ಶಿವಮೊಗ್ಗ: ಶಿಕ್ಷಕ ಎಂದರೆ ವಿದ್ಯಾರ್ಥಿಯ ಪಾಲಿಗೆ ಕತ್ತಲೆಯಲ್ಲಿ ದಾರಿದೀಪವಾಗಬೇಕಾದವನು. ಬೆಳೆಯುವ ಸಿರಿಯನ್ನು ತಿದ್ದಿ ತೀಡಿ ಹೆಮ್ಮರವನ್ನಾಗಿಸಬೇಕಾದ ಗುರುಗಳು ಇಂದು ಅಕ್ಷರಶಃ ರಾಕ್ಷಸರಂತೆ ವರ್ತಿಸುತ್ತಿರುವುದು ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ. ಸಾಗರ ತಾಲೂಕಿನ ಶೆಡ್ತೀಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯ ಬಾಲಕ ಸುಶ್ರುತನ ಮೇಲೆ ನಡೆದ ಅಮಾನಾನುಷ ಹಲ್ಲೆ ಹಾಗೂ ಅದರ ಬೆನ್ನಲ್ಲೇ ಶಿಕ್ಷಕರು ನಡೆಸುತ್ತಿರುವ ‘ಚಾರಿತ್ರ್ಯ ವಧೆ’ಯ ರಾಜಕೀಯ ಈಗ ಪೋಷಕರ ಕೆಂಗಣ್ಣಿಗೆ ಗುರಿಯಾಗಿದೆ.
ರಕ್ತ ಒಸರುವಂತೆ ಹಲ್ಲೆ: ಇದೇನಾ ನೀವು ಕಲಿತ ಮನೋವಿಜ್ಞಾನ?
ಕಳೆದ ಮಾರ್ಚ್ 12ರಂದು ಕ್ಷುಲ್ಲಕ ಕಾರಣಗಳಿಗಾಗಿ ಮುಖ್ಯ ಶಿಕ್ಷಕ ಸೇರಿದಂತೆ ಮೂವರು ಶಿಕ್ಷಕರು ಸೇರಿ ಬಾಲಕ ಸುಶ್ರುತನನ್ನು ಅಟ್ಟಾಡಿಸಿ ಹೊಡೆದಿದ್ದಾರೆ. ವಿದ್ಯಾರ್ಥಿಯ ಚರ್ಮ ಸುಲಿದು ಬರುವಂತೆ, ರಕ್ತ ಹೊರಬರುವಂತೆ, ಕೈಕಾಲುಗಳಲ್ಲಿ ಬಾಸುಂಡೆ ಮೂಡುವಂತೆ ಹೊಡೆದ ಆ ದೃಶ್ಯಗಳನ್ನು ಕಂಡರೆ ಎಂತಹ ಕಟುಕನಿಗೂ ಕಣ್ಣೀರು ಬರುತ್ತದೆ. ಶಿಕ್ಷಕರಾಗಲು ಸೈಕಾಲಜಿ (ಮನೋವಿಜ್ಞಾನ) ಓದಿರುವ ಇವರಿಗೆ, ಒಬ್ಬ 7ನೇ ತರಗತಿಯ ಬಾಲಕನಿಗೆ ತಿಳಿ ಹೇಳಿ ಬದಲಾಯಿಸುವ ತಾಳ್ಮೆ ಇಲ್ಲವಾಯಿತೇ? ಹೊಡೆದೇ ಬುದ್ಧಿ ಹೇಳಬೇಕು ಎಂಬುದು ಯಾವ ಸಂಸ್ಕೃತಿ? ಎಂದು ಪೋಷಕರು ಪ್ರಶ್ನಿಸುತ್ತಿದ್ದಾರೆ.
ಅಮಾನತಿನ ನಂತರ ಶುರುವಾಗಿದೆ ಹೈಡ್ರಾಮಾ!
