ಬೆಂಗಳೂರು : ಇತ್ತೀಚಿಗೆ ಯುವಜನತೆಯಲ್ಲಿ ಹೃದಯಾಘಾತ ಹೆಚ್ಚಾಗಿ ಕಂಡುಬರುತ್ತಿದ್ದು, ಅದರಲ್ಲೂ ಕಳೆದ ಒಂದು ತಿಂಗಳಲ್ಲಿ ಹಾಸನ ಜಿಲ್ಲೆಯಲ್ಲಿ ಅತಿ ಹೆಚ್ಚು ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದೀಗ ಕಳೆದ 24 ಗಂಟೆಯಲ್ಲೇ ಓರ್ವ ಯುವಕ, ಯುವತಿ ಸೇರಿದಂತೆ ಇಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಹೌದು ನಿನ್ನೆ ಸಂಜೆ ಅಷ್ಟೇ ಹಾಸನ ಮೂಲದ ಯುವಕ ಬೆಂಗಳೂರಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರೆ, ಮತ್ತೋರ್ವ ಹಾಸನ ಮೂಲದ ಯುವತಿ ಬೆಂಗಳೂರಿನಲ್ಲಿ ಹೃದಯಘಾತಕ್ಕೆ ಬಲಿಯಾಗಿದ್ದಾರೆ. ಇದರೊಂದಿಗೆ ಹಾಸನದವರು ಒಂದೇ ತಿಂಗಳಲ್ಲಿ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
32 ವರ್ಷದ ಆಟೋ ಚಾಲಕ ಸಾವು
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಎಂ ಹೊನ್ನೇನಹಳ್ಳಿ ಗ್ರಾಮದ 32 ವರ್ಷದ ಯೋಗೇಶ್ ಬೆಂಗಳುರಿನಲ್ಲಿ ನಿನ್ನೆ(ಜೂನ್ 25) ಹೃದಯಾಘಾತದಿಂದ ಸಾವನ್ನಪ್ಪಿದ್ದರು. ನಾಲ್ಕು ವರ್ಷಗಳ ಹಿಂದೆ ಅಷ್ಟೇ ವಿವಾಹವಾಗಿದ್ದ ಯೋಗೇಶ್ ಬೆಂಗಳೂರಿನಲ್ಲಿ ಆಟೋ ಓಡಿಸಿಕೊಂಡು ಲಗ್ಗೆರೆಯಲ್ಲಿ ವಾಸವಿದ್ದ. ಆದ್ರೆ, ಬುಧವಾರ ಬೆಳಗ್ಗೆ ಆಟೋ ಓಡಿಸಿ ಮನೆಗೆ ಬಂದು ಮಲಗಿದ್ದು, ಕೊಠಡಿಯಲ್ಲೇ ಮಲಗಿದ್ದಲ್ಲಿಯೇ ಸಾವನ್ನಪ್ಪಿದ್ದಾನೆ. ಬಳಿಕ ಆಸ್ಪತ್ರೆಗೆ ಹೋದಾಗ ವೈದ್ಯರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಿದ್ದಾರೆ.
ಪದವಿ ವಿದ್ಯಾರ್ಥಿನಿ ಸಾವು!
ಇನ್ನು ಇಂದು ಬೆಂಗಳೂರಲ್ಲಿ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕಟ್ಟಳ್ಳಿ ಗ್ರಾಮದ ಸುಪ್ರಿಯಾ (22) ಎಂಬ ಯುವತಿ ಮನೆಯಲ್ಲೇ ಕುಸಿದು ಸಾವನ್ನಪ್ಪಿದ್ದಾಳೆ. ಸುಪ್ರಿಯಾ ಕುಟುಂಬ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ವಾಸವಿದ್ದು, ಸುಪ್ರಿಯಾ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪದವಿ ಓದುತ್ತಿದ್ದಳು. ವಿದ್ಯಾಭ್ಯಾಸದ ಜೊತೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಳು.
ಆದ್ರೆ, ಮನೆಯಲ್ಲಿ ಸುಪ್ರಿಯಾಗೆ ಏಕಾಏಕಿ ಎದೆನೋವು ಕಾಣಿಸಿಕೊಂಡು ಕುಸಿದುಬಿದ್ದಿದ್ದಾಳೆ. ಕೂಡಲೇ ಪೋಷಕರು, ಸುಪ್ರಿಯಾಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ, ದುರದೃಷ್ಟವಶಾತ್, ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಸುಪ್ರಿಯಾ ಮೃತಪಟ್ಟಿದ್ದಾಳೆ. ಇದುವರಿಗೆ ಹಾಸನದಲ್ಲಿ ಅದು ಒಂದೇ ತಿಂಗಳಲ್ಲಿ 14 ಜನರು ಸಾವನ್ನಪ್ಪಿದ್ದಾರೆ.