ಬೆಂಗಳೂರು : ದೆಹಲಿಯಲ್ಲಿ ಬೀದಿ ನಾಯಿ ಕಡಿತ ಪ್ರಕರಣವಾಗಿ ಸುಪ್ರೀಂ ಕೋರ್ಟ್ ಪ್ರಾಣಿ ಪ್ರಿಯರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಸಂದರ್ಭದಲ್ಲೇ ಇತ್ತ ಕರ್ನಾಟಕದಲ್ಲಿ ಆಘಾತಕಾರಿ ವರದಿ ಬಹಿರಂಗವಾಗಿದೆ. 2025ರ ಮೊದಲ ಏಳು ತಿಂಗಳಲ್ಲಿ 2.81 ಲಕ್ಷ ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ, ಇದು ಕಳೆದ ವರ್ಷಕ್ಕಿಂತ ಶೇ 37 ರಷ್ಟು ಹೆಚ್ಚಳವಾಗಿದೆ.
ಹೌದು ಈ ವರ್ಷ ಇಲ್ಲಿಯವರೆಗೆ 26 ಜನರು ಹುಚ್ಚು ನಾಯಿ ಕಡಿತದಿಂದ ಮೃತಪಟ್ಟಿದ್ದಾರೆ. ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ, 2024 ರಲ್ಲಿ ಒಟ್ಟಾರೆಯಾಗಿ 3.6 ಲಕ್ಷ ನಾಯಿ ಕಡಿತ ಪ್ರಕರಣಗಳು ವರದಿಯಾಗಿದ್ದವು. ಹುಚ್ಚುನಾಯಿ ಕಡಿತದಿಂದ 42 ಸಾವುಗಳು ಸಂಭವಿಸಿದ್ದವು. ಆ ಪೈಕಿ 1.69 ಲಕ್ಷ ಪ್ರಕರಣಗಳು ಮತ್ತು 28 ಸಾವುಗಳು ಜನವರಿ ಮತ್ತು ಜುಲೈ ನಡುವೆ ದಾಖಲಾಗಿದ್ದವು.
ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ, 2020’ ರ ಅಡಿಯಲ್ಲಿ ಮಾನವ ರೇಬೀಸ್ ಅನ್ನು ಅಧಿಸೂಚಿತ ರೋಗವೆಂದು ಘೋಷಿಸಲಾಗಿದೆ ಎಂದು ಇಂಟಿಗ್ರೇಟೆಡ್ ಡಿಸೀಸ್ ಸರ್ವೈಲೆನ್ಸ್ ಪ್ರೋಗ್ರಾಂನ ಡಾ. ಎಸ್. ಶ್ರೀನಿವಾಸ್ ಹೇಳಿ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಇದರ ಪ್ರಕಾರ, ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳು ಶಂಕಿತ ಅಥವಾ ಸಂಭವನೀಯ ಮತ್ತು ದೃಢಪಡಿಸಿದ ಮಾನವ ರೇಬೀಸ್ ಪ್ರಕರಣಗಳನ್ನು ಇಲಾಖೆಗೆ ವರದಿ ಮಾಡುವುದು ಕಡ್ಡಾಯವಾಗಿದೆ.
ವಿಜಯಪುರ ಜಿಲ್ಲೆಗೆ ಅಗ್ರಸ್ಥಾನ!
ನಾಯಿ ಕಡಿತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲೆ 15,527 ನಾಯಿ ಕಡಿತ ಪ್ರಕರಣಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಬೆಂಗಳೂರು 13,821 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಹಾಸನ (13,388), ದಕ್ಷಿಣ ಕನ್ನಡ (12,524) ಮತ್ತು ಬಾಗಲಕೋಟೆ (12,392) ನಂತರದ ಸ್ಥಾನಗಳಲ್ಲಿವೆ. ಧಾರವಾಡ, ಬೆಳಗಾವಿ, ಉತ್ತರ ಕನ್ನಡ ಮತ್ತು ಗದಗ ಜಿಲ್ಲೆಗಳಲ್ಲಿ ತಲಾ 7,000 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ.