ನವದೆಹಲಿ : ರಿಯಲ್ ಎಸ್ಟೇಟ್ ಡೀಲರ್ ಒಬ್ಬರು ಕ್ಯಾನ್ಸರ್ ಗೆ ವ್ಯರ್ಥವಾಗಿ ಹಣ ಖರ್ಚು ಆಗಬಾರದು ಎಂದು ತನ್ನ ಪತ್ನಿಯನ್ನು ಗುಂಡಿಕ್ಕಿ ಕೊಂದು ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಾಜಿಯಾಬಾದ್ನಲ್ಲಿ ನಿನ್ನೆ ನಡೆದಿದೆ. ಕುಲದೀಪ್ ತ್ಯಾಗಿ (46) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಆತ್ಮಹತ್ಯೆಗೂ ಮುನ್ನ ಬರೆದಿದ್ದ ಡೆತ್ನೋಟ್ನಲ್ಲಿ ನನಗೆ ಕ್ಯಾನ್ಸರ್ ಇತ್ತು. ಚಿಕಿತ್ಸೆಗೆ ಹಣ ವ್ಯರ್ಥವಾಗಬಾರದು ಎಂದು ಈ ನಿರ್ಧಾರಕ್ಕೆ ಬಂದೆವು. ಪತ್ನಿ ಅಂಶು ತ್ಯಾಗಿ ಮತ್ತು ನಾನು ಒಟ್ಟಿಗೆ ಇರುವುದಾಗಿ ನಿರ್ಧರಿಸಿದೆವು. ಹೀಗಾಗಿ, ಅವಳನ್ನೂ ಕೊಂದಿದ್ದೇನೆ ಎಂದು ಉಲ್ಲೇಖವಾಗಿದೆ.
ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದರು. ಕುಲದೀಪ್ ಅವರ ತಂದೆ ನಿವೃತ್ತ ಪೊಲೀಸ್ ಅಧಿಕಾರಿ ಎಂದು ತಿಳಿದುಬಂದಿದೆ.ಪೊಲೀಸರ ಪ್ರಕಾರ, ರಾಜ್ ನಗರ ಎಕ್ಸ್ಟೆನ್ಶನ್ನ ರಾಧಾ ಕುಂಜ್ ಸೊಸೈಟಿಯಲ್ಲಿರುವ ತನ್ನ ಮನೆಯಲ್ಲಿ ನಿನ್ನೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಪರವಾನಗಿ ಪಡೆದ ರಿವಾಲ್ವರ್ನಿಂದ ಗುಂಡು ಹಾರಿಸಿ ಕುಲದೀಪ್ ಮೊದಲಿಗೆ ತನ್ನ ಪತ್ನಿಯನ್ನು ಕೊಂದಿದ್ದಾರೆ.
ನಂತರ ತಾನು ಗುಂಡು ಹಾರಿಸಿಕೊಂಡಿದ್ದಾರೆ. ಘಟನೆ ನಡೆದ ಸಮಯದಲ್ಲಿ ಅವರ ಮಕ್ಕಳು ಮನೆಯಲ್ಲೇ ಇದ್ದರು. ಗುಂಡೇಟಿನ ಶಬ್ದ ಕೇಳಿ ತಮ್ಮ ಹೆತ್ತವರ ರೂಂ ಬಳಿ ಬಂದು ನೋಡಿದಾಗ, ಕುಲದೀಪ್ ಅವರ ಮೃತದೇಹ ನೆಲದ ಮೇಲೆ ಮತ್ತು ಅಂಶು ಅವರ ಮೃತದೇಹ ಹಾಸಿಗೆಯ ಮೇಲೆ ಪತ್ತೆಯಾಗಿತ್ತು. ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆವೇಳೆಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಡೆತ್ನೋಟ್ನಲ್ಲೇನಿತ್ತು?
ನಾನು ಕ್ಯಾನ್ಸರ್ನಿಂದ ಬಳಲುತ್ತಿದ್ದೇನೆ. ಆದರೆ, ಈ ವಿಚಾರ ನನ್ನ ಕುಟುಂಬದವರಿಗೆ ತಿಳಿದಿಲ್ಲ. ಬದುಕುಳಿಯುವುದು ಕಷ್ಟ ಎಂದು ತಿಳಿದಿತ್ತು. ನನ್ನ ಚಿಕಿತ್ಸೆಗೆ ಹಣ ವ್ಯರ್ಥವಾಗಬಾರದು ಎಂದು ನಾನು ಬಯಸುತ್ತೇನೆ. ಬದುಕಿದರೂ, ಸತ್ತರೂ ನಿನ್ನ ಜೊತೆಯೇ ಎಂದು ಪತ್ನಿ ಹೇಳಿದ್ದಳು. ಹಾಗಾಗಿ, ಇಬ್ಬರೂ ಒಟ್ಟಿಗೆ ಸಾಯಲು ನಿರ್ಧರಿಸಿದ್ದೇವೆ. ನಾನು ನನ್ನ ಹೆಂಡತಿಯನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದೇನೆ. ಇದರಲ್ಲಿ ಯಾರೂ ಕೂಡ ತಪ್ಪಿತಸ್ಥರಲ್ಲ ಎಂದು ಡೆತ್ನೋಟ್ನಲ್ಲಿ ಕುಲದೀಪ್ ಬರೆದಿದ್ದರು.