ಬೆಂಗಳೂರು : ಕರ್ನಾಟಕದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಈ ವರ್ಷ ನಾಯಿ ದಾಳಿಯಿಂದಾಗಿ ರೇಬಿಸ್ ಕಾಯಿಲೆಗೆ 12ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ರಾಜ್ಯದಲ್ಲಿ ಪ್ರತಿ ವರ್ಷ ರೇಬೀಸ್ ರೋಗಕ್ಕೆ 25ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ವರ್ಷ ಈಗಾಗಲೇ ರಾಜ್ಯದಲ್ಲಿ 12ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. 2022ರಲ್ಲಿ 32 ಜನರು ರೇಬಿಸ್ ರೋಗಕ್ಕೆ ಬಲಿಯಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರೇಬಿಸ್ ಪ್ರಕರಣಗಳು ಕೊಂಚ ಏರಿಕೆಯಾಗಿದೆ.
ಮನುಷ್ಯರಿಗೆ ರೇಬಿಸ್ ರೋಗವು ಶೇ.99ರಷ್ಟು ನಾಯಿ ಕಡಿತದಿಂದ ಬರುತ್ತದೆ, ಇನ್ನುಳಿದಂತೆ ಬೆಕ್ಕು ತೋಳ ನಾಯಿ ಕಾಡು ಪ್ರಾಣಿಗಳ ಕಡಿತದಿಂದ ಶೇ.1 ಪ್ರಮಾಣದಷ್ಟು ಹರಡುತ್ತದೆ. ರೇಬೀಸ್ ತಡೆಗೆ ನಾಯಿ ಕಚ್ಚಿದ ನಂತರ ಗಾಯವನ್ನು ಸ್ವಚ್ಚ ನೀರಿನಲ್ಲಿ 15 ನಿಮಿಷಗಳ ಕಾಲ ತೊಳೆಯುವುದರಿಂದ ಶೇ.50 ರಿಂದ 70 ರಷ್ಟು ರೇಬಿಸ್ಗೆ ತುತ್ತಾಗುವುದನ್ನು ತಡೆಯಬಹುದು. ವೈದ್ಯರ ಸಲಹೆ ಮೇರೆಗೆ 1ನೇ ದಿವಸ, 3ನೇ ದಿವಸ, 7ನೇ ದಿವಸ, 14ನೇ ದಿವಸ, 28ನೇ ದಿವಸ ಸಂಪೂರ್ಣವಾಗಿ (ಎಲ್ಲಾ 5 ಡೋಸ್ಗಳನ್ನು) ಪಡೆಯುವುದರ ಮೂಲಕ ರೇಬಿಸ್ ತಡೆಗಟ್ಟಬಹುದಾಗಿದೆ.
ರೇಬಿಸ್ ಖಾಯಿಲೆಗೆ ಒಮ್ಮೆ ತುತ್ತಾದ ಬಳಿಕ ಯಾವುದೇ ಚಿಕಿತ್ಸೆ ಇರುವುದಿಲ್ಲವಾದರೂ ರೇಬಿಸ್ ಖಾಯಿಲೆಯು ಸೂಕ್ತ ಪೂರ್ವ ರೋಗ ನಿರೋಧಕ ಲಸಿಕೆ ಪಡೆಯುವುದರಿಂದ ಸಂಪೂರ್ಣವಾಗಿ ತಡೆಗಟ್ಟಬಹುದಾಗಿದೆ. ಆದ್ದರಿಂದ ಸಾರ್ವಜನಿಕರು ಯಾವುದೇ ಪ್ರಾಣಿ ಕಡಿತ ಸಂದರ್ಭದಲ್ಲಿ ಗಾಬರಿಪಡದೆ ನಾಯಿ, ಪ್ರಾಣಿ ಕಡಿತದ 24 ಗಂಟೆಯೊಳಗೆ ಆ್ಯಂಟಿ ರೇಬಿಸ್ ಲಸಿಕೆಯನ್ನು ತಪ್ಪದೇ ಪಡೆಯಬೇಕು.