ಉತ್ತರಪ್ರದೇಶ : ಇತ್ತೀಚಿಗೆ ದೇಶದಲ್ಲಿ ಹೆಂಡತಿಯರು ಬೇರೆ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದುವುದು ಅಷ್ಟೇ ಅಲ್ಲದೆ, ಕಟ್ಟಿಕೊಂಡ ಗಂಡನನ್ನೇ ಭೀಕರವಾಗಿ ಕೊಲೆ ಮಾಡುತ್ತಿರುವ ಪ್ರಕರಣಗಳು ಆತಂಕಕಾರಿ ಬೆಳವಣಿಗೆಗೆ ಕಾರಣವಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಮೇಘಾಲಯದಲ್ಲಿ ರಾಜ ರಘುವಂಶಿ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೆಳಿಸಿತ್ತು. ಇದೀಗ ಇದೇ ಮಾದರಿಯಲ್ಲಿ ಉತ್ತರ ಪ್ರದೇಶದಲ್ಲಿ ಮತ್ತೊಂದು ಭೀಕರವಾದ ಕೊಲೆ ನಡೆದಿದೆ.
ಹೌದು ಇಂದ್ರ ಕುಮಾರ್ ಎಂಬಾತನ ಆಸ್ತಿ ಮೇಲೆ ಕಣ್ಣಿಟ್ಟಿದ್ದ ಮಹಿಳೆ ಅವರನ್ನು ಹೇಗೋ ಬಲೆಗೆ ಬೀಳಿಸಿ ಮದುವೆಯಾಗಿ ಮರುಕ್ಷಣವೇ ಕೊಂದು ಚರಂಡಿಗೆ ಎಸೆದಿರುವ ಮಾಹಿತಿ ಲಭ್ಯವಾಗಿದೆ. ಈ ಘಟನೆ ಉತ್ತರ ಪ್ರದೇಶದ, ಖುಷಿನಗರದ ಹಟಾ ಪ್ರದೇಶದಲ್ಲಿ ನಡೆದಿದೆ. ಮಹಿಳೆಯೊಬ್ಬಳು 45 ವರ್ಷದ ವ್ಯಕ್ತಿಯನ್ನು ಆನ್ಲೈನ್ ಮೂಲಕ ಪರಿಚಯ ಮಾಡಿಕೊಂಡು, ನಂತರ ಬಲೆಗೆ ಬೀಳಿಸಿ, ಮದುವೆಯ ಆಮಿಷವೊಡ್ಡಿ, ಮದುವೆಯಾಗಿ ಕೆಲವೇ ಗಂಟೆಗಳಲ್ಲಿ ಆತನನ್ನು ಕೊಂದು ಚರಂಡಿಗೆಸೆದಿದ್ದಾಳೆ.
ಸಾಮಾಜಿಕ ಮಾಧ್ಯಮದ ಮೂಲಕ ತಿವಾರಿ ಅವರನ್ನು ಸಂಪರ್ಕಿಸಿ, ನಕಲಿ ಆಧಾರ್ ಕಾರ್ಡ್ ಬಳಸಿ ತನ್ನ ಗುರುತನ್ನು ನಕಲಿಯಾಗಿ ಸೃಷ್ಟಿಸಿ ಗೋರಖ್ಪುರಕ್ಕೆ ಬರುವಂತೆ ಮನವೊಲಿಸಿದಳು. ಅಲ್ಲಿ ಇಬ್ಬರು ಸಹಚರರ ಸಹಾಯದಿಂದ ನಕಲಿ ವಿವಾಹ ಸಮಾರಂಭವನ್ನು ಆಯೋಜಿಸಿ ಕೆಲವೇ ಗಂಟೆಗಳ ನಂತರ ತಿವಾರಿ ಅವರನ್ನು ಕೊಲೆ ಮಾಡಿದಳು. ಅವರ ಶವವನ್ನು ಚರಂಡಿಯಲ್ಲಿ ಎಸೆಯಲಾಗಿತ್ತು.
ಜೂನ್ 6ರಂದು ಉತ್ತರ ಪ್ರದೇಶದಲ್ಲಿ ಖುಷಿನಗರದ ಚರಂಡಿಯಲ್ಲಿ ಇಂದ್ರ ಕುಮಾರ್ ತಿವಾರಿ ಮೃತದೇಹ ಪತ್ತೆಯಾಗಿತ್ತು. ಆ ವ್ಯಕ್ತಿಯನ್ನು ಇರಿದು ಕೊಲ್ಲಲಾಗಿತ್ತು. ಮೊದಲಿಗೆ ಮೃತದೇಹವನ್ನು ಗುರುತಿಸಲಾಗಿರಲಿಲ್ಲ, ಆದರೆ ನಂತರ ಪೊಲೀಸರು ಘಟನೆ ನಡೆದ ವಾರಗಳ ನಂತರ ಜಬಲ್ಪುರದಲ್ಲಿ ನಡೆದ ನಾಪತ್ತೆ ಪ್ರಕರಣಕ್ಕೆ ಹೋಲಿಕೆ ಮಾಡಿದ್ದರು. ಸದ್ಯ ಪೊಲೀಸರು ಮಹಿಳೆ ಸಾಹಿಬಾ ಮತ್ತು ಮತ್ತಿಬ್ಬರನ್ನು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.