ಬೆಂಗಳೂರು : ನಿನ್ನೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿವೇಶನ ಆರಂಭವಾಗಿದ್ದು, ವಿಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ವಕ್ಫ್, ಮುಡಾ ಹಗರಣ ಹಾಗೂ ಬಳ್ಳಾರಿಯಲ್ಲಿ ಬಾಣಂತಿಯರ ಸಾವು ವಿಷಯವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದವು. ಇದರ ಬೆನ್ನಲ್ಲೇ ಕಳೆದ ಬಿಜೆಪಿ ಅವಧಿಯಲ್ಲಿ ಎಷ್ಟು ಬಾಣಂತಿಯರು ಸಾವನಪ್ಪಿದ್ದಾರೆ ಎನ್ನುವುದನ್ನು ಸಿಎಂ ಕಚೇರಿ ಮಾಹಿತಿ ಬಹಿರಂಗಗೊಳಿಸಿದೆ.
ಹೌದು ಕಳೆದ 5 ವರ್ಷಗಳಲ್ಲಿ ಕರ್ನಾಟಕದಲ್ಲಿ 3,364 ಬಾಣಂತಿಯರು ಸಾವಿಗೀಡಾಗಿರುವುದಾಗಿ ಸಿಎಂ ಕಚೇರಿ ಮಾಹಿತಿ ನೀಡಿದೆ. ಈ ಸಂಬಂಧ ಅಂಕಿಅಂಶ ನೀಡಿರುವ ಮುಖ್ಯಮಂತ್ರಿಗಳ ಕಚೇರಿ 2019-20ರಿಂದ 2024-25 ನವೆಂಬರ್ವರೆಗೆ ರಾಜ್ಯದಲ್ಲಿ ಒಟ್ಟು 3,364 ಬಾಣಂತಿಯರು ಮೃತಪಟ್ಟಿರುವುದು ವರದಿಯಾಗಿದೆ ಎಂದು ತಿಳಿಸಿದೆ.
ಸದನದಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸಲು ಪ್ರತಿಪಕ್ಷಗಳು ಮುಂದಾಗಿವೆ. ಈ ಮಧ್ಯೆ ಮುಖ್ಯಮಂತ್ರಿ ಕಚೇರಿ ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿನ ಬಾಣಂತಿಯರ ಸಾವುಗಳ ಅಂಕಿಅಂಶ ನೀಡಿದೆ. ಆ ಮೂಲಕ ಬಿಜೆಪಿ ಅವಧಿಯಲ್ಲೂ ಬಾಣಂತಿಯರ ಸಾವು ಹೆಚ್ಚಿರುವ ಬಗ್ಗೆ ಅಂಕಿಅಂಶ ಬಹಿರಂಗ ಪಡಿಸಿದೆ.
ಅದರಂತೆ 2019-20ರಲ್ಲಿ ರಾಜ್ಯದಲ್ಲಿ ಒಟ್ಟು 662 ಬಾಣಂತಿಯರು ಸಾವಿಗೀಡಾಗಿದ್ದರು. 2020-21ರಲ್ಲಿ ಒಟ್ಟು 714 ಬಾಣಂತಿಯರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. 2021-22ರಲ್ಲಿ 595 ಬಾಣಂತಿಯರು, 2022-23ರಲ್ಲಿ 527, 2023-24ರಲ್ಲಿ 518 ಹಾಗೂ 2024-25 ಸಾಲಿನ ನವೆಂವರ್ ವರೆಗೆ 348 ಬಾಣಂತಿಯರು ಸಾವಿಗೀಡಾಗಿರುವ ವರದಿಯಾಗಿದೆ ಎಂಬ ಅಂಕಿಅಂಶ ತಿಳಿಸಿದೆ.