ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ಕಾನೂನು- ಸುವ್ಯವಸ್ಥೆಯನ್ನು ಸಂಪೂರ್ಣವಾಗಿ ಹದಗೆಡಿಸಿದೆ ಎಂದು ರಾಜ್ಯ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ.
ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರವು ಇಡೀ ರಾಜ್ಯದಲ್ಲಿ ಕೆಟ್ಟ ವಾತಾವರಣ ಸೃಷ್ಟಿಸುತ್ತಿದೆ. ರಾಜ್ಯದ ಕಾನೂನು- ಸುವ್ಯವಸ್ಥೆಯನ್ನು ಸಂಪೂರ್ಣವಾಗಿ ಹದಗೆಡಿಸಿದ್ದಾರೆ. ಅತ್ಯಾಚಾರಗಳು, ಕೊಲೆಗಳು ಇವತ್ತು ಬಹಳಷ್ಟು ಆಗುತ್ತಿದೆ. ಜೊತೆಗೇ ಬಿಜೆಪಿ ನಾಯಕರು, ಹಿಂದೂಪರ ನಾಯಕರನ್ನು ಟಾರ್ಗೆಟ್ ಮಾಡಿ ತೊಂದರೆ ಕೊಡುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಆಕ್ಷೇಪಿಸಿದರು.
ಮಂಗಳೂರಿನಲ್ಲಿ ಕೆಲವು ಮುಸ್ಲಿಂ ಸಂಘಟನೆಗಳು, ಕಾಂಗ್ರೆಸ್ ಪಕ್ಷದಲ್ಲಿರುವ ಕೆಲವು ಮುಸಲ್ಮಾನ ನಾಯಕರು ರಾಜೀನಾಮೆಯ ಬ್ಲ್ಯಾಕ್ಮೇಲ್ ಪ್ರಾರಂಭಿಸಿದ್ದಾರೆ. ಬ್ಲ್ಯಾಕ್ಮೇಲ್ಗೆ ಹೆದರಿ ಹಿಂದುತ್ವ ಕಾರ್ಯಕರ್ತರು, ಬಿಜೆಪಿ ನಾಯಕರನ್ನು ಗಡೀಪಾರು ಮಾಡಲು ಆರಂಭಿಸಿದ್ದಾರೆ. ಮಂಗಳೂರು, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಭಾಗಗಳಲ್ಲಿ ಇದು ನಡೆದಿದೆ. ಸುಹಾಸ್ ಅವರು ಮೃತಪಟ್ಟಾಗ ಮೆರವಣಿಗೆಯಲ್ಲಿ ಹೋದವರನ್ನು ಗುರುತಿಸಿ ಕರೆದು ತನಿಖೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸರಕಾರ ಎಚ್ಚರಿಕೆಯಿಂದ ಮುಂದೆ ಹೋಗಲಿ..
ಇಡೀ ಕರ್ನಾಟಕದಲ್ಲಿ ಹಿಂದುತ್ವವಾದಿಗಳ ವಿರುದ್ಧ ಕಾಂಗ್ರೆಸ್ ಸರಕಾರ ಈಗ ಕೆಲಸ ಮಾಡಲಾರಂಭಿಸಿದೆ; ಇದನ್ನು ನಾವು ಸಹಿಸಿಕೊಳ್ಳುವುದಿಲ್ಲ. ಹಿಂದುತ್ವದ ಹೆಸರಿನಲ್ಲಿ ಯಾರನ್ನೇ ಈ ಸರಕಾರ ಮುಟ್ಟಿದರೂ ನಾವು ಈ ಸರಕಾರವನ್ನು ಮುಟ್ಟುವಂತಾದೀತು. ನಾವು ಹೆದರುತ್ತೇವೆಂದು ಭಾವಿಸದಿರಿ. ನೀವು ಮುಟ್ಟಿದಷ್ಟೂ ನಾವು ಶಕ್ತಿಯುತವಾಗಿ ನಿಮ್ಮ ಹೆಡೆಮುರಿ ಕಟ್ಟುವ ಕೆಲಸ ಮಾಡುತ್ತೇವೆ. ನಮ್ಮ ಕಾರ್ಯಕರ್ತರು ಮೌನವಾಗಿದ್ದಾರೆಂದು ನೀವು ಹೀಗೆ ಮಾಡುವುದು ಗೊತ್ತಿದೆ. ಆದ್ದರಿಂದ ಈ ಸರಕಾರವು ಎಚ್ಚರಿಕೆಯಿಂದ ಮುಂದೆ ಹೋಗಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಅವರು ಹೇಳಿದರು.