ವಿದ್ಯಾರ್ಥಿಯ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಹ ಶಿಕ್ಷಕ ಪ್ರಮೋದ್ ಸಣ್ಣಕ್ಕಿ ಎಂಬುವವರನ್ನು ಶಿವಮೊಗ್ಗ ಡಿಡಿಪಿಐ ಅಮಾನತುಗೊಳಿಸಿದ್ದಾರೆ. ಇನ್ನು ಮುಖ್ಯೋಪಾಧ್ಯಾಯ ರಮೇಶ್ ನಾರಾಯಣ್ ಸೇರಿದಂತೆ ಇತರರ ಮೇಲೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸುಮೋಟೋ ಕೇಸ್ ದಾಖಲಿಸಿ ಖಡಕ್ ಎಚ್ಚರಿಕೆ ನೀಡಿದೆ. ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಶಿಕ್ಷಕರ ತಂಡ, ಈಗ ತಮ್ಮ ತಪ್ಪನ್ನು ಮುಚ್ಚಿಡಲು ಹಲ್ಲೆಗೊಳಗಾದ ವಿದ್ಯಾರ್ಥಿಯ ಮೇಲೆಯೇ ‘ಬ್ಯಾಡ್ ಕ್ಯಾರೆಕ್ಟರ್’ ಪಟ್ಟ ಕಟ್ಟಲು ಶುರುಮಾಡಿದೆ.
ತಪ್ಪು ಮುಚ್ಚಿಡಲು ವಿದ್ಯಾರ್ಥಿಯ ವ್ಯಕ್ತಿತ್ವಕ್ಕೆ ಮಸಿ
“ನಮ್ಮ ಮಗ ಏನಾದರೂ ತಪ್ಪು ಮಾಡಿದ್ದರೆ ಪೋಷಕರಾದ ನಮಗೆ ಕರೆಸಿ ಹೇಳಬಹುದಿತ್ತು. ಅದನ್ನು ಬಿಟ್ಟು ಅವನಿಗೆ ರಕ್ತ ಬರುವಂತೆ ಹೊಡೆದು, ಈಗ ಕಾನೂನಿನಿಂದ ಬಚಾವಾಗಲು ಅವನೊಬ್ಬ ಕಳ್ಳ, ಅವನ ನಡತೆ ಸರಿ ಇಲ್ಲ ಎಂದು ಸುಳ್ಳು ಸುದ್ದಿ ಹರಡುತ್ತಿರುವುದು ಎಂತಹ ಕ್ರೌರ್ಯ?” ಎಂದು ಸುಶ್ರುತನ ಪೋಷಕರು ಕಣ್ಣೀರಿಡುತ್ತಿದ್ದಾರೆ. ಆದರೇ ಅತ್ತ ಜನಪ್ರತಿನಿಧಿಗಳ ಮನೆಗೆ ಅಲೆದಾಡುತ್ತಿರುವ ಈ ಶಿಕ್ಷಕರು, ವಿದ್ಯಾರ್ಥಿಯ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹವಣಿಸುತ್ತಿದ್ದಾರೆ.
ಪೋಷಕರ ಮತ್ತು ಸಾರ್ವಜನಿಕರ ಆಗ್ರಹ:
-
ಸಮಗ್ರ ಕ್ರಮವಾಗಲಿ: ಕೇವಲ ಒಬ್ಬ ಶಿಕ್ಷಕನ ಅಮಾನತು ಸಾಲದು, ಹಲ್ಲೆಯಲ್ಲಿ ಭಾಗಿಯಾದ ಮುಖ್ಯ ಶಿಕ್ಷಕ ಸೇರಿದಂತೆ ಎಲ್ಲರ ಮೇಲೂ ಕಠಿಣ ಕಾನೂನು ಕ್ರಮವಾಗಬೇಕು.
