ದಾವಣಗೆರೆ : ಎಂಕಾಂ ಪದವಿ ವ್ಯಾಸಂಗ ಮಾಡಿ ಸುಂದರ ಬದುಕು ಕಟ್ಟಿಕೊಳ್ಳಬೇಕಿದ್ದ ಯುವಕನೋರ್ವ ಬೆಟ್ಟಿಂಗ್ನಲ್ಲಿ ಹಣವನ್ನು ಕಳೆದುಕೊಂಡು, ನಂತರ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದಲ್ಲದೇ, ವೃದ್ಧೆಯೊಬ್ಬರನ್ನು ಕೊಲೆ ಮಾಡಿ ಬಂಧನಕ್ಕೆ ಒಳಗಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ನಿವಾಸಿ ಅಭಿಷೇಕ್(23) ಕೊಲೆ ಆರೋಪಿ.
ಜಿಲ್ಲೆಯ ಹೊನ್ನಾಳಿ ತಾಲೂಕಿನ ನ್ಯಾಮತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಆರುಂಡಿ ಗ್ರಾಮದಲ್ಲಿ ಫೆ. 2 ರಂದು ಒಂಟಿ ಮನೆಯಲ್ಲಿದ್ದ 64 ವರ್ಷದ ಕಮಲಮ್ಮ ಅನ್ನೋ ವೃದ್ದೆಯ ಕೊಲೆ ಆಗಿತ್ತು. ಮೊದಲಿಗೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಊಹಿಸಲಾಗಿತ್ತು. ಯಾವಾಗ ಮೃತ ಕಮಲಮ್ಮನ ಮೈಮೇಲಿನ ಒಡವೆ ಕಾಣಲಿಲ್ಲವೋ ಆಗಲೇ ಅದು ಸಾಮಾನ್ಯ ಸಾವು ಅಲ್ಲ, ಕೊಲೆ ಎಂದು ಸಂಬಂಧಿಕರು ತೀರ್ಮಾನ ಮಾಡಿ ತಕ್ಷಣ ಹೊನ್ನಾಳಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಶಿವಮೊಗ್ಗದಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸಿ ನಂತರ ಮೃತದೇಹದ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಇತ್ತ ಸಾವಿನ ಪ್ರಕರಣದ ಬೆನ್ನುಬಿದ್ದಿದ್ದ ದಾವಣಗೆರೆ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಆರಂಭ ಮಾಡಿದ್ದರು. ಕಮಲಮ್ಮನಿಗೆ ನಾಲ್ಕು ಜನ ಹೆಣ್ಣುಮಕ್ಕಳು ಇದ್ದರು. ಎಲ್ಲರನ್ನೂ ಮದುವೆ ಮಾಡಿಕೊಟ್ಟಿದ್ಧ ವೃದ್ಧೆ ಪತಿ ಮರಣಾನಂತರ ಬಹುತೇಕ ಮಕ್ಕಳ ಮನೆಯಲ್ಲಿಯೇ ವಾಸವಾಗಿದ್ದರು ಎಂಬುದು ತಿಳಿದುಬಂದಿತ್ತು.








