ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಾಮಾನ್ಯ ಭವಿಷ್ಯ ನಿಧಿ (GPF) ನಿಯಮಗಳಿಗೆ ಸರ್ಕಾರವು ಮಹತ್ವದ ತಿದ್ದುಪಡಿ ತಂದಿದೆ. ಇನ್ಮುಂದೆ ಜಿಪಿಎಫ್ಗೆ ಸಂಬಂಧಿಸಿದ ನಮೂನೆಗಳಲ್ಲಿ ನೌಕರರ ಆಧಾರ್ ಸಂಖ್ಯೆ ಹಾಗೂ ಕೆಜಿಐಡಿ (KGID) ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಲಿದೆ.
ಕರ್ನಾಟಕ ಸರ್ಕಾರವು ‘ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ (ತಿದ್ದುಪಡಿ) ನಿಯಮಗಳು, 2026’ನ್ನು ಹೊರಡಿಸಿದ್ದು, ಈ ಮೂಲಕ 2016ರ ಹಳೆಯ ನಿಯಮಾವಳಿಗಳಿಗೆ ಅಧಿಕೃತವಾಗಿ ತಿದ್ದುಪಡಿ ತಂದಿದೆ.
ಹೊಸ ನಿಯಮದ ಜಾರಿ: ಈ ಹೊಸ ನಿಯಮಗಳನ್ನು ‘ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ (ತಿದ್ದುಪಡಿ) ನಿಯಮಗಳು, 2026’ ಎಂದು ಕರೆಯಲಾಗುತ್ತದೆ.
ನಮೂನೆ-1ರಲ್ಲಿ ಬದಲಾವಣೆ: ಜಿಪಿಎಫ್ ನಿಯಮಾವಳಿಯ ‘ನಮೂನೆ-1’ರ ಕೋಷ್ಟಕದಲ್ಲಿ ಕ್ರಮ ಸಂಖ್ಯೆ 1ರ ನಂತರ ಹೊಸದಾಗಿ ಎರಡು ಅಂಶಗಳನ್ನು ಸೇರಿಸಲಾಗಿದೆ:
1A – ಆಧಾರ್ ಸಂಖ್ಯೆ (Aadhaar Number)
1B – ಕೆಜಿಐಡಿ ಸಂಖ್ಯೆ (KGID Number)
ಯಾವಾಗಿನಿಂದ ಅನ್ವಯ?: ಈ ತಿದ್ದುಪಡಿಗಳು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದಲೇ ಜಾರಿಗೆ ಬರಲಿವೆ.
ಹಿನ್ನೆಲೆ: ಈ ಹಿಂದೆ 2025ರಲ್ಲಿ ಈ ತಿದ್ದುಪಡಿ ಕುರಿತು ಕರಡು ಅಧಿಸೂಚನೆಯನ್ನು ಹೊರಡಿಸಿ ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಲಾಗಿತ್ತು. ನಿಗದಿತ ಅವಧಿಯೊಳಗೆ ಯಾವುದೇ ಆಕ್ಷೇಪಣೆಗಳು ಬರದ ಹಿನ್ನೆಲೆಯಲ್ಲಿ, ಆರ್ಥಿಕ ಇಲಾಖೆಯು (ಆಡಳಿತ ಮತ್ತು ಮುಂಗಡಗಳು) ಈ ಅಂತಿಮ ಆದೇಶವನ್ನು ಹೊರಡಿಸಿದೆ.
ಈ ಬದಲಾವಣೆಯಿಂದಾಗಿ ಸರ್ಕಾರಿ ನೌಕರರ ಭವಿಷ್ಯ ನಿಧಿಯ ನಿರ್ವಹಣೆ ಇನ್ನು ಮುಂದೆ ಹೆಚ್ಚು ಪಾರದರ್ಶಕವಾಗಲಿದ್ದು, ನೌಕರರ ಗುರುತಿಸುವಿಕೆ ಸುಲಭವಾಗಲಿದೆ.









