ಶಿವಮೊಗ್ಗ : ಶಿವಮೊಗ್ಗದಲ್ಲಿ ಇದೀಗ ಮತ್ತೆ ಕಾಡಾನೆಗಳ ಉಪಟಳ ಆರಂಭವಾಗಿದ್ದು, ಇಂದು ತೋಟ ಕಾಯುತ್ತಿದ್ದ ಕೃಷಿ ಕಾರ್ಮಿಕನ ಮೇಲೆ ಕಾಡಾನೆ ದಾಳಿ ಮಾಡಿದ್ದು, ಸ್ಥಳದಲ್ಲಿ ಆತ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ವನ್ಯಜೀವಿ ವಿಭಾಗದ ಪುರದಾಳ್ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.
ಹನುಮಂತಪ್ಪ ಮೃತದುರ್ದೈವಿ ಎಂದು ಹೇಳಲಾಗುತ್ತಿದ್ದು ಹನುಮಂತಪ್ಪ ಮೂಲತಹ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನವನೆಂದು ಹೇಳಲಾಗುತ್ತಿದೆ. ಈತ ಕಳೆದ 5 ವರ್ಷಗಳಿಂದ ಈ ಒಂದು ತೋಟದಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಕೃಷ್ಣ ಪಟಗಾರ ಮಾತನಾಡಿ, ಹನುಮಂತಪ್ಪ ಅವರು ಅಶ್ಫಾಕ್ ಅಹ್ಮದ್ ಖಾನ್ ಒಡೆತನದ ಎಸ್ಟೇಟ್ನಲ್ಲಿ ಕೆಲಸ ಮುಗಿಸಿ ಆಲದೇವರ ಹೊಸೂರಿನ ಮನೆಗೆ ವಾಪಸಾಗುತ್ತಿದ್ದಾಗ ಆನೆ ದಾಳಿ ಮಾಡಿದೆ. ಶವಪರೀಕ್ಷೆ ನಡೆಸಲಾಗಿದ್ದು, ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.
ಆನೆಗಳು ಪದೇ ಪದೇ ನಾಡಿಗೆ ಬಂದು ಬಾಳೆ, ಭತ್ತ, ಅಡಕೆ, ತೆಂಗು ಮುಂತಾದ ಬೆಳೆಗಳನ್ನು ಹಾನಿ ಮಾಡುತ್ತಿವೆ. ಆನೆಗಳ ಹಾವಳಿಯನ್ನು ನಿಯಂತ್ರಿಸಲು ಅರಣ್ಯ ಅಧಿಕಾರಿಗಳಿಗೆ ಸಾಕಷ್ಟು ಮನವಿ ಸಲ್ಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.