, ಇಂಧನ ಬಿಕ್ಕಟ್ಟು ನಿವಾರಿಸಿ: ಪ್ರಧಾನಿ ಮೋದಿಗೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪತ್ರ
BREAKING: ಷೇರು ಮಾರುಕಟ್ಟೆಯಲ್ಲಿ ರಕ್ತಪಾತ: ಒಂದೇ ದಿನದಲ್ಲಿ ಹೂಡಿಕೆದಾರರ ₹5.87 ಲಕ್ಷ ಕೋಟಿ ಭಸ್ಮ | Share Market








