ಶಿವಮೊಗ್ಗ: ಇಂದು ಜಿಲ್ಲೆಯ ಸಾಗರ ತಾಲ್ಲೂಕಿನ ಕಿರತೋಡಿ-ಚಿಮಲೆ ಗ್ರಾಮದ ಸತೀಶ ಅವರ ಅನುಮಾನಸ್ಪದ ಸಾವಿನ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿ ಗ್ರಾಮಸ್ಥರು ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ನೇತೃತ್ವದಲ್ಲಿ ಡಿವೈಎಸ್ಪಿ ಕಚೇರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಕಳೆದ 14 ತಿಂಗಳ ಹಿಂದೆ ಚಿಮಲೆ ಗ್ರಾಮದ ಸತೀಶ್ ಎಂಬುವವರ ಕೊಲೆ ಆಗಿದೆ. ಸತೀಶ್ ಅವರ ಶವವನ್ನು ನಾಲ್ಕು ಅಡಿ ಎತ್ತರದಲ್ಲಿ ನೇತು ಹಾಕಲಾಗಿತ್ತು. ಅವರು ಧರಿಸಿದ್ದ ಅಂಗಿಯಲ್ಲಿ ರಕ್ತದ ಕಲೆಯಿತ್ತು. ಸತೀಶ್ ಅವರು ಸಾಯುವುದಕ್ಕಿಂತ ಮೊದಲ ನಾಲ್ಕೈದು ಜನರ ಬಳಿ ಫೋನ್ನಲ್ಲಿ ಮಾತನಾಡಿ ತಮ್ಮ ನೋವು ತೋಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಸತೀಶ್ ಅವರದ್ದು ಆತ್ಮಹತ್ಯೆ ಎಂದು ಹೇಳಲಾಗುತ್ತಿದ್ದು, ಇದನ್ನು ಗ್ರಾಮಸ್ಥರು ಹಾಗೂ ಸತೀಶ್ ಅವರ ಪತ್ನಿ ಅಲ್ಲಗಳೆಯುತ್ತಿದ್ದಾರೆ ಎಂದು ಹೇಳಿದರು.
ಸತೀಶ್ ಅವರ ಕೊಲೆಗೆ ಸಂಬಂಧಿಸಿದಂತೆ ಗ್ರಾಮಸ್ಥರಿಗೆ ನಾಲ್ಕೈದು ಜನರ ಮೇಲೆ ಅನುಮಾನವಿದ್ದು ಅದನ್ನು ಡಿವೈಎಸ್ಪಿ ಅವರಿಗೆ ತಿಳಿಸಲಾಗಿದೆ. ಡಿವೈಎಸ್ಪಿ ಅವರ ತನಿಖಾ ವಿಧಾನ ಅತ್ಯಂತ ಸೂಕ್ಷ್ಮವಾಗಿದ್ದು ಇದನ್ನು ಅವರು ಬೇಧಿಸುವ ವಿಶ್ವಾಸವಿದೆ. ಸತೀಶ್ ಅವರ ಸಾವಿನ ತನಿಖೆಗಾಗಿ ಡಿವೈಎಸ್ಪಿ ವಿಶೇಷ ತಂಡ ರಚಿಸುವ ಭರವಸೆ ನೀಡಿದ್ದು, ನೊಂದ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಇದೆ. ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ನೇತೃತ್ವದಲ್ಲಿ ಸತೀಶ್ ಅವರನ್ನು ಕೊಲೆ ಮಾಡಿರುವ ಕೊಲೆಪಾತಕರಿಗೆ ಶಿಕ್ಷೆ ಆಗುತ್ತದೆ ಎನ್ನುವ ವಿಶ್ವಾಸ ಇದೆ ಎಂದು ತಿಳಿಸಿದರು.
ಕರೂರು ಭಾರಂಗಿ ಹೋಬಳಿಯಲ್ಲಿ ಅಪರಾಧ ಕೃತ್ಯಗಳು ಜಾಸ್ತಿಯಾಗುತ್ತಿದೆ. ಐದು ವರ್ಷದ ಹಿಂದೆ ತುಮರಿಯಲ್ಲಿ ಚಿನ್ನಬೆಳ್ಳಿ ಕೆಲಸ ಮಾಡುತ್ತಿದ್ದ ಸುಂದರ ಶೇಟ್ ಮತ್ತು ದಂಪತಿಗಳನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈತನಕ ಕೊಲೆ ಮಾಡಿದವರನ್ನು ಪತ್ತೆ ಹಚ್ಚಿಲ್ಲ. ಅಂಬಾರಗೋಡ್ಲು ಸಮೀಪ ಸಿದ್ದಯ್ಯ ಸ್ವಾಮಿಯವರನ್ನು ಕೊಲೆ ಮಾಡಲಾಗಿದೆ. ಕರೂರು ಭಾರಂಗಿ ಹೋಬಳಿ ಭಾಗದಲ್ಲಿ ಮೂರ್ನಾಲ್ಕು ಕೊಲೆಗಳು ಆಗಿದೆ. ಈ ಭಾಗದ ಜನರು ಭಯಭೀತರಾಗಿದ್ದಾರೆ. ಸತೀಶ್ ಕೊಲೆ ನಡೆದು ಹದಿನಾಲ್ಕು ತಿಂಗಳು ಆಗಿದೆ. ತಕ್ಷಣ ಕೊಲೆಗಾರರನ್ನು ಬಂಧಿಸಿ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ. ಶೇಖರಪ್ಪ, ಸವಿತಾ ಸತೀಶ್, ಲಲಿತಾ, ಗೌರಿ, ಸವಿತಾ, ರುಕ್ಮಿಣಿ, ಸೌಂದರ್ಯ, ಪುರುಷೋತ್ತಮ, ಸೌಭಾಗ್ಯ ಎಸ್., ಧನ್ವಿಕ್, ಪ್ರಶಾಂತ್ ಇತರರು ಉಪಸ್ಥಿತರಿದ್ದರು.
ಅಹಮದಾಬಾದ್ ವಿಮಾನ ದುರಂತ: ಮೃತಪಟ್ಟವರಿಗೆ ಸಾಗರ ಬ್ಲಾಕ್ ಕಾಂಗ್ರೆಸ್ ಶ್ರದ್ಧಾಂಜಲಿ ಸಲ್ಲಿಕೆ
BREAKING : ಬೆಳಗಾವಿಯಲ್ಲಿ ಭೀಕರ ಅಪಘಾತ : ಗಾಯಗೊಂಡವರ ರಕ್ಷಣೆಗೆ ಮುಂದಾಗಿದ್ದ ವ್ಯಕ್ತಿ ಸೇರಿ ಮೂವರು ಸಾವು