ಡೆಹ್ರಾಡೂನ್ : ಉತ್ತರಾಖಂಡದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಬಾಂಡಾ ನಿವಾಸಿಯಾದ ಮಹೇಶ್ ಕುಮಾರ್ ತಿವಾರಿ ಅನ್ನೋ ಅರ್ಚಕ ಇಡೀ ಕುಟುಂಬವನ್ನೇ ಕ್ರೂರವಾಗಿ ಕೊಲೆ ಮಾಡಿದ್ದಾನೆ.
ಕಳೆದ ಏಳು ವರ್ಷಗಳಿಂದ ಡೆಹ್ರಾಡೂನ್ʼನ ರಾಣಿ ಪೋಖಾರಿಯಲ್ಲಿ ವಾಸವಿದ್ದ ಆತ ಇಂದು ಬೆಳ್ಳಂ ಬೆಳಿಗ್ಗೆ (ಸೋಮವಾರ) ಆತ ತನ್ನ ಸ್ವಂತ ಕುಟುಂಬವನ್ನೇ ಕಡಿದು ಕೊಂದಿದ್ದಾನೆ. ಅತೀಂದ್ರಿಯ ಶಕ್ತಿ ಪಡೆಯಲು ಅವ್ರನ್ನೆಲ್ಲಾ ಅಮಾನುಷವಾಗಿ ಕೊಂದಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.
47 ವರ್ಷದ ಅರ್ಚಕ ಕುಟುಂಬದ ಐವರು ಸದಸ್ಯರನ್ನ ಇರಿದು ಕೊಂದಿದ್ದಾನೆ. ಮೃತರಲ್ಲಿ ಆರೋಪಿಯ ತಾಯಿ, ಪತ್ನಿ ಮತ್ತು ಮೂವರು ಪುತ್ರಿಯರು ಸೇರಿದ್ದಾರೆ. ಕೊಲೆಯ ನಂತ್ರ ಅವ್ರ ಮೃತ ದೇಹಗಳಲ್ಲಿ ಅತೀಂದ್ರಿಯ ಶಕ್ತಿ ಪಡೆಯಲು ಕೆಲ ಆಚರಣೆಗಳನ್ನ ಮಾಡಿದ್ದಾನೆ. ಸೋಮವಾರ ಬೆಳಿಗ್ಗೆ 7:30 ರ ಸುಮಾರಿಗೆ ಈ ಘಟನೆ ನಡೆದಿದೆ. ಆದಾಗ್ಯೂ, ನೆರೆಹೊರೆಯವರು ಮನೆಯಿಂದ ಕುಟುಂಬ ಸದಸ್ಯರ ಚೀರಾಟ ಕೇಳಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಡೆಹ್ರಾಡೂನ್ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ನಂತರ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಡೆಹ್ರಾಡೂನ್ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಕಮಲೇಶ್ ಉಪಾಧ್ಯಾಯ ತಿಳಿಸಿದ್ದಾರೆ.