ವಿಜಯನಗರ : ರಾಜ್ಯದಲ್ಲಿ ಒಂದು ಹೃದಯವಿದ್ರಾವಕ ಘಟನೆ ನಡೆದಿದ್ದು, ಪಾಪಿಗಳು ನವಜಾತ ಹೆಣ್ಣು ಶಿಶುವನ್ನು ಚರಂಡಿಯಲ್ಲಿ ಬಿಸಾಡಿ ಹೋಗಿರುವ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ದಶಮಾಪುರ ಗ್ರಾಮದಲ್ಲಿ ನಿನ್ನೆ ನಡೆದಿದೆ.
ದಶಮಾಪುರ ಗ್ರಾಮದ ಆಶಾ ಕಾರ್ಯಕರ್ತೆ ಮಲ್ಲಮ್ಮ ಅವರು ನೀಡಿರುವ ಪ್ರಕರಣದ ಪ್ರಕಾರ, ಗ್ರಾಮದ ಕಣಿವೆಹಳ್ಳಿ ಕೃಷ್ಣಪ್ಪನವರ ಗಣದ ಪಕ್ಕದಲ್ಲಿರುವ ಚರಂಡಿಯಲ್ಲಿ ನವಜಾತ ಅಪರಿಚಿತ ಹೆಣ್ಣು ಶಿಶುವಿನ ಶವ ಅಂಗಾತವಾಗಿ ತೇಲುತ್ತಿದ್ದನ್ನು ಗ್ರಾಮಸ್ಥರು ಗಮನಿಸಿದ್ದಾರೆ.
ಈ ಬಗ್ಗೆ ಅವರು ಮಾತನಾಡಿಕೊಳ್ಳುತ್ತಿದ್ದನ್ನು ತಿಳಿದುಕೊಂಡು ಕೂಡಲೇ ಗ್ರಾಮ ಅಭಿವೃದ್ಧಿ ಅಧಿಕಾರಿ ನವೀನ್ ಅವರಿಗೆ ದೂರವಾಣಿ ಮೂಲಕ ತಿಳಿಸಿ ಗ್ರಾಮ ಪಂಚಾಯತ್ ಸಿಬ್ಬಂದಿಯೊಂದಿಗೆ ಶಿಶುವನ್ನು ಚರಂಡಿಯಿಂದ ಹೊರ ತೆಗೆದು ನೋಡಿದಾಗ ಶಿಶು ಸುಮಾರು 2-3 ದಿನಗಳ ಹಿಂದೆ ಜನಿಸಿದ ನವಜಾತ ಶಿಶು ಎಂದು ತಿಳಿದು ಬಂದಿದೆ.
ಕಚೇರಿಯ ಮೇಲ್ವಿಚಾರಕಿಯರಾದ ನಾಗರತ್ನಮ್ಮ, ಲಲಿತಮ್ಮ ಸ್ಥಳಕ್ಕೆ ಬಂದು ನೋಡಿ ವಿಷಯವನ್ನು ಪೊಲೀಸ್ ಠಾಣೆಯಲ್ಲಿ ತಿಳಿಸಿ ನವಜಾತ ಮೃತ ಹೆಣ್ಣು ಶಿಶುವಿನ ವಾರಸುದಾರರನ್ನು ಪತ್ತೆ ಮಾಡಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರು ದಾಖಲಿಸಲಾಗಿದೆ. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.