ಪ್ರಜಾಪ್ರಭುತ್ವ- ಸಂವಿಧಾನದ ವ್ಯವಸ್ಥೆಯಡಿ ಕೆಲಸ ಮಾಡಿ; ಸರ್ವರಿಗೂ ಸಮಬಾಳು ಕೊಡಿ ಎಂದು ಡಾ.ಅಂಬೇಡ್ಕರ್ ಅವರು ಹೇಳಿದ್ದಾರೆ. ನೀವು ಓಲೈಕೆ ಮಾಡುತ್ತಿದ್ದೀರಿ. ಇದರಿಂದ ರಾಜ್ಯದ ವ್ಯವಸ್ಥೆ ಕೆಟ್ಟಿದೆ. ವ್ಯವಸ್ಥೆ ಕೆಡಲು ನಿಮ್ಮ ಸರಕಾರ ಕಾರಣ; ನಿಮ್ಮ ಕೆಲವು ಮುಖಂಡರ ಹೊಲಸು ನಾಲಿಗೆ ಕಾರಣ. ಇದನ್ನು ಹತ್ತಿಕ್ಕುವ ಬದಲಾಗಿ ಜನರನ್ನು ಹತ್ತಿಕ್ಕಿದರೆ ತಕ್ಕ ಪಾಠವನ್ನು ನಾವು ನಿಮಗೆ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹೇಮಾವತಿ ನೀರು- ಉದ್ಧಟತನದ ತೀರ್ಮಾನ ಮಾಡಬೇಡಿ
ಹೇಮಾವತಿ ನೀರಿನ ವಿಚಾರದಲ್ಲಿ ಮೊದಲಿನ ಪರಿಸ್ಥಿತಿಯನ್ನೇ ಮುಂದುವರೆಸಬೇಕಾಗಿತ್ತು. ಜನರಲ್ಲಿ ಗೊಂದಲ ಮೂಡಿಸಬೇಡಿ; ಅವರಿಗೆ ಮನವರಿಕೆ ಮಾಡಿ ಎಂದು ಆಗ್ರಹಿಸಿದರು. ಎರಡೂ ಜಿಲ್ಲೆಗಳ ಮುಖಂಡರನ್ನು ಕರೆದು ಮಾತನಾಡಿಸದೆ ಏಕಾಏಕಿ ತೀರ್ಮಾನ ಮಾಡಿದ್ದರಿಂದ ಜನರು- ರೈತರನ್ನು ಮತ್ತಷ್ಟು ಕೆರಳಿಸುವ ಕಾರ್ಯ ಆಗಿದೆ. ಇಂಥ ಉದ್ಧಟತನದ ತೀರ್ಮಾನ ಮಾಡಬೇಡಿ ಎಂದು ಆಗ್ರಹಿಸಿದರು.
ಗುಲ್ಬರ್ಗದಲ್ಲಿ ಈಚೆಗೆ ಮಾತಿನ ಭರದಲ್ಲಿ ನಾನು ಒಂದು ಗಾದೆಮಾತನ್ನು ನಾನು ಹೇಳಿದ್ದೆ. ಪ್ರಿಯಾಂಕ್ ಖರ್ಗೆ ಹೆಸರು ಥಳಕು ಹಾಕಿಕೊಂಡಿತ್ತು. ನಾಯಿ ಎಂದಿದ್ದಾರೆಂದು ಎತ್ತಿ ಎತ್ತಿ ಹೇಳಿಕೆ ನೀಡಿದರು. ಹಿಂದೆ, ನನ್ನನ್ನು ಚಡ್ಡಿ ಹೊರುವ ಗಿರಾಕಿ ಎಂದಿರಿ. ನಾನು ಗಿರಾಕಿಯೇ? ಎಂದು ಕೇಳಿದರು. ನಮ್ಮ ಚಡ್ಡಿ ನಿಮಗೆ ಗೌರವ ತಂದು ಕೊಡುವ ಸಂಕೇತ ಎಂದು ವಿಶ್ಲೇಷಿಸಿದರು. ಈಗ ನೀವು ಲಕ್ಷಾಂತರ ಬಾರಿ ನಾಯಿಪಠಣ ಮಾಡಿ ನಿಮ್ಮನ್ನು ನೀವು ಬೀದಿಗೆ ತರುತ್ತೀರಿ ಎಂದು ಹೇಳಿದರು.
ಜನರು ನಿಮಗೆ ಮೂರು ಕಾಸಿನ ಗೌರವ ಕೊಡುತ್ತಿಲ್ಲ..
