ಬೆಂಗಳೂರು ; ನಾಡಿನ ವಿಖ್ಯಾತ ಹಾಸನಾಂಭ ಉತ್ಸವದಲ್ಲಿ ಪ್ರಸ್ತುತ ವರ್ಷದಿಂದ ವಿಐಪಿ ಸಂಪ್ರದಾಯಕ್ಕೆ ಬ್ರೇಕ್ ನೀಡಿ ಜನಸ್ನೇಹಿ ಉತ್ಸವಕ್ಕೆ ಕರೆ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ವಿಕಾಸಸೌಧದಲ್ಲಿ ಸೋಮವಾರ ಹಾಸನ ಜಿಲ್ಲೆಯ ಶಾಸಕರು ಸಂಸದರು ಹಾಗೂ ಅಧಿಕಾರಿಗಳು ಜೊತೆ ಸಭೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಹಾಸನಾಂಭ ಉತ್ಸವದಲ್ಲಿ ವಿಐಪಿ ಸಂಸ್ಕೃತಿಯಿಂದ ಸ್ಥಳೀಯರು ಬೇಸತ್ತಿದ್ದು, ಈ ವರ್ಷದಿಂದ ಈ ಸಂಸ್ಕೃತಿಕ ತಿಲಾಂಜಲಿ ಹಾಡಲಾಗುವುದು. ಅಲ್ಲದೆ, ಜನಸ್ನೇಹಿ ಹಾಸನಾಂಭ ಉತ್ಸವಕ್ಕೆ ಕರೆ ನೀಡಲಾಗುವುದು ಎಂದು ಭರವಸೆ ನೀಡಿದರು.
“ಕಳೆದ ವರ್ಷ ಹಾಸನದಲ್ಲಿ ವಿಐಪಿ ಗಳ ಎಸ್ಕಾರ್ಟ್ಗಳದ್ದೇ ಸದ್ದು ಹೆಚ್ಚಾಗಿತ್ತು. ಆದರೆ, ಈ ವರ್ಷ ಇದಕ್ಕೆ ಅವಕಾಶ ನೀಡಲಾಗುವುದಿಲ್ಲ. ರಾಜ್ಯಪಾಲರು, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಗೃಹ ಸಚಿವರು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಮಾಜಿ ಪ್ರಧಾನಿಗಳಿಗೆ ಮಾತ್ರ ಎಸ್ಕಾರ್ಟ್ ವ್ಯವಸ್ಥೆ ನೀಡಲಾಗುವುದು” ಎಂದು ಮಾಹಿತಿ ನೀಡಿದರು.
ಮುಂದುವರೆದು, “ ಶಾಸಕರು, ಸಚಿವರು ನ್ಯಾಯಾಧೀಶರು, ಕ್ರೀಡಾಪಟುಗಳು, ಸಿನಿಮಾ ತಾರೆಯರು ಸೇರಿದಂತೆ ಉಳಿದ ಗಣ್ಯ ವ್ಯಕ್ತಿಗಳು ತಾವು ದೇವಾಲಯಕ್ಕೆ ಭೇಟಿ ನೀಡುವ ಬಗ್ಗೆ ಇ-ಮೇಲ್ ಅಥವಾ ಫೋನ್ ಕರೆಗಳ ಮೂಲಕ ಮೊದಲೇ ತಿಳಿಸಬೇಕು. ಮಾಹಿತಿ ನೀಡುವ ಗಣ್ಯವ್ಯಕ್ತಿಗಳನ್ನು ಜಿಲ್ಲಾಡಳಿತ ಏರ್ಪಡಿಸಿರುವ ವಾಹನದಲ್ಲಿ ದೇವಾಲಯಕ್ಕೆ ಕರೆತಂದು ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಗಣ್ಯ ವ್ಯಕ್ತಿಗಳಿಗೆ ತಮ್ಮ ಕುಟುಂಬದ ನಾಲ್ಕು ಜನ ಸದಸ್ಯರನ್ನು ಜೊತೆಗೆ ಕರೆತರಲು ಅವಕಾಶ ನೀಡಲಾಗಿದೆ. ಆದರೆ, ಯಾವುದೇ ಖಾಸಗಿ ವಾಹನಗಳ ಮೂಲಕ ದೇವಾಲಯಕ್ಕೆ ಆಗಮಿಸಲು ಅವಕಾಶ ಇಲ್ಲ” ಎಂದು ಅವರು ತಿಳಿಸಿದರು.
“ಇದಲ್ಲದೆ, 1000 ರೂ ಹಾಗೂ 300 ರೂ ಬೆಲೆಯ ಪಾಸ್ಗಳನ್ನೂ ವಿತರಿಸಲಾಗುವುದು. ಪಾಸ್ ಪಡೆದವರಿಗೆ ದೇವರ ದರ್ಶನದ ಜೊತೆಗೆ ಪ್ರಸಾದವನ್ನೂ ನೀಡಲಾಗುವುದು. ಒಂದು ಪಾಸ್ಗೆ ಒಬ್ಬರಿಗೆ ಮಾತ್ರ ಅವಕಾಶ ಇರಲಿದೆ. ಎಸ್ಕಾರ್ಟ್ನಲ್ಲಿ ಆಗಮಿಸುವವರಿಗೆ ಬೆಳಗ್ಗೆ 10.30 ರಿಂದ 12.30ರ ವರೆಗೆ ಅವಕಾಶ ಇರಲಿದೆ. ಪಾಸ್ ಪಡೆದವರಿಗೆ ಬೆಳಗ್ಗೆ 7.30 ರಿಂದ 10ರ ನಡುವೆ ಪ್ರವೇಶ ನೀಡಲಾಗುವುದು. ಒಂದು ದಿನಕ್ಕೆ 1000 ಪಾಸ್ಗಳನ್ನು ಮಾತ್ರ ವಿತರಿಸಲಿದ್ದು, ಸಮಯ ಮೀರಿ ಬಂದವರಿಗೆ ಅವಕಾಶ ಇರುವುದಿಲ್ಲ. ಇದಕ್ಕೆ ಎಲ್ಲರೂ ಸಹಕರಿಸಬೇಕು” ಎಂದು ಮನವಿ ಮಾಡಿದರು.
ದೇವಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ ಗಣನೀಯ ಹೆಚ್ಚಳ:
“ಹಾಸನಾಂಭ ದೇವಾಲಯಕ್ಕೆ 2021 ರಲ್ಲಿ 1ಲಕ್ಷ ಜನ ಮಾತ್ರ ಭೇಟಿ ನೀಡಿದ್ದರು. ಆದರೆ, 2022 ರಲ್ಲಿ 3 ಲಕ್ಷ ಹಾಗೂ 2023 ರಲ್ಲಿ 6 ಲಕ್ಷ ಜನ ಭೇಟಿ ನೀಡಿದ್ದಾರೆ. ಕಳೆದ ವರ್ಷ 20 ಲಕ್ಷ ಜನ ಭೇಟಿ ನೀಡಿದ್ದಾರೆ. ಹೀಗಾಗಿ ಈ ವರ್ಷ 25ಲಕ್ಷ ಜನ ದೇವಿಯ ದರ್ಶನಕ್ಕೆ ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ ಎಲ್ಲಾ ಇಲಾಖೆಯನ್ನೂ ಒಳಗೊಂಡು ಸುಗಮ ತಯಾರಿಗೆ ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದೆ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು.
ಈ ಬಾರಿ ಇರಲಿದೆ ಸಾಂಸ್ಕೃತಿಕ ಕಾರ್ಯಕ್ರಮ
ಅಕ್ಟೋಬರ್ 9 ರಿಂದಲೇ ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಇರಲಿವೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಅವರು, “ಮೂರು ವೇದಿಕೆ ಸಿದ್ದಪಡಿಸಲಾಗಿದ್ದು, ಒಂದು ವೇದಿಕೆಯಲ್ಲಿ ಜಾನಪದ ಜಾತ್ರೆ ನಡೆಸಲಾಗುವುದು. ಈ ವೇದಿಕೆಯಲ್ಲಿ ನಾಡಿನ ನಾನಾ ಭಾಗದ ಜಾನಪದ ಕಲಾವಿದರು ಆಗಮಿಸಿ ನೃತ್ಯ ಪ್ರದರ್ಶಿಸಲಿದ್ದಾರೆ. ಜಾನಪದವನ್ನು ಉಳಿಸಿ ಬೆಳೆಸುವ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಯೋಜನೆ ಹಮ್ಮಿಕೊಳ್ಳಲಾಗಿದ್ದು, ಉಳಿದ ಎರಡು ವೇದಿಕೆಯಲ್ಲಿ ಸ್ಥಳೀಯ ಯುವಕ-ಯುವತಿಯರು ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಭಕ್ತಾದಿಗಳಿಗೆ ಈ ವರ್ಷ ನೂತನ ಅನುಭವವಾಗಲಿದೆ.
ಇದರ ಜೊತೆಗೆ ಟೆಲಿ ಟೂರಿಸಂ, ಫಲಪುಷ್ಪ ಪ್ರದರ್ಶನವೂ ಇರಲಿದೆ, ಸ್ತ್ರಿ ಶಕ್ತಿ ಸಂಘಗಳಿಂದ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನೂ ಏರ್ಪಡಿಸಲಾಗಿದೆ. ಪ್ರವಾಸೋದ್ಯಮ ಇಲಾಖೆ ಜೊತೆಗೆ ಮಾತನಾಡಿದ್ದು ಹಾಸನಾಂಭ ಟೂರ್ ಪ್ಯಾಕೇಜ್ ಸಹ ಆರಂಭಿಸುವ ಇರಾದೆ ಇದೆ ” ಎಂದರು.
ಭದ್ರತೆಗೆ ಒತ್ತು:
“ಜನ ಸಂದಣಿ ನಿಯತ್ರಿಸುವ ಸಲುವಾಗಿ 2000 ಪೊಲೀಸರನ್ನು ನೇಮಕ ಮಾಡಲಾಗಿದೆ. 280 ಕ್ಕೂ ಹೆಚ್ಚು ಸಿಸಿಟಿವಿ ಅಳವಡಿಸಲಾಗಿದೆ. ಡ್ರೋನ್ ಕ್ಯಾಮೆರಾ ಸಹ ಬಳಕೆಯಲ್ಲಿದ್ದು, ಎಲ್ಲವಕ್ಕೂ ಎಐ ತಂತ್ರಜ್ಞಾನ ಬಳಸಲಾಗಿದೆ. ಸ್ಥಳದಲ್ಲೇ ಕಂಟ್ರೋಲ್ ರೂಂ ನಿರ್ಮಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯಲು ಆಸ್ಪದ ನೀಡಲಾಗುವುದಿಲ್ಲ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.