ವಿಶಾಖಪಟ್ಟಣಂ: ವಿಶಾಖಪಟ್ಟಣಂನ ಜಿಲ್ಲಾ ಮಹಿಳಾ ನ್ಯಾಯಾಲಯದ ಆವರಣದಲ್ಲಿ ಸೋಮವಾರ ಆತಂಕಕಾರಿ ಘಟನೆಯೊಂದು ನಡೆದಿದೆ. ತನ್ನ ವಕೀಲರೇ ತನಗೆ ವಂಚಿಸಿದ್ದಾರೆ ಎಂದು ಆರೋಪಿಸಿದ ಮಹಿಳೆಯೊಬ್ಬರು, ನ್ಯಾಯಾಧೀಶರ ಮುಂದೆಯೇ ಬ್ಲೇಡ್ನಿಂದ ಕೊರಳು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜನರಲ್ಲಿ ನಡುಕ ಹುಟ್ಟಿಸಿದೆ.
ಘಟನೆಯ ಹಿನ್ನೆಲೆ:
ಅಕ್ಕಯ್ಯಪಾಲೆಂ ನಿವಾಸಿಯಾದ ಲಕ್ಷ್ಮಿ ಎಂಬುವವರು ಸಿವಿಲ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಸುತ್ತಿದ್ದರು. ಈ ಪ್ರಕರಣದ ನಿರ್ವಹಣೆಗಾಗಿ ಅವರು ಸತ್ಯನಾರಾಯಣ ಮೂರ್ತಿ ಎಂಬ ವಕೀಲರನ್ನು ನೇಮಿಸಿಕೊಂಡಿದ್ದರು. ಲಕ್ಷ್ಮಿ ಅವರ ಆರೋಪದಂತೆ, ಕೇಸಿಗಾಗಿ ಅವರು ವಕೀಲರಿಗೆ ಭಾರಿ ಪ್ರಮಾಣದ ಹಣವನ್ನು ನೀಡಿದ್ದರು. ಆದರೆ ಹಣ ಪಡೆದ ವಕೀಲರು ಪ್ರಕರಣದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಲ್ಲದೆ, ತಮಗೆ ನ್ಯಾಯ ಕೊಡಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಅವರು ದೂರಿದ್ದಾರೆ.
ಕೋರ್ಟ್ ನಲ್ಲಿ ನಡೆದಿದ್ದೇನು?
ಏಪ್ರಿಲ್ 27, 2026ರಂದು ಪ್ರಕರಣದ ವಿಚಾರಣೆಗೆ ಹಾಜರಾಗಿದ್ದ ಲಕ್ಷ್ಮಿ, ನ್ಯಾಯಾಧೀಶರ ಮುಂದೆ ತನ್ನ ಅಳಲು ತೋಡಿಕೊಂಡರು. ನನ್ನ ಹಣವೂ ಹೋಯಿತು, ಇತ್ತ ನ್ಯಾಯವೂ ಸಿಗುತ್ತಿಲ್ಲ. ಈ ವಕೀಲರು ನನಗೆ ನಂಬಿಕೆ ದ್ರೋಹ ಮಾಡಿದ್ದಾರೆ,” ಎಂದು ಕಿರುಚಾಡಿದ ಅವರು, ದಿಢೀರನೆ ಬ್ಲೇಡ್ ತೆಗೆದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು.ಆವೇಶಕ್ಕೊಳಗಾದ ಅವರು ತನ್ನ ಕೊರಳನ್ನು ಕುಯ್ದುಕೊಳ್ಳಲು ಯತ್ನಿಸಿದಾಗ ನ್ಯಾಯಾಲಯದ ಆವರಣದಲ್ಲಿ ಕೆಲಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.
ಸ್ಥಳದಲ್ಲಿದ್ದ ಪೊಲೀಸರು ಮತ್ತು ನ್ಯಾಯಾಲಯದ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ತಕ್ಷಣವೇ ಮಹಿಳೆಯನ್ನು ತಡೆದಿದ್ದಾರೆ. ಇದರಿಂದಾಗಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಘಟನೆಯಿಂದಾಗಿ ನ್ಯಾಯಾಲಯದ ಕಲಾಪಗಳಿಗೆ ಸ್ವಲ್ಪ ಸಮಯ ಅಡ್ಡಿಯುಂಟಾಯಿತು. ಪ್ರಸ್ತುತ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಕೀಲರ ಮೇಲಿನ ವಂಚನೆ ಆರೋಪ ಹಾಗೂ ಮಹಿಳೆಯ ಕೃತ್ಯದ ಕುರಿತು ತನಿಖೆ ಆರಂಭವಾಗಿದೆ.
A Worrying Scene in Visakhapatnam Court 😑
This woman named Lakshmi from Akkayyapalem entered the District Women’s Court in Visakhapatnam on April 27, 2026.
She stood before the judge in deep anger and pain, she pulled out a blade and threatened to harm herself in the courtroom… pic.twitter.com/9rkAAshhKf
— Aparajite (@amshilparaghu) April 29, 2026