ಛಲವಾದಿಯವರು ನಾಯಿ ಎಂದಿದ್ದಾರೆ. ರವಿಕುಮಾರರು ಪಾಕಿಸ್ತಾನದವರು ಅಂದಿದ್ದಾರೆ ಎಂದು ಪ್ರಚಾರ ಮಾಡಿ, ಇಡೀ ಜಿಲ್ಲೆಗೆ ವಾಹನ, ಊಟ ಕಳಿಸಿದರೂ ಸೇರಿದ್ದು 1,500 ಜನ. 30- 40 ಸಾವಿರ ಜನ ಸೇರಿಸ್ತಾರೆ; ದೊಡ್ಡ ಆಂದೋಲನ ನಡೆಯುತ್ತದೆ ಅಂದುಕೊಂಡಿದ್ದೆ. ಇದನ್ನು ನೋಡಿದ ಮೇಲೆ ನಿಮ್ಮ ಸಾಮ್ರಾಜ್ಯ, ನಿಮ್ಮ ಕೋಟೆ ಕಳಚಿಬಿದ್ದಿದೆ. ಜನರು ನಿಮಗೆ ಮೂರು ಕಾಸಿನ ಗೌರವ ಕೊಡುತ್ತಿಲ್ಲ ಎನಿಸಿದೆ ಎಂದು ವ್ಯಂಗ್ಯವಾಡಿದರು.
ನಿಮ್ಮ ತಂತ್ರ, ಯಂತ್ರ, ಕುತಂತ್ರಗಳು ಎಲ್ಲವೂ ಗೊತ್ತಿದೆ..
ರವಿಕುಮಾರ್ ಮತ್ತು ನಾರಾಯಣಸ್ವಾಮಿ ಅವರನ್ನು ಎಂಎಲ್ಸಿಯಿಂದ ತೆಗೆದುಬಿಡಿ ಎಂದು ಕಾಂಗ್ರೆಸ್ಸಿನ ಎಂಎಲ್ಸಿಗಳು ಮಾನ್ಯ ರಾಜ್ಯಪಾಲರಿಗೆ ಒಂದು ಮನವಿಪತ್ರ ಕೊಟ್ಟಿದ್ದಾರೆ. ಇದು ಆಗುತ್ತದೆಯೇ? ಇದ್ಯಾರಿಂದಲೂ ಆಗುವುದಿಲ್ಲ ಎಂದರು. ಇವತ್ತು ಮಾನ್ಯ ಸಭಾಪತಿಗಳ ಬಳಿ ಇದೇ ದೂರು ನೀಡಲು ಹೋಗಿದ್ದಾರೆ. ನನಗೂ ಅನೇಕ ಮಿತ್ರರಿದ್ದಾರೆ. ನಾನೂ ಕಾಂಗ್ರೆಸ್ಸಿನಿಂದಲೇ ಬಂದಿರುವವ. ನಿಮ್ಮ ತಂತ್ರ, ಯಂತ್ರ, ಮಂತ್ರ, ಕುತಂತ್ರಗಳು ಎಲ್ಲವೂ ಗೊತ್ತಿದೆ ಎಂದು ತಿಳಿಸಿದರು. ಅವುಗಳಿಗೆ ಉತ್ತರ ಕೊಡುತ್ತೇವೆ ಎಂದರಲ್ಲದೆ, ನಾವು ಪ್ರಿಯಾಂಕ್ ಗರ್ವಭಂಗಕ್ಕೆ ಮುಂದಾದಾಗ ಎಲ್ಲರೂ ಖುಷಿ ಪಟ್ಟಿದ್ದರು. ಅನೇಕರು ಫೋನ್ ಮಾಡಿದ್ದರು. ಇನ್ಚಾರ್ಜ್ ಪ್ರಧಾನ ಕಾರ್ಯದರ್ಶಿ ಬಂದಿದ್ದರು. ಎಐಸಿಸಿ ಅಧ್ಯಕ್ಷರ ಬಗ್ಗೆ, ಸಚಿವರ ಕುರಿತು ಮಾತು ಬಂದಿದೆ. ನೀವ್ಯಾಕೆ ಮಾತನಾಡಿಲ್ಲ ಎಂದು ತಾಕೀತು ಮಾಡಿದ ಬಳಿಕ ಈಗ ಈ ಚಟುವಟಿಕೆ ಪ್ರಾರಂಭವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ಸಿನ ಬಣ್ಣ ಈಗ ಜನರ ಮುಂದೆ ಅನಾವರಣ ಆಗಿದೆ. ನೀವೀಗ ಬೆತ್ತಲಾಗಿದ್ದೀರಿ. ನಿಮಗೆ ಜನರು ಸೊಪ್ಪು ಹಾಕುತ್ತಿಲ್ಲ ಎಂದು ಅರ್ಥವಾಗಿದೆ. ಇದನ್ನು ಅರ್ಥ ಮಾಡಿಕೊಂಡು ಬದುಕುವುದನ್ನು ಕಲಿಯಿರಿ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಇದೇ ಮೊದಲು: ಕೋಲಾರದ ಸೋಮಸುಂದ್ರ ಕೆರೆಯಲ್ಲಿ ತೇಲುವ ಸೌರಶಕ್ತಿ ಘಟಕ ನಿರ್ಮಾಣಕ್ಕೆ ಸಿದ್ಧತೆ
BREAKING : ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ್ ಗೆ ಬಿಗ್ ಶಾಕ್ : ಗಡಿಪಾರು ನೋಟಿಸ್ ಜಾರಿ!