ಕೋಲ್ಕತ್ತಾ : ಭಾನುವಾರ ರಾತ್ರಿ ಎರಡು ಸಮುದಾಯಗಳ ನಡುವಿನ ಹಿಂಸಾತ್ಮಕ ಘರ್ಷಣೆಯ ನಂತರ ಕೋಲ್ಕತ್ತಾದ ಎಕ್ಬಾಲ್ಪೋರ್ ಪ್ರದೇಶದಲ್ಲಿ ಇಂದಿನಿಂದ ಅಕ್ಟೋಬರ್ 12 ರವರೆಗೆ ಮೂರು ದಿನಗಳ ಸೆಕ್ಷನ್ 144 ಅನ್ನು ವಿಧಿಸಲಾಗಿದೆ. ಐದು ಅಥವಾ ಅದಕ್ಕಿಂತ ಹೆಚ್ಚು ಜನರ ದೊಡ್ಡ ಸಭೆಗಳನ್ನು ನಿಷೇಧಿಸಲಾಗಿದೆ.
ಆದೇಶದ ಪ್ರಕಾರ, ಯಾವುದೇ ಮಾರಣಾಂತಿಕ ಅಥವಾ ಇತರ ಅಪಾಯಕಾರಿ ಆಯುಧಗಳೊಂದಿಗೆ ಐದು ಅಥವಾ ಅದಕ್ಕಿಂತ ಹೆಚ್ಚು ಜನರನ್ನು ಒಟ್ಟುಗೂಡಿಸಿದರೆ ತಕ್ಷಣದ ಬಂಧನಕ್ಕೆ ಕರೆ ನೀಡಲಾಗುತ್ತದೆ. ಸದರಿ ಪ್ರದೇಶದಲ್ಲಿ ಶಾಂತಿ ಕದಡುವ ಮತ್ತು ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟು ಮಾಡುವ ಯಾರಾದರೂ ಬಂಧನವನ್ನು ಎದುರಿಸಬೇಕಾಗುತ್ತದೆ.
ಭಾನುವಾರ ಕೋಲ್ಕತ್ತಾದ ಮೊಮಿನ್ಪುರ ಪ್ರದೇಶದಲ್ಲಿ ಎರಡು ಸಮುದಾಯಗಳ ನಡುವಿನ ಹಿಂಸಾತ್ಮಕ ಘರ್ಷಣೆ ನಡೆದಿತ್ತು. ಈ ವೇಳೆ ಹಲವು ವಾಹನಗಳನ್ನು ಧ್ವಂಸಗೊಳಿಸಲಾಗಿತ್ತು. ಜನರು ಕಲ್ಲು ತೂರಾಟ ನಡೆಸಿದ್ದರು.
ಪೊಲೀಸರ ಪ್ರಕಾರ, ಭಾನುವಾರ ರಾತ್ರಿ ಮಿಲಾದ್ ಅನ್-ನಬಿಗೆ ಹಾಕಲಾಗಿದ್ದ ಧಾರ್ಮಿಕ ಧ್ವಜಗಳನ್ನು ಕಿತ್ತುಹಾಕಿದ ನಂತರ ಹಿಂಸಾಚಾರ ಸಂಭವಿಸಿದೆ. ಘಟನಾ ಸಂಬಂಧ 38 ಜನರನ್ನು ಬಂಧಿಸಲಾಗಿದೆ. ಹೆಚ್ಚುವರಿಯಾಗಿ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ.
West Bengal | Section 144 has been imposed in Ekbalpur area from 10 October to 12 October looking at the ongoing law and order situation. pic.twitter.com/ctBHOKDElb
— ANI (@ANI) October 10, 2022
ಇಂದು ಬೆಳಗ್ಗೆ ಮಜುಂದಾರ್ ಹಿಂಸಾಚಾರ ಪೀಡಿತ ಪ್ರದೇಶಕ್ಕೆ ತೆರಳುತ್ತಿದ್ದಾಗ ಪೊಲೀಸರು ತಡೆದು ಬಂಧಿಸಿದ್ದಾರೆ.
ಬಿಜೆಪಿಯ ಸಾಮಾಜಿಕ ಮಾಧ್ಯಮ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಘರ್ಷಣೆಗಳ ಕುರಿತು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರವನ್ನು ಟ್ವಿಟರ್ನಲ್ಲಿ ಟೀಕಿಸಿದ್ದಾರೆ. ಅವರ ಆಡಳಿತದಲ್ಲಿ ಕೋಮು ಗಲಭೆಗಳು ಸಾಮಾನ್ಯವಾಗಿದೆ ಎಂದು ಆರೋಪಿಸಿದ್ದಾರೆ.
ನಿನ್ನೆ ರಾತ್ರಿ ಹಿಂಸಾಚಾರ ಉಲ್ಬಣಗೊಳ್ಳುತ್ತಿದ್ದಂತೆ, ಹೆಚ್ಚಿನ ಸಂಖ್ಯೆಯ ಜನರು ಎಕ್ಬಾಲ್ಪುರ ಪೊಲೀಸ್ ಠಾಣೆಯನ್ನು ಸುತ್ತುವರೆದಿದ್ದಾರೆ. ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಹಿಂಸಾಚಾರದಲ್ಲಿ ಕಚ್ಛಾ ಬಾಂಬ್ ದಾಳಿಗೊಳಗಾದ ಉಪ ಪೊಲೀಸ್ ಆಯುಕ್ತ ಸೌಮ್ಯಾ ರಾಯ್ ಸೇರಿದಂತೆ ಹಲವಾರು ಪೊಲೀಸರು ಗಾಯಗೊಂಡಿದ್ದಾರೆ. ರಾಯ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.