ಚಿಕ್ಕಮಗಳೂರು : ಚಿಕ್ಕಮಗಳೂರಲ್ಲಿ ಭೀಕರ ಕೊಲೆ ನಡೆದಿದ್ದು, ಕುಡಿದ ಮತ್ತಿನಲ್ಲಿ ಅಪ್ಪನೇ ಹೆತ್ತ ಮಗನನ್ನು ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ನಡೆದಿದೆ. ಪ್ರದೀಪ್ ಆಚಾರ್ (29) ಮೃತ ದುರ್ದೈವಿ ಎಂದು ತಿಳಿದುಬಂದಿದ್ದು, ರಮೇಶ್ ಆಚಾರ್ ಮಗನನ್ನೇ ಕೊಲೆಗೈದಿರೋ ಅಪ್ಪ.
ಕ್ಷುಲಕ ಕಾರಣಕ್ಕೆ ಕುಡಿದು ಅಪ್ಪ-ಮಗ ಇಬ್ಬರೂ ಆಗಾಗ ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು. ಕುಡಿದು ಗಲಾಟೆ ಮಾಡುತ್ತಿದ್ದ ಅಪ್ಪ-ಮಗನ ಕಾಟಕ್ಕೆ ಬೇಸತ್ತು ಪ್ರದೀಪ್ ತಾಯಿ ಮನೆ ಬಿಟ್ಟು ಹೋಗಿದ್ದರು. ಬಳಿಕ ಮನೆಯಲ್ಲಿ ಅಪ್ಪ-ಮಗ ಇಬ್ಬರೇ ವಾಸವಿದ್ದರು ಎಂದು ತಿಳಿದುಬಂದಿದೆ. ಶನಿವಾರ ರಾತ್ರಿ ಅಪ್ಪ-ಮಗನ ಮಧ್ಯೆ ಗಲಾಟೆ ನಡೆದ ಸಂದರ್ಭ ಮಗನನ್ನು ಕಡಿದು ಅಪ್ಪ ಅಲ್ಲೇ ಮಲಗಿದ್ದ.
ಮಗ ಪ್ರದೀಪ್ ಇಡೀ ರಾತ್ರಿ ರಕ್ತದ ಮಡುವಿನಲ್ಲಿ ಬಿದ್ದು ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ. ಬೆಳಗ್ಗೆ ಮಗನ ಮೃತದೇಹವನ್ನು ಅಪ್ಪ ಹಾಲ್ನಿಂದ ಹೊರಕ್ಕೆ ಎಳೆದು ತಂದಿದ್ದ. ಇದನ್ನು ನೋಡಿದ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