-
ಚಾರಿತ್ರ್ಯ ವಧೆ ನಿಲ್ಲಲಿ: ತಪ್ಪು ಮಾಡಿದ ಶಿಕ್ಷಕರು ತಮ್ಮನ್ನು ತಾವು ಉಳಿಸಿಕೊಳ್ಳಲು ವಿದ್ಯಾರ್ಥಿಗೆ ‘ಬ್ಯಾಡ್ ಕ್ಯಾರೆಕ್ಟರ್ ಸರ್ಟಿಫಿಕೇಟ್’ ಕೊಡುವುದನ್ನು ಕೂಡಲೇ ನಿಲ್ಲಿಸಬೇಕು.
-
ಮಕ್ಕಳ ಆಯೋಗದ ಹಸ್ತಕ್ಷೇಪ: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪೋಷಕರಿಗೆ ನ್ಯಾಯ ಕೊಡಿಸಬೇಕು.
-
ಎಸ್ಡಿಎಂಸಿ (SDMC) ಪಾರದರ್ಶಕತೆ: ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆದಾಗ, ಮೊದಲು ಆ ಅಮಾನಾನುಷ ಹಲ್ಲೆಯನ್ನು ಖಂಡಿಸಬೇಕಿತ್ತು. ಹಲ್ಲೆಗೊಳಗಾದಂತ ವಿದ್ಯಾರ್ಥಿಯ ಪರ ನಿಲುವು ತಳೆಯಬೇಕಿತ್ತು. ಮಕ್ಕಳ ಹಕ್ಕು ರಕ್ಷಣೆಯ ಪಾರದರ್ಶಕತೆ ತೋರಬೇಕು.
-
ಶಿಕ್ಷಕರ ಸಂಘಟನೆಗಳ ಹೊಣೆಗಾರಿಕೆ: ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವ ಮತ್ತು ಮಾದರಿ ನಡೆ ತೋರುವ ಜವಾಬ್ದಾರಿ ಶಿಕ್ಷಕರ ಸಂಘಟನೆಗಳ ಮೇಲಿತ್ತು. ಹಲ್ಲೆಯನ್ನು ಖಂಡಿಸುವ ಬದಲಾಗಿ, ಆರೋಪಿತ ಶಿಕ್ಷಕರ ಪರವಾಗಿಯೇ ನಿಂತಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇಂದು ಹಲ್ಲೆಗೊಳಗಾದ ಇದೇ ಸುಶ್ರುತ ನಾಳೆ ಸಮಾಜಕ್ಕೆ ಮಾದರಿಯಾಗಬಲ್ಲ ವ್ಯಕ್ತಿಯಾಗಬಹುದು. ಆತನ ಭವಿಷ್ಯವನ್ನು ರೂಪಿಸಬೇಕಾದವರೇ ಆತನ ಬೆನ್ನ ಮೇಲೆ ರಕ್ತದ ಗೆರೆಗಳನ್ನು ಎಳೆದು, ವ್ಯಕ್ತಿತ್ವಕ್ಕೆ ಮಸಿ ಬಳಿಯುತ್ತಿರುವುದು ಖಂಡನೀಯ. ಶಿಕ್ಷಣ ಇಲಾಖೆಯು ಇಂತಹ ‘ಸಂಸ್ಕಾರಹೀನ’ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತದೆಯೇ ಎಂಬುವುದನ್ನು ಕಾದು ನೋಡಬೇಕಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
ಬಾಗಲಕೋಟೆ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಆಸ್ತಿ ವಿವರ ಘೋಷಣೆ, ಕೋಟಿ ಕೋಟಿ ಒಡೆಯ ಮೇಟಿ!
EPFO ಮಾಸ್ಟರ್ ಪ್ಲಾನ್: 10,181 ಕೋಟಿ ರೂ. ಹಕ್ಕು ಪಡೆಯದ ಹಣ ಪಾವತಿಗೆ ‘ಆಟೋ-ಸೆಟಲ್ಮೆಂಟ್’ ಫೀಚರ್ ಜಾರಿ!








