ತುಮಕೂರು : ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಇಂದು ತುಮಕೂರಿನಲ್ಲಿ ಒಂದೇ ದಿನ ಇಬ್ಬರು ವ್ಯಕ್ತಿಗಳು ಹೃದಯಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ. ಹೃದಯಘಾತದಿಂದ ಓರ್ವ ಅರಣ್ಯಪಾಲಕ ಸಾವನ್ನಪ್ಪಿದ್ದರೆ, ಇನ್ನು ತುಮಕೂರು ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಮತ್ತೋರ್ವ ವ್ಯಕ್ತಿ ಹೃದಯಘಾತಕ್ಕೆ ಬಲಿಯಾಗಿದ್ದಾರೆ.
ಹೃದಯಾಘಾತದಿಂದ ಅರಣ್ಯ ಪಾಲಕ ನವೀನ್ (31) ಸಾವನ್ನಪ್ಪಿದ್ದಾರೆ. ಬುಕ್ಕಾಪಟ್ಟಣದ ಅರಣ್ಯ ಪ್ರದೇಶದ ದಸೂಡಿಯಲ್ಲಿ ಈ ಒಂದು ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬುಕ್ಕಾಪಟ್ಟಣದಲ್ಲಿ ಕರ್ತವ್ಯದಲ್ಲಿ ಇದ್ದಾಗಲೇ ಹೃದಯಾಘಾತದಿಂದ ನವೀನ್ ಸಾವನ್ನಪ್ಪಿದ್ದಾರೆ.
ಇತ್ತೀಚಿಗೆ ಅಷ್ಟೇ ಮೃತ ನವೀನ್ ತುಮಕೂರಿಗೆ ವರ್ಗಾವಣೆಯಾಗಿದ್ದರು. ಮೂಲತಃ ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಸಿಂಗಟಗೆರೆ ನಿವಾಸಿ ಎಂದು ತಿಳಿದುಬಂದಿದೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಇನ್ನು ಮತ್ತೋರ್ವ ವ್ಯಕ್ತಿ ನ್ಯಾಯಾಲಯ ಆವರಣದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ನ್ಯಾಯಾಲಯ ಆವರಣದಲ್ಲಿ ಈ ಒಂದು ಘಟನೆ ನಡೆದಿದೆ. ಹೃದಯಘಾತದಿಂದ ತರಕಾರಿ ವ್ಯಾಪಾರಿ ರಂಗನಾಥ (35) ನ್ಯಾಯಾಲಯದ ಆವರಣದಲ್ಲಿ ಸಾವನ್ನಪ್ಪಿದ್ದಾರೆ.