ಬೆಂಗಳೂರು: ಕುಡಿಯುವ ನೀರಿನ ಸಂಪ್ ಸ್ವಚ್ಛಗೊಳಿಸಲು ಇಳಿದಿದ್ದ ಮನೆ ಮಾಲೀಕ ಸೇರಿದಂತೆ ಮೂವರು ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರಿನ ವೈಟ್ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿಯಲ್ಲಿ ನಡೆದಿದೆ.
ಘಟನೆಯ ವಿವರ
ಇಮ್ಮಡಿಹಳ್ಳಿಯ ದೇವಸ್ಥಾನದ ವೃತ್ತದ ಬಳಿ ವಾಸವಾಗಿದ್ದ ಮನೆ ಮಾಲೀಕ ಮುನಿಶಾಮಪ್ಪ (67) ಅವರು ತಮ್ಮ ಮನೆಯ ನೀರಿನ ಸಂಪ್ ಅನ್ನು ರಾಸಾಯನಿಕ ಬಳಸಿ ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ರಾಸಾಯನಿಕದ ತೀಕ್ಷ್ಣ ವಾಸನೆ ಹಾಗೂ ಗಾಳಿಯ ಕೊರತೆಯಿಂದಾಗಿ ಅವರು ಸಂಪ್ ಒಳಗಡೆಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.
ರಕ್ಷಣೆಗೆ ಹೋದವರಿಗೂ ತಟ್ಟಿದ ಕುತ್ತು:
ಮುನಿಶಾಮಪ್ಪ ಅವರ ರಕ್ಷಣೆಗೆ ಧಾವಿಸಿದ ಪ್ಲಂಬರ್ ಕೆಲಸಗಾರ ರುದ್ರ ಕುಮಾರ್ (40) ಅವರು ಕೂಡ ಉಸಿರಾಟದ ಸಮಸ್ಯೆಯಿಂದ ಸಂಪ್ನಲ್ಲೇ ಕುಸಿದು ಬಿದ್ದಿದ್ದಾರೆ. ಈ ಇಬ್ಬರನ್ನು ಕಂಡು ಗಾಬರಿಗೊಂಡು ಸಹಾಯ ಮಾಡಲು ಹೋದ ಡೆಲಿವರಿ ಬಾಯ್ ವಿಶ್ವನಾಥ್ ಆಚಾರ್ (40) ಕೂಡ ಪ್ರಜ್ಞೆ ತಪ್ಪಿದ್ದಾರೆ.
ಸ್ಥಳೀಯರು ತಕ್ಷಣವೇ ತುರ್ತು ಸಂಖ್ಯೆ 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಮೂವರನ್ನೂ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವೈಟ್ಫೀಲ್ಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.








