ಬೆಂಗಳೂರು: ಕಳೆದ ವಾರ ತಾವು ಕೈಗೊಂಡ ಜಪಾನ್ ಭೇಟಿಯಿಂದಾಗಿ ಆ ದೇಶದ ವಿವಿಧ ಉದ್ಯಮಗಳು ರಾಜ್ಯದಲ್ಲಿ 4,000 ಕೋಟಿ ರೂ.ಗಳಿಗೂ ಹೆಚ್ಚು ಬಂಡವಾಳ ಹೂಡಿಕೆ ಮಾಡುವುದು ಖಾತ್ರಿಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಅವರು ಸೋಮವಾರ ತಮ್ಮ ನಿವಾಸದಲ್ಲಿ ಭೇಟಿಯಾದ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.
ಹೂಡಿಕೆ ಆಕರ್ಷಿಸುವ ದೃಷ್ಟಿಯಿಂದ ಜಪಾನ್ಗೆ ಇದು ತಮ್ಮ ಎರಡನೇ ಭೇಟಿಯಾಗಿದೆ. ಜಪಾನಿನ ಉದ್ಯಮಗಳ ಪ್ರಮುಖರು ಸಾಂಪ್ರದಾಯಿಕ ಆಲೋಚನೆ ಉಳ್ಳವರಾಗಿದ್ದು, ಸಾಕಷ್ಟು ದೀರ್ಘವಾಗಿ ಯೋಚಿಸಿ ನಿರ್ಧಾರಕ್ಕೆ ಬರುತ್ತಾರೆ. ಇವತ್ತು ದೇಶದಲ್ಲಿರುವ ಜಪಾನಿ ಉದ್ದಿಮೆಗಳಲ್ಲಿ ಶೇಕಡ ೫೦ರಷ್ಟು ಕಂಪನಿಗಳು ಕರ್ನಾಟಕದಲ್ಲೇ ಇವೆ. ಹಿಂದೆ ತಾವು ಜಪಾನ್ ಮತ್ತು ದಕ್ಷಿಣ ಕೊರಿಯಾಗೆ ಭೇಟಿ ನೀಡಿದ್ದಾಗ 6,500 ಕೋಟಿ ರೂ. ಹೂಡಿಕೆಯನ್ನು ಸೆಳೆಯಲಾಗಿತ್ತು ಎಂದು ಅವರು ವಿವರಿಸಿದ್ದಾರೆ.
ಈ ಸಲದ ಭೇಟಿಯಲ್ಲಿ ಹೋಂಡಾ ಮುಂತಾದ ಕಂಪನಿಗಳು ರಾಜ್ಯದಲ್ಲಿ ವಿಸ್ತರಣೆ, ಮುಕುಂದ್ ಸುಮಿ ಸ್ಟೀಲ್ಸ್ ಕಂಪನಿ ಜತೆ ಸಹಭಾಗಿತ್ವ ಮುಂತಾದ ವಿಚಾರ ಕುರಿತು ಚರ್ಚಿಸಲಾಗಿದೆ. ಏತನ್ಮಧ್ಯೆ, ಅಮೆರಿಕವು ಎಲೆಕ್ಟ್ರಾನಿಕ್ ಮತ್ತು ಫಾರ್ಮಾ ಉತ್ಪನ್ನಗಳನ್ನು ಬಿಟ್ಟು ಭಾರತದ ಉಳಿದ ಉತ್ಪನ್ನಗಳ ಮೇಲೆ ಶೇಕಡ 50ರಷ್ಟು ಆಮದು ಸುಂಕ ವಿಧಿಸಿದೆ. ಇದೊಂದು ಬಿಕ್ಕಟ್ಟನ್ನು ಸೃಷ್ಟಿಸಿದೆ. ಇಂತಹ ಸಂದರ್ಭದಲ್ಲಿ ಹೂಡಿಕೆದಾರರು ನಿರ್ಧಾರಕ್ಕೆ ಬರುವುದು ಕಷ್ಟವಾಗುತ್ತದೆ. ಆದರೂ ಈ ಸಲದ ಭೇಟಿಯಲ್ಲಿ 4,000 ಕೋಟಿ ರೂ. ಹರಿದು ಬರಲಿರುವುದು ಸಮಾಧಾನದ ಸಂಗತಿಯಾಗಿದೆ ಎಂದು ಅವರು ನುಡಿದಿದ್ದಾರೆ.
ಕೆಲವು ಕಂಪನಿಗಳು ರಾಜ್ಯದಲ್ಲಿ ಕಡಿಮೆ ಬಂಡವಾಳವನ್ನೇ ಹೂಡಬಹುದು. ಆದರೆ ಇವೆಲ್ಲವೂ ನಮ್ಮ ಕೈಗಾರಿಕಾ ಕಾರ್ಯ ಪರಿಸರದ ಮೌಲ್ಯವರ್ಧನೆ ಮಾಡುತ್ತವೆ. ಜೊತೆಗೆ, ಉದ್ದಿಮೆದಾರರು ಹೂಡಿಕೆಯ ವಿಚಾರಕ್ಕೆ ಬಂದಾಗ ಶಾಂತಿಯಿಂದ ಕೂಡಿರುವ ವಾತಾವರಣವನ್ನು ಇಷ್ಟಪಡುತ್ತಾರೆ. ಇದನ್ನು ಕೂಡ ಎಲ್ಲರೂ ಗಮನಕ್ಕೆ ತೆಗೆದುಕೊಳ್ಳಬೇಕು. ದೇಶದ ಯಾವ ಭಾಗದಲ್ಲೂ ಬಂಡವಾಳ ಹೂಡಿಕೆಗೆ ಪ್ರತಿಕೂಲ ಎನಿಸುವಂತಹ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಪಾಟೀಲ ಆಶಿಸಿದ್ದಾರೆ.
BIG NEWS : ದಸರಾ ಉದ್ಘಾಟನೆ, ಮುಲ್ಲಾಗಳ ಪ್ರಕಾರ ನಡೆಯುತ್ತಿದೆ : ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ
ಮಾನವೀಯತೆ ಮೆರೆದ ಜಡ್ಜ್: ವೃದ್ಧನ ಬಳಿ ತೆರಳಿ ತೀರ್ಪು, ಸ್ಥಳದಲ್ಲೇ ಪರಿಹಾರಕ್ಕೆ ಆದೇಶ