ಹಾಸನ : ಇತ್ತೀಚಿಗೆ ಯುವಜನತೆಯಲ್ಲಿ ಹೃದಯಾಘಾತ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದೀಗ ಇಂದು ಒಂದೇ ದಿನದಲ್ಲಿ ಹಾಸನದಲ್ಲಿ ಹೃದಯಾಘಾತಕ್ಕೆ ಇಬ್ಬರು ಬಲಿಯಾಗಿದ್ದಾರೆ. ನಗರದ ಸತ್ಯಮಂಗಲ ಬಡಾವಣೆಯಲ್ಲಿ ಹೃದಯಾಘಾತದಿಂದ 35 ವರ್ಷದ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ಚೇತನ್ (35) ಎಂದು ಗುರುತಿಸಲಾಗಿದೆ. ಮೂಲತಃ ಮಂಡ್ಯದ ಕಿಕ್ಕೇರಿ ಮೂಲದ ಚೇತನ್, ಹಾಸನ ನಗರದ ಹಳೇ ಬಸ್ ನಿಲ್ದಾಣದ ಬಳಿ ಮೊಬೈಲ್ ಅಂಗಡಿ ನಡೆಸುತ್ತಿದ್ದರು. ಸತ್ಯಮಂಗಲ ಬಡಾವಣೆಯಲ್ಲಿ ಪತ್ನಿ ಮತ್ತು ಮಗುವಿನೊಂದಿಗೆ ವಾಸವಿದ್ದರು.
ಶನಿವಾರ ಮಧ್ಯಾಹ್ನದ ವೇಳೆಗೆ ಚೇತನ್ ಊಟಕ್ಕೆ ಕುಳಿತುಕೊಳ್ಳುವಾಗ ದಿಢೀರ್ ಎದೆನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ. “ಎದೆ ನೋಯುತ್ತಿದೆ” ಎಂದು ಪತ್ನಿಗೆ ತಿಳಿಸಿ ತಕ್ಷಣವೇ ಎದ್ದು ನಿಂತು ಕುಸಿದು ಬಿದ್ದಾರೆ. ಪತ್ನಿ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ, ಅಷ್ಟರಲ್ಲಾಗಲೇ ಚೇತನ್ ಮೃತಪಟ್ಟಿದ್ದರು.
ಅದೇ ರೀತಿಯಾಗಿ ಬೇಲೂರು ಪಟ್ಟಣದ ಸಮಾಜ ಸೇವಕ ನಿಶಾದ್ ಅಹಮ್ಮದ್ (35) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇವರು ಜೀವನ ನಿರ್ವಹಣೆಗಾಗಿ ಪಟ್ಟಣದಲ್ಲಿ ಟೀ ಕ್ಯಾಂಟೀನ್ ಒಂದನ್ನು ನಡೆಸುತ್ತಿದ್ದರು. ಜೊತೆಗೆ ಸಮಾಜ ಸೇವಕ ಎಂದು ಗುರುತಿಸಿಕೊಂಡಿದ್ದರು. ಕರೊನಾ ಸಮಯದಲ್ಲಿ 80ಕ್ಕೂ ಹೆಚ್ಚು ಶವಸಂಸ್ಕಾರ ಮಾಡಿದ್ದರು. ಹಲವಾರು ಅನಾಥ ಶವಗಳಿಗೆ ನಿಶಾದ್ ಅಹಮ್ಮದ್ ಮುಕ್ತಿ ನೀಡಿದ್ದರು.
ಹಾಸನದಲ್ಲಿ ಇದುವರೆಗೂ ಹೃದಯಾಘಾತಕ್ಕೆ 7 ಬಲಿ!
ಜಿಲ್ಲೆಯಲ್ಲಿ ಒಟ್ಟು 6 ಜನರು ಹೃದಯಾಘಾತದಿಂದಲೇ ಜೀವ ಕಳೆದುಕೊಂಡಿದ್ದಾರೆ. ಆತಂಕಕಾರಿ ಸಂಗತಿ ಎಂದರೆ ಎಲ್ಲರೂ ಯುವಕರೇ ಆಗಿದ್ದಾರೆ. ಇತ್ತೀಚೆಗೆ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಕೆಲವತ್ತಿ ಗ್ರಾಮದ ಕವನ ಕೆ.ವಿ ಹಾರ್ಟ್ ಅಟ್ಯಾಕ್ನಿಂದ ಸಾವನ್ನಪ್ಪಿದ್ದರು. ಇದಾದ ಮೇಲೆ ಕೆಲವೇ ದಿನಗಳಲ್ಲಿ ಜಿಲ್ಲೆಯ 2 ಪ್ರತ್ಯೇಕ ಘಟನೆಗಳಲ್ಲಿ ಹೊಳೆನರಸೀಪುರ ಪಟ್ಟಣದ ಮಡಿವಾಳ ಬಡಾವಣೆಯ ಯುವತಿ ಸಂಧ್ಯಾ ಹಾಗೂ ಅರಕಲಗೂಡು ತಾಲೂಕಿನ ಕಾಡನೂರು ಗ್ರಾಮದ ಯುವಕ ಅಭಿಷೇಕ್ ಕೊನೆಯುಸಿರೆಳೆದಿದ್ದರು.
ಇವರ ಬೆನ್ನಲ್ಲೇ ಹಾಸನ ತಾಲೂಕಿನ ಅಗಲಹಳ್ಳಿ ಕೊಪ್ಪಲು ಗ್ರಾಮದ ನವೀನ್ ಕುಮಾರ್ (21) ಹೃದಯಾಘಾತದಿಂದ ನಿಧನರಾಗಿದ್ದರು. ಹೊಳೆನರಸೀಪುರ ಪಟ್ಟಣದ ನಿವಾಸಿ ಚನ್ನಕೇಶವ ಹಾಗೂ ಜ್ಯೋತಿ ದಂಪತಿಯ ಪುತ್ರ ನಿಶಾಂತ್ (19) ಬೆಂಗಳೂರಿನ ಜೆಪಿ ನಗರದಲ್ಲಿ ಸಾವನ್ನಪ್ಪಿದ್ದರು. ಈಗ ಇವರ ಬೆನ್ನಲ್ಲೇ ಇಂದು ಚೇತನ್ (35) ಹಾಗು ನಿಶಾದ್ ಅಹಮ್ಮದ್ (35) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.