ಕೇರಳ : ಕೇರಳದಲ್ಲಿ ಘೋರವಾದ ದುರಂತ ಒಂದು ನಡೆದಿದ್ದು ಮಗಳ ಮದುವೆ ಒಂದು ದಿನ ಇರುವಾಗಲೇ, ಮಹಿಳೆಯೊಬ್ಬರಿಗೆ ಗಂಟಲಲ್ಲಿ ಕೇಕ್ ಸಿಲುಕಿ ಸಾವನ್ನಪ್ಪಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ತನಲೂರುನಲ್ಲಿ ನಡೆದಿರುವುದು ವರದಿಯಾಗಿದೆ.
ಹೌದು ಮಲಪ್ಪುರಂ ಜಿಲ್ಲೆಯ ತನಲೂರು ನಿವಾಸಿ ಜೈನಬಾ (44) ಗಂಟಲಲ್ಲಿ ಕೇಕ್ ಸಿಲುಕಿ ಸವನತ್ತಿದ್ದಾರೆ. ಜೈನಬಾ ಅವರ ಮನೆಯಲ್ಲಿ ಮಗಳ ಮದುವೆ ಸಂಭ್ರಮ ನಡೆಯುತ್ತಿತ್ತು. ಈ ವೇಳೆ ಸಂತಸದಿಂದ ಕೇಕ್ ಕಟ್ ಮಾಡಲಾಗಿದೆ. ರಾತ್ರಿ ಕೇಕ್ ತಿಂದು ಉಳಿದಿದ್ದ ಕಪ್ ಕೇಕ್ ಮನೆಯಲ್ಲಿ ಇಡಲಾಗಿತ್ತು. ಗುರುವಾರ (ಮೇ29) ಸಂಜೆ ಜೈನಬಾ ಅವರು ಚಹಾ ಕುಡಿಯುತ್ತಿದ್ದ ವೇಳೆ ಬಾಕಿ ಉಳಿದಿದ್ದ ಕಪ್ ಕೇಕ್ ಸೇವಿಸಿದ್ದಾರೆ.
ಕಪ್ ಕೇಕ್ ತಿನ್ನುತ್ತಿದ್ದಂತೆ, ಅದು ಜೈನಬಾ ಅವರ ಗಂಟಲಲ್ಲಿ ಸಿಲುಕಿಕೊಂಡಿದ್ದ, ಇದರಿಂದ ಅವರಿಗೆ ಉಸಿರಾಟಕ್ಕೆ ತೊಂದರೆ ಉಂಟಾಗಿದೆ. ಕೂಡಲೇ ಅವರನ್ನು ಕೊಟ್ಟಕ್ಕಲ್ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಆ ಬಳಿಕ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವೈದ್ಯರು ಎಷ್ಟೇ ಪ್ರಯತ್ನ ಪಟ್ಟರು ಜೈನಬಾ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ. ನಿನ್ನೆ ಜೈನಬಾ ಅವರ ಮಗಳ ಮದುವೆ ನಡೆಯಬೇಕಿತ್ತು. ಆದರೆ ಇಂತಹ ಸಮಯದಲ್ಲಿ ಮದುವೆಯ ಕಾರ್ಯಕ್ರಮದ ನಿಖಾ ಶಾಸ್ತ್ರವನ್ನು ಕೆಲವೇ ಕೆಲ ಜನರ ಸಮ್ಮುಖದಲ್ಲಿ ನೆರವೇರಿಸಲಾಗಿದೆ.